ಬೆಂಗಳೂರು: ರಾಜ್ಯದ ಜನಸಾಮಾನ್ಯರಿಗೆ ನೆಮ್ಮದಿಯ ಸುದ್ದಿ ಸಿಕ್ಕಿದೆ. ಅಟಲ್ ಜೀ ಜನಸ್ನೇಹಿ ಕೇಂದ್ರಗಳ (AJSK) ಮೂಲಕ ನೀಡಲಾಗುವ ವಿವಿಧ ಸಾರ್ವಜನಿಕ ಸೇವೆಗಳನ್ನು ಇನ್ನಷ್ಟು ಪಾರದರ್ಶಕ ಹಾಗೂ ವೇಗಗೊಳಿಸುವ ನಿಟ್ಟಿನಲ್ಲಿ ಕಂದಾಯ ಇಲಾಖೆಯು ತನ್ನ ಸಾಫ್ಟ್ವೇರ್ನಲ್ಲಿ (AJSK NK5) ಮಹತ್ವದ ಬದಲಾವಣೆಗಳನ್ನು ತಂದಿದೆ. ಈ ಕುರಿತು ಅಟಲ್ ಜೀ ಜನಸ್ನೇಹಿ ನಿರ್ದೇಶನಾಲಯವು ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಜ್ಞಾಪನ ಪತ್ರದ ಮೂಲಕ ಆದೇಶ ಹೊರಡಿಸಿದೆ.
ಮೇ 21, 2026 ರಿಂದಲೇ ಜಾರಿಗೆ ಬಂದಿರುವ ಈ ಹೊಸ ವ್ಯವಸ್ಥೆಯ ಪ್ರಮುಖ ಮುಖ್ಯಾಂಶಗಳು ಈ ಕೆಳಗಿನಂತಿವೆ:
1. ‘ಫಿಫೋ’ (First In First Out) ಕಡ್ಡಾಯ ವ್ಯವಸ್ಥೆ:
ಅರ್ಜಿಗಳ ವಿಲೇವಾರಿಯಲ್ಲಿ ತಾರತಮ್ಯ ತಪ್ಪಿಸಲು ‘ಮೊದಲು ಬಂದವರಿಗೆ ಮೊದಲ ಆದ್ಯತೆ’ (FIFO) ನಿಯಮವನ್ನು ಕಡ್ಡಾಯಗೊಳಿಸಲಾಗಿದೆ.
ನಿಯಮ ಹೇಗೆ ಕೆಲಸ ಮಾಡುತ್ತದೆ?: ಉದಾಹರಣೆಗೆ, ಗ್ರಾಮ ಆಡಳಿತ ಅಧಿಕಾರಿ (VAO) ಲಾಗಿನ್ಗೆ ಮೇ 18 ರಂದು ಒಂದು ಜಾತಿ ಪ್ರಮಾಣ ಪತ್ರದ ಅರ್ಜಿ ಬಂದಿದ್ದು, ಅದೇ ಗ್ರಾಮದ ಮತ್ತೊಂದು ಅರ್ಜಿ ಮೇ 19 ರಂದು ಬಂದರೆ; ಅಧಿಕಾರಿಗಳು ಮೊದಲು ಮೇ 18 ರ ಅರ್ಜಿಯನ್ನು ವಿಲೇವಾರಿ ಮಾಡಲೇಬೇಕು. ಅದನ್ನು ಮುಗಿಸಿದ ನಂತರವಷ್ಟೇ ಮೇ 19 ರ ಅರ್ಜಿಯನ್ನು ಪರಿಶೀಲಿಸಲು ಸಾಫ್ಟ್ವೇರ್ ಅನುಮತಿ ನೀಡುತ್ತದೆ.
ಈ ನಿಯಮವು ಗ್ರಾಮ ಆಡಳಿತ ಅಧಿಕಾರಿಗಳು (VAO), ಕಂದಾಯ ನಿರೀಕ್ಷಕರು (RI) ಹಾಗೂ ತಹಶೀಲ್ದಾರ್/ಉಪ ತಹಶೀಲ್ದಾರ್ ಲಾಗಿನ್ಗಳಿಗೂ ಸೇವಾಮೂಲಕ ಅನ್ವಯವಾಗುತ್ತದೆ.
2. ವಿಷಯ ನಿರ್ವಾಹಕರ (Subject Handlers) ಲಾಗಿನ್ ರದ್ದು:
ಸೇವೆಗಳನ್ನು ನೇರ ಹಾಗೂ ಶೀಘ್ರವಾಗಿಸಲು ಎಲ್ಲಾ ಅಟಲ್ ಜೀ ಜನಸ್ನೇಹಿ ಕೇಂದ್ರಗಳ ಸೇವೆಗಳಿಗೆ ಸಂಬಂಧಿಸಿದಂತೆ ‘ವಿಷಯ ನಿರ್ವಾಹಕರ ಲಾಗಿನ್’ ಅನ್ನು ಸಂಪೂರ್ಣವಾಗಿ ತೆಗೆದುಹಾಕಲಾಗಿದೆ. ಆದರೆ, ಹೈದರಾಬಾದ್ ಕರ್ನಾಟಕ (371 ಜೆ), ಎಸ್.ಸಿ/ಎಸ್.ಟಿ ಮೈಗ್ರೆಂಟ್ ಹಾಗೂ ಗೇಣಿರಹಿತ ಪ್ರಮಾಣ ಪತ್ರಗಳಿಗೆ ಮಾತ್ರ ಇದರಿಂದ ವಿನಾಯಿತಿ ನೀಡಲಾಗಿದೆ.
3. ವಾಸಸ್ಥಳ ದೃಢೀಕರಣ (Domicile Certificate) ನಿಯಮ ಸರಳೀಕರಣ:
ವಾಸಸ್ಥಳ ದೃಢೀಕರಣ ಪತ್ರಕ್ಕಾಗಿ ಅರ್ಜಿ ಸಲ್ಲಿಸುವಾಗ ಅರ್ಜಿದಾರರ ಆಧಾರ್ ಕಾರ್ಡ್ನಲ್ಲಿ ಬೇರೆ ರಾಜ್ಯದ ವಿಳಾಸವಿದ್ದರೂ ಸಹ ಅರ್ಜಿಯನ್ನು ಸ್ವೀಕರಿಸಲು ಸಾಫ್ಟ್ವೇರ್ನಲ್ಲಿ ಅವಕಾಶ ಕಲ್ಪಿಸಲಾಗಿದೆ. ಅರ್ಜಿದಾರರು ಈ ಹಿಂದೆ ಕರ್ನಾಟಕದಲ್ಲಿ ವಾಸವಿದ್ದ ವಿಳಾಸವನ್ನು ನಮೂದಿಸಿ ಅರ್ಜಿ ಸಲ್ಲಿಸಬಹುದಾಗಿದೆ.
4. OTP ಬದಲಿಗೆ ODP ವ್ಯವಸ್ಥೆ:
ಅಧಿಕಾರಿಗಳ ಲಾಗಿನ್ ಪ್ರಕ್ರಿಯೆಯನ್ನು ಸುಲಭಗೊಳಿಸಲು ತಹಶೀಲ್ದಾರ್, ಉಪ ತಹಶೀಲ್ದಾರ್ ಹಾಗೂ ಉಪವಿಭಾಗಾಧಿಕಾರಿಗಳ (AC) ಲಾಗಿನ್ಗಳಲ್ಲಿ ಪ್ರತಿ ಬಾರಿ ಬಳಸುವ OTP (One Time Password) ಬದಲಿಗೆ, ಇನ್ಮುಂದೆ ದಿನಕ್ಕೊಂದೇ ಪಾಸ್ವರ್ಡ್ ಇರುವ ODP (One Day Password) ವ್ಯವಸ್ಥೆಯನ್ನು ಅಳವಡಿಸಲಾಗಿದೆ.
ಗಮನಿಸಿ: ಈ ಎಲ್ಲಾ ಜನಸ್ನೇಹಿ ಬದಲಾವಣೆಗಳು ಈಗಾಗಲೇ ಮೇ 21, 2026 ರಿಂದಲೇ ಸಾಫ್ಟ್ವೇರ್ನಲ್ಲಿ ಅನುಷ್ಠಾನಕ್ಕೆ ಬಂದಿದ್ದು, ಅರ್ಜಿಗಳ ವಿಲೇವಾರಿ ಪ್ರಕ್ರಿಯೆ ಇನ್ಮುಂದೆ ಮತ್ತಷ್ಟು ಚುರುಕುಗೊಳ್ಳಲಿದೆ ಎಂದು ಇಲಾಖೆ ತಿಳಿಸಿದೆ.









