ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಹೈಕಮಾಂಡ್ ಮಟ್ಟದ ಸಂಚಲನ ಮೂಡುತ್ತಿರುವ ಬೆನ್ನಲ್ಲೇ, ಇತ್ತ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಂಪುಟ ಸಹೋದ್ಯೋಗಿಯೊಬ್ಬರ ಖಾತೆಗಳಲ್ಲಿ ಮಹತ್ವದ ಮಾರ್ಪಾಡು ಮಾಡಲಾಗಿದೆ. ಮುಖ್ಯಮಂತ್ರಿಗಳ ಸಲಹೆಯ ಮೇರೆಗೆ ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್ ಅವರು ತಕ್ಷಣದಿಂದಲೇ ಜಾರಿಗೆ ಬರುವಂತೆ ಸಚಿವರ ಖಾತೆಗಳನ್ನು ಬದಲಾಯಿಸಿ ಅಧಿಕೃತ ವಿಶೇಷ ರಾಜ್ಯಪತ್ರ ಹೊರಡಿಸಿದ್ದಾರೆ.
ಈ ಹೊಸ ಆದೇಶದ ಅನ್ವಯ ಮುಖ್ಯಮಂತ್ರಿಗಳ ಬಳಿ ಇದ್ದ ಒಂದು ಪ್ರಮುಖ ಖಾತೆಯನ್ನು ಸಚಿವ ಕೆ. ವೆಂಕಟೇಶ್ ಅವರಿಗೆ ವರ್ಗಾಯಿಸಲಾಗಿದೆ.
ಸಿಎಂ ಸಿದ್ದರಾಮಯ್ಯ ಖಾತೆಯಲ್ಲಿ ಕಡಿತ
ಸಚಿವ ಡಿ.ಸುಧಾಕರ್ ಅವರ ನಿಧನದ ಬಳಿಕ, ಅವರಲ್ಲಿದ್ದಂತ ಯೋಜನೆ ಮತ್ತು ಸಾಂಖ್ಯಿಕ ಖಾತೆಯು (Planning and Statistics) ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ವರ್ಗಾವಣೆಯಾಗಿತ್ತು. ಪ್ರಸ್ತುತ ಅವರ ಬಳಿ ಹಣಕಾಸು, ಸಂಪುಟ ವ್ಯವಹಾರಗಳು, ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (DPAR), ಗುಪ್ತಚರ, ಮಾಹಿತಿ, ಯುವ ಸಬಲೀಕರಣ ಮತ್ತು ಕ್ರೀಡೆ, ಪರಿಶಿಷ್ಟ ಪಂಗಡಗಳ ಕಲ್ಯಾಣ (ST Welfare), ಸಹಕಾರ (ಕೃಷಿ ಮಾರುಕಟ್ಟೆ ಹೊರತುಪಡಿಸಿ) ಮತ್ತು ಯಾವುದೇ ಸಚಿವರಿಗೆ ಹಂಚಿಕೆಯಾಗದ ಇಲಾಖೆಗಳು ಇರಲಿವೆ.
ಸಚಿವ ಕೆ. ವೆಂಕಟೇಶ್ಗೆ ಹೆಚ್ಚುವರಿ ಇಲಾಖೆಯ ಹೊಣೆ
ಕ್ಯಾಬಿನೆಟ್ ಸಚಿವರಾದ ಕೆ. ವೆಂಕಟೇಶ್ ಅವರಿಗೆ ಈ ಬದಲಾವಣೆಯಿಂದ ಹೆಚ್ಚಿನ ಜವಾಬ್ದಾರಿ ಸಿಕ್ಕಿದೆ. ಇದುವರೆಗೆ ಕೇವಲ ಪಶುಸಂಗೋಪನೆ ಮತ್ತು ರೇಷ್ಮೆ ಇಲಾಖೆಯನ್ನು ಮುನ್ನಡೆಸುತ್ತಿದ್ದ ಅವರಿಗೆ, ಈಗ ಮುಖ್ಯಮಂತ್ರಿಗಳ ಬಳಿ ಇದ್ದ ಸಚಿವ ಸುಧಾಕರ್ ನಿಧನದ ನಂತ್ರ, ‘ಯೋಜನೆ ಮತ್ತು ಸಾಂಖ್ಯಿಕ’ ಇಲಾಖೆಯನ್ನು ಹೆಚ್ಚುವರಿಯಾಗಿ ವಹಿಸಿಕೊಡಲಾಗಿದೆ. ಇನ್ಮುಂದೆ ಅವರು ಪಶುಸಂಗೋಪನೆ, ರೇಷ್ಮೆ ಜೊತೆಗೆ ಯೋಜನೆ ಮತ್ತು ಸಾಂಖ್ಯಿಕ ಇಲಾಖೆಯ ಸಚಿವರಾಗಿಯೂ ಕಾರ್ಯನಿರ್ವಹಿಸಲಿದ್ದಾರೆ.
ರಾಜ್ಯಪಾಲರಿಂದ ಅಧಿಕೃತ ಅಧಿಸೂಚನೆ ಪ್ರಕಟ
ಭಾರತದ ಸಂವಿಧಾನದ ವಿಧಿ 166ರ ಕ್ಲಾಸ್ (3) ಹಾಗೂ ಕರ್ನಾಟಕ ಸರ್ಕಾರದ (ವ್ಯವಹಾರಗಳ ನಿರ್ವಹಣೆ) ನಿಯಮಗಳು 1977ರ ನಿಯಮ 5 ರ ಅನ್ವಯ ತಮಗೆ ಪ್ರದತ್ತವಾಗಿರುವ ಅಧಿಕಾರವನ್ನು ಬಳಸಿ ರಾಜ್ಯಪಾಲರಾದ ಥಾವರ್ಚಂದ್ ಗೆಹ್ಲೋಟ್ ಅವರು ಈ ಖಾತೆ ಪುನರ್ ಹಂಚಿಕೆಯ ಆದೇಶಕ್ಕೆ ಅಂಕಿತ ಹಾಕಿದ್ದಾರೆ. ಸಿಎಂ ಸಿದ್ದರಾಮಯ್ಯ ದೆಹಲಿ ಪ್ರವಾಸ ಕೈಗೊಳ್ಳುತ್ತಿರುವ ಬೆನ್ನಲ್ಲೇ ರಾಜ್ಯ ಸರ್ಕಾರದಲ್ಲಿ ನಡೆದಿರುವ ಈ ಆಡಳಿತಾತ್ಮಕ ಬದಲಾವಣೆ ರಾಜಕೀಯ ವಲಯದಲ್ಲಿ ಗಮನ ಸೆಳೆದಿದೆ.

ಇನ್ಮುಂದೆ ‘108 ಆಂಬ್ಯುಲನ್ಸ್ ಸೇವೆ’ ರಾಜ್ಯ ಸರ್ಕಾರದ ಸುಪರ್ದಿಯಲ್ಲಿ: ಸಚಿವ ದಿನೇಶ್ ಗುಂಡೂರಾವ್








