ಬೆಂಗಳೂರು: “ದೆಹಲಿಯಲ್ಲಿರುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಮಂಗನ ಮಾದರಿಯಲ್ಲಿ ವರ್ತಿಸುತ್ತಿದ್ದು, ಕರ್ನಾಟಕದ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಎಂಬ ಎರಡು ಬೆಕ್ಕುಗಳ ನಡುವೆ ಜಗಳ ಹಚ್ಚುತ್ತಿದ್ದಾರೆ,” ಎಂದು ಬಿಜೆಪಿ ಕರ್ನಾಟಕ ರಾಜ್ಯ ಉಸ್ತುವಾರಿ ಹಾಗೂ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಧಾಮೋಹನ್ ದಾಸ್ ಅಗ್ರವಾಲ್ ತೀವ್ರವಾಗಿ ಆರೋಪಿಸಿದ್ದಾರೆ.
ಮಲ್ಲೇಶ್ವರಂನಲ್ಲಿರುವ ಬಿಜೆಪಿ ರಾಜ್ಯ ಕಾರ್ಯಾಲಯ ‘ಜಗನ್ನಾಥ ಭವನ’ದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ರಾಜ್ಯ ಕಾಂಗ್ರೆಸ್ ಸರ್ಕಾರದ ಆಂತರಿಕ ಬಿಕ್ಕಟ್ಟು ಮತ್ತು ಆಡಳಿತ ವೈಫಲ್ಯವನ್ನು ಕಟುವಾಗಿ ಟೀಕಿಸಿದರು.
ಸಿಎಂ ಆಗಲು ಖರ್ಗೆ ಕಾಯುತ್ತಿದ್ದಾರೆ!
“ಇಲ್ಲಿ ಸಿದ್ದರಾಮಯ್ಯ ಮತ್ತು ಶಿವಕುಮಾರ್ ಪರಸ್ಪರ ಜಗಳ ಮಾಡಿಕೊಂಡು ಇಬ್ಬರೂ ಮುಳುಗಲಿ, ಆ ಮೂಲಕ ತಮಗೆ ಮುಖ್ಯಮಂತ್ರಿ ಆಗಲು ಅವಕಾಶ ಸಿಗಲಿ ಎಂದು ಖರ್ಗೆಯವರು ಕಾಯುತ್ತಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ಕರ್ನಾಟಕದಲ್ಲಿ ಮುಖ್ಯಮಂತ್ರಿ ಹುದ್ದೆಗೆ ಕೇವಲ ಇಬ್ಬರು ಪೈಪೋಟಿ ನಡೆಸುತ್ತಿಲ್ಲ, ಬದಲಿಗೆ ಮೂರು ಮುಖಗಳು ಇಲ್ಲಿವೆ,” ಎಂದು ಅಗ್ರವಾಲ್ ಹೊಸ ರಾಜಕೀಯ ವಿಶ್ಲೇಷಣೆ ನೀಡಿದರು.
ಬಿಜೆಪಿ ಸಂಪರ್ಕದಲ್ಲಿ ಕಾಂಗ್ರೆಸ್ ಶಾಸಕರು: “ರಾಜ್ಯದಲ್ಲಿ ಕಾಂಗ್ರೆಸ್ ಪರಿಸ್ಥಿತಿ ಸಂಪೂರ್ಣ ಹದಗೆಟ್ಟಿದೆ. ಆಡಳಿತ ಪಕ್ಷದ ಹಲವಾರು ಶಾಸಕರು ಈಗಾಗಲೇ ನಮ್ಮ ಸಂಪರ್ಕದಲ್ಲಿದ್ದಾರೆ. ಒಂದು ವೇಳೆ ನಾಳೆಯೇ ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ನಡೆದರೂ ಸಹ, ಜನರೇ ಕಾಂಗ್ರೆಸ್ ಅನ್ನು ಸೋಲಿಸಿ ಮತ್ತೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲು ಸ್ಪಷ್ಟ ಅವಕಾಶ ಮಾಡಿಕೊಡಲಿದ್ದಾರೆ,” ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಆರೇಳು ತಿಂಗಳಿಂದ ರಾಜ್ಯದಲ್ಲಿ ಸರ್ಕಾರವೇ ಇಲ್ಲ!
ರಾಜ್ಯದ ಆರ್ಥಿಕ ಪರಿಸ್ಥಿತಿಯ ಕುರಿತು ಕಳವಳ ವ್ಯಕ್ತಪಡಿಸಿದ ರಾಜ್ಯ ಉಸ್ತುವಾರಿಗಳು, “ಹೊರಗಡೆಯಿಂದ ಮಿತಿಮೀರಿ ಸಾಲ ಪಡೆದಿರುವುದರಿಂದ ಕರ್ನಾಟಕವು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. ಕಳೆದ ಆರೇಳು ತಿಂಗಳುಗಳಿಂದ ರಾಜ್ಯದಲ್ಲಿ ಸರ್ಕಾರವೇ ಇಲ್ಲದಂತಾಗಿದೆ. ಜನಸಾಮಾನ್ಯರ ಸಮಸ್ಯೆಗಳನ್ನು ಆಲಿಸುವ ಬದಲು ಇವರು ಕೇವಲ ಪರಸ್ಪರ ಜಗಳ ಮಾಡಿಕೊಳ್ಳುವುದರಲ್ಲೇ ನಿರತರಾಗಿದ್ದಾರೆ. ಕಾಂಗ್ರೆಸ್ ಸರ್ಕಾರವು ತುಷ್ಟೀಕರಣ ರಾಜಕಾರಣದ ಆಧಾರದ ಮೇಲೆ ನಡೆಯುತ್ತಿದ್ದು, ಗ್ಯಾರಂಟಿಗಳನ್ನು ಸರಿಯಾಗಿ ನೀಡದೆ ಜನರಿಗೆ ಮೋಸ ಮಾಡಿದೆ,” ಎಂದು ಆಕ್ಷೇಪಿಸಿದರು.
ಪಕ್ಷದ ಸಂಘಟನೆ ಮತ್ತು ಅಧ್ಯಕ್ಷರ ಬದಲಾವಣೆ ಕುರಿತು ಸ್ಪಷ್ಟನೆ
ಬಿಜೆಪಿ ರಾಜ್ಯ ಅಧ್ಯಕ್ಷರ ಬದಲಾವಣೆ ಮತ್ತು ಮೌಲ್ಯಮಾಪನ ಕುರಿತು ಮಾಧ್ಯಮಗಳು ಕೇಳಿದ ಪ್ರಶ್ನೆಗಳಿಗೆ ರಾಧಾಮೋಹನ್ ದಾಸ್ ಅವರು ನೇರವಾಗಿ ಉತ್ತರಿಸಿದರು:
-
ಅಧ್ಯಕ್ಷತೆ ಎಂಬುದು ಉದ್ಯೋಗವಲ್ಲ: “3ನೇ ತಾರೀಖಿಗೆ ಫಾರ್ಮ್ ಭರ್ತಿ ಮಾಡಬೇಕು, ೫ರಂದು ಸಂದರ್ಶನ ನಡೆಸಿ, 7ರಂದು ಹೆಸರು ಘೋಷಿಸಿ ಇಂತಿಷ್ಟು ಸಂಬಳ ನೀಡಲು ಅಧ್ಯಕ್ಷ ಹುದ್ದೆ ಎಂಬುದು ಯಾವುದೇ ಕಂಪನಿಯ ಉದ್ಯೋಗವಲ್ಲ. ಈಗ ನಮ್ಮಲ್ಲಿ ಶಕ್ತಿಶಾಲಿ ಅಧ್ಯಕ್ಷರಿದ್ದಾರೆ (ವಿಜಯೇಂದ್ರ). ಅವರ ನೇತೃತ್ವದಲ್ಲೇ ನಾವು ಲೋಕಸಭಾ ಚುನಾವಣೆ ಎದುರಿಸಿದ್ದೇವೆ. ಮುಂದಿನ ವಿಧಾನಸಭಾ ಚುನಾವಣೆಯನ್ನೂ ಯಾರು ಅಧ್ಯಕ್ಷರಿರುತ್ತಾರೋ ಅವರ ನೇತೃತ್ವದಲ್ಲೇ ಎದುರಿಸಲಿದ್ದೇವೆ.”
-
ನಿರಂತರ ಮೌಲ್ಯಮಾಪನ: “ನಮ್ಮ ಪಕ್ಷದಲ್ಲಿ ನಾಯಕರ ಮೌಲ್ಯಮಾಪನ ನಿರಂತರವಾಗಿ ನಡೆಯುತ್ತಿರುತ್ತದೆ. ಯಾವ ನಾಯಕ ಏನು ಮಾಡುತ್ತಿದ್ದಾರೆ ಎಂದು ತಿಳಿಯಲು ನಾನು ಇಲ್ಲಿಗೇ ಬರಬೇಕಾಗಿಲ್ಲ. ನಾನು ಕೇವಲ ಅಧ್ಯಕ್ಷರ ಕಾರ್ಯಕರ್ತನಲ್ಲ, ಬದಲಿಗೆ ಬಿಜೆಪಿಯ ಶಿಸ್ತಿನ ಕಾರ್ಯಕರ್ತ. ಪಕ್ಷದ ಒಳಹೊರಗು ನನಗೇ ಚೆನ್ನಾಗಿ ತಿಳಿದಿದೆ.”
-
ಕೋರ್ ಕಮಿಟಿ ಬದಲಾವಣೆ ನಿರ್ಧಾರ ರಾಷ್ಟ್ರ ಘಟಕದ್ದು: “ಹೊಸ ಅಧ್ಯಕ್ಷರು ಬಂದ ತಕ್ಷಣ ಕೋರ್ ಕಮಿಟಿ ಬದಲಾಗುವುದಿಲ್ಲ. ಕೋರ್ ಕಮಿಟಿ ನಿರ್ಧಾರವನ್ನು ರಾಷ್ಟ್ರೀಯ ಘಟಕ ಕೈಗೊಳ್ಳುತ್ತದೆ. ಹೊಸ ತಂಡ ರಚನೆಯಾಗುವಾಗ ಸಹಜವಾಗಿ ಒಂದಿಬ್ಬರು ಹಳೆಯ ಮುಖಗಳು ಬದಲಾಗಿ ಹೊಸಬರಿಗೆ ಅವಕಾಶ ಸಿಗಬಹುದು ಅಷ್ಟೆ.”
2027ರ ಚುನಾವಣೆಗೆ ಸಿದ್ಧತೆ: ಪಕ್ಷದ ರಾಷ್ಟ್ರೀಯ ಸಹ-ಸಂಘಟನಾ ಕಾರ್ಯದರ್ಶಿಯವರು ಈಗಾಗಲೇ ರಾಜ್ಯಕ್ಕೆ ಆಗಮಿಸಿದ್ದು, ಮುಂದಿನ 2027ರ ವಿಧಾನಸಭಾ ಚುನಾವಣೆಗೆ ಪಕ್ಷವನ್ನು ಸಜ್ಜುಗೊಳಿಸುವ ಪ್ರಕ್ರಿಯೆ ಆರಂಭವಾಗಿದೆ. ಪ್ರಸ್ತುತ ಇರುವ ವಿಫಲ ಮತ್ತು ಭ್ರಷ್ಟ ಸರ್ಕಾರದ ವಿರುದ್ಧ ಹೋರಾಟ ರೂಪಿಸಲು ಬಿಜೆಪಿ ಸಜ್ಜಾಗುತ್ತಿದೆ ಎಂದು ಅವರು ಪ್ರಕಟಿಸಿದರು.
ಬಾಯಿ ಮಾತಿನ ಲೆಕ್ಕ ಬಿಟ್ಟು ದಾಖಲೆ ಬಿಡುಗಡೆ ಮಾಡಿ: ಮಧು ಬಂಗಾರಪ್ಪ, ಗೋಪಾಲಕೃಷ್ಣಗೆ ಹರತಾಳು ಹಾಲಪ್ಪ ಸವಾಲ್
JOB ALERT: ರಾಜ್ಯದ ವಿವಿಧ ಇಲಾಖೆ, ನಿಗಮಗಳಲ್ಲಿ ಖಾಲಿ ಇರುವ ‘ಎಂಜಿನಿಯರ್ ಹುದ್ದೆ’ಗಳ ಭರ್ತಿಗೆ ಅರ್ಜಿ ಆಹ್ವಾನ








