ಬೆಂಗಳೂರು: ಹೈಕಮಾಂಡ್ ಜೊತೆಗಿನ ಮುಂಚಿನ ಒಪ್ಪಂದದಂತೆಯೇ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಅವರ ಮಾರ್ಗದರ್ಶನದಲ್ಲೇ ಅಹಿಂದ ಧ್ವಜವನ್ನು ನಾನು ಮುಂದೆ ಕೊಂಡೊಯ್ಯಲಿದ್ದೇನೆ ಎಂದು ಹಿರಿಯ ಕಾಂಗ್ರೆಸ್ ನಾಯಕ ಸತೀಶ್ ಜಾರಕಿಹೊಳಿ ಪ್ರಕಟಿಸಿದ್ದಾರೆ.
ಬೆಂಗಳೂರಿನಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರಾಜ್ಯ ರಾಜಕೀಯದ ಇತ್ತೀಚಿನ ವಿದ್ಯಮಾನಗಳು ಹಾಗೂ ನಾಯಕತ್ವ ಬದಲಾವಣೆಯ ಕುರಿತು ಮುಕ್ತವಾಗಿ ಮಾತನಾಡಿದರು.
ಹೊಸ ಅಹಿಂದ ನಾಯಕ ಉದಯವಾಗಲೇಬೇಕು
“ಇನ್ನು ಎರಡು ವರ್ಷಗಳ ನಂತರವಾದರೂ ಸಿದ್ದರಾಮಯ್ಯನವರು ಸಿಎಂ ಸ್ಥಾನದಿಂದ ಇಳಿಯಲೇಬೇಕಿತ್ತಲ್ವಾ? ಬದಲಾಗುವ ಎಲ್ಲಾ ಸಂದರ್ಭಗಳಿಗೂ ನಾವು ಸದಾ ಸಿದ್ಧರಿರಬೇಕು. ಅಹಿಂದ ವರ್ಗದಲ್ಲಿ ಸುಮಾರು 500 ಜಾತಿಗಳಿವೆ. ಯಾರಾದರೂ ಒಬ್ಬರು ಅಹಿಂದ ಧ್ವಜವನ್ನು ಮುಂದೆ ಕೊಂಡೊಯ್ಯಲೇಬೇಕು, ಆ ಜವಾಬ್ದಾರಿಯನ್ನು ನಾನು ತೆಗೆದುಕೊಳ್ಳುತ್ತೇನೆ. ರಾಜ್ಯದಲ್ಲಿ ಸದ್ಯ ಅಂತಹ ವ್ಯವಸ್ಥೆಯಿದ್ದು, ಹೊಸ ಅಹಿಂದ ನಾಯಕ ಉದಯವಾಗಲೇಬೇಕಿದೆ” ಎಂದು ಸತೀಶ್ ಜಾರಕಿಹೊಳಿ ಆಶಯ ವ್ಯಕ್ತಪಡಿಸಿದರು.
ಮುಂದುವರಿದು, “ನಾಯಕತ್ವ ಬದಲಾವಣೆಯ ಕುರಿತು ಎಲ್ಲಾ ಮಾತುಕತೆಗಳು ದೆಹಲಿ ಮಟ್ಟದಲ್ಲೇ ನಡೆದಿವೆ. ಬೆಂಗಳೂರಿನಲ್ಲಿ ಈ ಬಗ್ಗೆ ಏನೂ ಆಗಿಲ್ಲ. ಈ ಹಿಂದೆ ನಮ್ಮನ್ನು ಯಾರೂ ಕೇಳಿರಲಿಲ್ಲ. ಈಗ ಸಿದ್ದರಾಮಯ್ಯ ಅವರೇ ಒಪ್ಪಂದದ ಪ್ರಕಾರ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದಿದ್ದಾರೆ” ಎಂದು ಸ್ಪಷ್ಟಪಡಿಸಿದರು.
ಸಹಿ ಸಂಗ್ರಹ ವರದಿಗಳು ಸಂಪೂರ್ಣ ಸುಳ್ಳು
ಸಿದ್ದರಾಮಯ್ಯ ವಿರುದ್ಧ ಶಾಸಕರಿಂದ ಸಹಿ ಸಂಗ್ರಹ ಮಾಡಲಾಗುತ್ತಿದೆ ಎಂಬ ವರದಿಗಳನ್ನು ತಳ್ಳಿಹಾಕಿದ ಅವರು, “ಇದೆಲ್ಲಾ ಸಂಪೂರ್ಣ ಸುಳ್ಳು, ಇದರ ಬಗ್ಗೆ ಚರ್ಚೆಯೇ ಬೇಡ. ಸಾಮಾಜಿಕ ಜಾಲತಾಣಗಳಲ್ಲಿ ಯಾರೋ ಹಾಕಿರುವ ಪೋಸ್ಟ್ಗಳಿಗೆ ಮಹತ್ವ ಕೊಡುವ ಅಗತ್ಯವಿಲ್ಲ. ಯಾವುದೇ ಸಹಿ ಸಂಗ್ರಹ ನಡೆದಿಲ್ಲ. ಒಂದು ವೇಳೆ 37 ಶಾಸಕರು ಸಿದ್ದರಾಮಯ್ಯ ವಿರುದ್ಧ ಸಹಿ ಹಾಕಿದ್ದಾರೆ ಎನ್ನುವುದಾದರೆ, ಇನ್ನುಳಿದ 100 ಶಾಸಕರು ಎಲ್ಲಿಗೆ ಹೋದರು?” ಎಂದು ಪ್ರಶ್ನಿಸುವ ಮೂಲಕ ವದಂತಿಗಳಿಗೆ ತೆರೆ ಎಳೆದರು.
ರಾಹುಲ್ ಗಾಂಧಿ ಮಾತು ಪಾಲಿಸಿದ ಸಿದ್ದರಾಮಯ್ಯ
“ಹೈಕಮಾಂಡ್ ಹೇಳಿದ ತಕ್ಷಣ ಸಿದ್ದರಾಮಯ್ಯ ರಾಜೀನಾಮೆ ನೀಡಿದ್ದಾರಾ?” ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, “ರಾಹುಲ್ ಗಾಂಧಿಯವರು ಹೇಳಿದರೆ ತಕ್ಷಣವೇ ರಾಜೀನಾಮೆ ನೀಡುವುದಾಗಿ ಸಿದ್ದರಾಮಯ್ಯನವರು ಮೊದಲೇ ಹೇಳಿದ್ದರು. ಅದರಂತೆ ರಾಹುಲ್ ಗಾಂಧಿ ಸೂಚಿಸಿದ ಕೇವಲ ಎರಡು ದಿನಗಳಲ್ಲಿ ಸಿದ್ದರಾಮಯ್ಯ ತಮ್ಮ ಸ್ಥಾನ ಬಿಟ್ಟುಕೊಟ್ಟಿದ್ದಾರೆ” ಎಂದರು.
ಕೆಪಿಸಿಸಿ ಅಧ್ಯಕ್ಷ ಸ್ಥಾನದ ಆಯ್ಕೆ ಹೈಕಮಾಂಡ್ ಹೆಗಲಿಗೆ
ಮುಂದಿನ ಕೆಪಿಸಿಸಿ ಅಧ್ಯಕ್ಷರ ಆಯ್ಕೆಯ ಕುರಿತು ಮಾತನಾಡಿದ ಅವರು, “ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಇಬ್ಬರೂ ದೆಹಲಿಗೆ ತೆರಳಿ ಈ ಬಗ್ಗೆ ಚರ್ಚಿಸಿ ಬರುತ್ತಾರೆ. ವಿಶೇಷವಾಗಿ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬಗ್ಗೆ ಹೈಕಮಾಂಡ್ ಜೊತೆ ಮಾತುಕತೆ ನಡೆಸಲಿದ್ದಾರೆ. ಅವರು ಅಲ್ಲಿಂದ ಬಂದು ಏನು ಸಂದೇಶ ನೀಡುತ್ತಾರೋ ಅದರ ಮೇಲೆ ಮುಂದಿನ ತೀರ್ಮಾನ ಅವಲಂಬಿತವಾಗಿದೆ” ಎಂದು ತಿಳಿಸಿದರು.
ಇದೇ ವೇಳೆ ಜಿ. ಪರಮೇಶ್ವರ್ ಅವರಿಗೆ ಸಿಎಂ ಆಗಲು ಅವಕಾಶ ಸಿಗಲಿಲ್ಲವೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, “ಎಲ್ಲರಿಗೂ ಮುಖ್ಯಮಂತ್ರಿ ಅಥವಾ ಕೆಪಿಸಿಸಿ ಅಧ್ಯಕ್ಷರಾಗಲು ಸಾಧ್ಯವಿಲ್ಲ. ರೇಸ್ನಲ್ಲಿ ಬಹಳಷ್ಟು ಜನರಿದ್ದಾರೆ, ಆದರೆ ಎಲ್ಲರಿಗೂ ಅಧಿಕಾರ ಸಿಗಲು ಸಾಧ್ಯವಿಲ್ಲ” ಎಂದು ಸತೀಶ್ ಜಾರಕಿಹೊಳಿ ಮಾರ್ಮಿಕವಾಗಿ ನುಡಿದರು.








