ಶಿವಮೊಗ್ಗ: ಜಿಲ್ಲೆಯ ಹೊಸನಗರ ತಾಲೂಕಿನ ನಗರ ಹೋಬಳಿ ವ್ಯಾಪ್ತಿಯ ಬ್ರಾಹ್ಮಣತರುವಿ ಗ್ರಾಮದಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಸರ್ಕಾರಿ ಜಮೀನು, ದನಗಳ ಮುಫತ್ತು ಹಾಗೂ ಕೆಪಿಸಿ ಲಿಮಿಟೆಡ್ಗೆ ಸೇರಿದ ಜಾಗವನ್ನು ಜೆಸಿಬಿ ಮತ್ತು ಹಿಟಾಚಿ ಯಂತ್ರಗಳ ಮೂಲಕ ಕಾನೂನುಬಾಹಿರವಾಗಿ ಒತ್ತುವರಿ ಮಾಡಿಕೊಂಡಿರುವ ಗಂಭೀರ ಆರೋಪ ಕೇಳಿಬಂದಿದೆ. ಒತ್ತುವರಿದಾರರು ಜಾಗವನ್ನು ಸಮತಟ್ಟು ಮಾಡುವ ನೆಪದಲ್ಲಿ ನೈಸರ್ಗಿಕವಾಗಿ ಬೆಳೆದಿದ್ದ ಅಮೂಲ್ಯ ಸಸ್ಯಸಂಪತ್ತು ಹಾಗೂ ಕೋಟ್ಯಂತರ ರೂ. ಮೌಲ್ಯದ ಅಕೇಶಿಯಾ ಮರಗಳನ್ನು ಅಕ್ರಮವಾಗಿ ಕಡಿದು ಮಣ್ಣುಪಾಲು ಮಾಡಿದ್ದಾರೆ ಎಂದು ಸ್ಥಳೀಯ ನಿವಾಸಿ ಕೆ.ಎಸ್ ರವಿ ಎಂಬುವರು ತಹಶೀಲ್ದಾರರು, ಅರಣ್ಯಾಧಿಕಾರಿಗಳು, ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ.
ಪ್ರಭಾವಿಗಳಿಂದ ಎಕರೆಗಟ್ಟಲೆ ಜಾಗ ಲೂಟಿ?
ಬ್ರಾಹ್ಮಣತರುವಿ ಗ್ರಾಮದ ಸರ್ವೆ ನಂಬರ್ 148 ರಲ್ಲಿರುವ ದನಗಳ ಮುಫತ್ತಿನ 12-17 ಎಕರೆ ಜಾಗ ಹಾಗೂ ಕೆಪಿಸಿ ಲಿಮಿಟೆಡ್ಗೆ ಸೇರಿದ 8-18 ಎಕರೆ ಜಾಗ, ಅದೇ ರೀತಿ ಸರ್ವೆ ನಂಬರ್ 153 ರ ದನಗಳ ಮುಫತ್ತಿನ 253.20 ಎಕರೆ ಮತ್ತು ಕೆಪಿಸಿ ಲಿಮಿಟೆಡ್ನ 15.25 ಎಕರೆ ಜಮೀನನ್ನು ಪಕ್ಕದ ಜಮೀನುದಾರರಾದ ಕೆ. ಪಿ. ನಾರಾಯಣಮೂರ್ತಿ ಹಾಗೂ ಅವರ ಮಗ ಕೆ. ಎನ್. ಸುನೀಲ್ ಎಂಬುವವರು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ದೂರಿನಲ್ಲಿ ಹೆಸರಿಸಲಾಗಿದೆ.

12 ದಿನಗಳ ಕಾಲ ನಡೆದ ಜೆಸಿಬಿ ಗರ್ಜನೆ, ಪ್ರಕೃತಿ ವಿನಾಶ
ಆರೋಪಿತರು ಸುಮಾರು 3 ಹಿಟಾಚಿ, 4 ಟಿಪ್ಪರ್ ಹಾಗೂ 4 ಟ್ರ್ಯಾಕ್ಟರ್ಗಳನ್ನು ಬಳಸಿ ಸತತ 12 ದಿನಗಳ ಕಾಲ ಹಗಲು-ರಾತ್ರಿ ಎನ್ನದೆ ಕಾನೂನುಬಾಹಿರವಾಗಿ ಕೆಲಸ ನಿರ್ವಹಿಸಿದ್ದಾರೆ. ಸುಮಾರು 20 ಎಕರೆಯಷ್ಟು ಜಾಗದಲ್ಲಿದ್ದ ಸ್ವಾಭಾವಿಕ ಅರಣ್ಯ ಮತ್ತು ಗಿಡಮೂಲಿಕೆಗಳನ್ನು ಯಂತ್ರಗಳ ಮೂಲಕ ಕಿತ್ತೆಸೆದು, ಮಣ್ಣಿನಲ್ಲಿ ಹೂತುಹಾಕಿದ್ದಾರೆ. ಇಷ್ಟೇ ಅಲ್ಲದೆ, ಆ ಇಡೀ ಪ್ರದೇಶಕ್ಕೆ ‘ಆನಂದ ವಿಹಾರ್’ ಎಂದು ಬೋರ್ಡ್ ಹಾಕಿ ಸಾರ್ವಜನಿಕ ಆಸ್ತಿಯನ್ನು ತಮ್ಮ ಖಾಸಗಿ ಸ್ವತ್ತಿನಂತೆ ಬಿಂಬಿಸಿಕೊಳ್ಳಲು ಯತ್ನಿಸಿದ್ದಾರೆ ಎಂಬುದಾಗಿ ದೂರಿನಲ್ಲಿ ಆರೋಪಿಸಲಾಗಿದೆ.
ಅರಣ್ಯ ಇಲಾಖೆ ಅಧಿಕಾರಿಗಳ ಕರ್ತವ್ಯ ಲೋಪ
ಈ ಜಾಗದಲ್ಲಿ ಬೆಳೆದಿದ್ದ ಬೆಲೆಬಾಳುವ ಅಕೇಶಿಯಾ ಮರಗಳನ್ನು ಅಕ್ರಮವಾಗಿ ಕಟಾವು ಮಾಡಿ, ಕದ್ದು ಮಾರಾಟ ಮಾಡಲಾಗಿದೆ. ಈ ಮಹಾ ಲೂಟಿಯ ಕುರಿತು ಸ್ಥಳೀಯರು ಅರಣ್ಯ ಇಲಾಖೆಯ ಫಾರೆಸ್ಟ್ ಗಾರ್ಡ್ ಸುಬ್ರಹ್ಮಣ್ಯ ಅವರ ಗಮನಕ್ಕೆ ತಂದಿದ್ದರೂ ಸಹ, ಅವರು ಯಾವುದೇ ಕ್ರಮ ಕೈಗೊಳ್ಳದೆ ಕರ್ತವ್ಯ ಲೋಪ ಎಸಗಿದ್ದಾರೆ. ಅಧಿಕಾರಿಗಳ ಈ ಮೌನವು ಭೂಮಾಫಿಯಾದೊಂದಿಗೆ ಶಾಮೀಲಾಗಿರುವ ಶಂಕೆಯನ್ನು ಬಲಪಡಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಾರ್ವಜನಿಕ ರಸ್ತೆ ಬಂದ್: ಹಸು-ಕರುಗಳಿಗೆ ಸಂಕಷ್ಟ
ಅನಾದಿ ಕಾಲದಿಂದಲೂ ಇದ್ದ ಗಡಿ ಗುರುತಿಸುವ ಕಲ್ಲುಗಳು, ಬಂಡೆಗಳು ಮತ್ತು ಮಣ್ಣಿನ ಬದುಗಳನ್ನು ನಾಶಪಡಿಸಿರುವ ಒತ್ತುವರಿದಾರರು, ಸ್ಥಳೀಯರು ಹಾಗೂ ಜಾನುವಾರುಗಳು ಕುಡಿಯುವ ನೀರಿಗಾಗಿ ಬಳಸುತ್ತಿದ್ದ ಕೆರೆ/ತೊರೆಗೆ ಹೋಗುವ ದಾರಿಗೆ ಬೇಲಿ ಹಾಕಿ ಸಂಪೂರ್ಣ ನಿರ್ಬಂಧ ವಿಧಿಸಿದ್ದಾರೆ. ಲಿಂಗನಮಕ್ಕಿ ಜಲಾಶಯದ ಹಿನ್ನೀರು ಸುತ್ತುವರಿದಿರುವುದರಿಂದ ಸ್ಥಳೀಯರಿಗೆ ಬೇರೆ ಯಾವುದೇ ಪರ್ಯಾಯ ಮಾರ್ಗವಿಲ್ಲದಂತಾಗಿದ್ದು, ಸಾರ್ವಜನಿಕ ಸಂಪರ್ಕ ಕೊಂಡಿಯಾಗಿದ್ದ ವೀಕ್ಷಕ ರಸ್ತೆಯೂ ಈಗ ಮಾಫಿಯಾದ ಪಾಲಾಗಿದೆ ಎಂಬುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಉನ್ನತ ಮಟ್ಟದ ತನಿಖೆಗೆ ಆಗ್ರಹ
ಈ ಬೃಹತ್ ಹಗರಣದ ಕುರಿತು ತಾಲೂಕು ಕಚೇರಿಗೆ ಅಧಿಕೃತ ದೂರು ಸಲ್ಲಿಕೆಯಾಗಿದ್ದು, ಅರಣ್ಯ ಸಚಿವ ಈಶ್ವರ್ ಖಂಡ್ರೆ, ಶಿವಮೊಗ್ಗ ಜಿಲ್ಲಾಧಿಕಾರಿಗಳು, ಕೆಪಿಸಿ ಮುಖ್ಯ ಕಾರ್ಯದರ್ಶಿಗಳು ಹಾಗೂ ಲೋಕಾಯುಕ್ತರಿಗೂ ಪತ್ರದ ಯಥಾಪ್ರತಿಯನ್ನು ರವಾನಿಸಲಾಗಿದೆ. ಕಂದಾಯ ಮತ್ತು ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಜಂಟಿ ಸಮೀಕ್ಷೆ ನಡೆಸಿ, ಸರ್ಕಾರಿ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು ಮತ್ತು ಪರಿಸರ ನಾಶ ಮಾಡಿದವರ ವಿರುದ್ಧ ಕಠಿಣ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಎಂದು ವಿವಿಧ ಅಧಿಕಾರಿಗಳಿಗೆ ಸಲ್ಲಿಸಿರುವಂತ ದೂರಿನಲ್ಲಿ ಕೆ ಎಸ್ ರವಿ ಅವರು ಒತ್ತಾಯಿಸಿದ್ದಾರೆ.

ಮನೆಗೆ ಭೂಮಿ ಪಡೆದು ಸ್ಟೇಡಿಯಂ ನಿರ್ಮಿಸುವುದು ಎಷ್ಟು ಸರಿ: MLC ಛಲವಾದಿ ನಾರಾಯಣಸ್ವಾಮಿ ಪ್ರಶ್ನೆ
ಶೇ.60 ಕಮಿಷನ್, ಸರಕಾರಿ ನೌಕರರ ಆತ್ಮಹತ್ಯೆ- ಇವು ಸಾಧನೆಯೇ?: ಮಾಜಿ ಶಾಸಕ ರಾಜಕುಮಾರ ಪಾಟೀಲ್ ತೇಲ್ಕೂರ ಪ್ರಶ್ನೆ








