ಟ್ವಿಶಾ ಶರ್ಮಾ ಅವರ ಕುಟುಂಬಸ್ಥರು ಮಾಡಿದ್ದ ಕೊಲೆಯ ಆರೋಪಗಳನ್ನು ತಳ್ಳಿಹಾಕಿರುವ ಭೋಪಾಲ್ ಪೊಲೀಸರು, ಈ ತಿಂಗಳ ಆರಂಭದಲ್ಲಿ ತಮ್ಮ ಪತಿಯ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದ 33 ವರ್ಷದ ಮಹಿಳೆಯ ಸಾವು ಕೊಲೆಯಲ್ಲ, ಮೇಲ್ನೋಟಕ್ಕೆ ಇದು ಆತ್ಮಹತ್ಯೆಯ ಪ್ರಕರಣ ಎಂದು ಹೇಳಿದ್ದಾರೆ.
ಮರಣೋತ್ತರ ಪರೀಕ್ಷೆಯ ವರದಿ ಮತ್ತು ಇದುವರೆಗೆ ಸಂಗ್ರಹಿಸಲಾದ ಸಾಕ್ಷ್ಯಗಳು ಆತ್ಮಹತ್ಯೆಯಿಂದ ಸಾವು ಸಂಭವಿಸಿರುವುದನ್ನು ಸೂಚಿಸುತ್ತವೆ ಎಂದು ಪೊಲೀಸ್ ಕಮಿಷನರ್ ಸಂಜಯ್ ಕುಮಾರ್ ತಿಳಿಸಿದ್ದಾರೆ. ಅಧಿಕಾರಿಗಳ ಪ್ರಕಾರ, ತನಿಖೆಯು “ಆಂಟಿ-ಮಾರ್ಟಮ್ ಹ್ಯಾಂಗಿಂಗ್” (ಮರಣಪೂರ್ವ ನೇಣು ಬಿಗಿತ) ಅನ್ನು ಸೂಚಿಸುತ್ತದೆ – ಅಂದರೆ ಆಕೆ ಜೀವಂತವಾಗಿದ್ದಾಗಲೇ ನೇಣು ಬಿಗಿದುಕೊಂಡಿದ್ದಾಳೆ – ಮತ್ತು ಈ ಹಂತದಲ್ಲಿ ಯಾವುದೇ ಕೊಲೆಯ ಮುನ್ಸೂಚನೆಗಳು ಅಥವಾ ಪುರಾವೆಗಳು ಪತ್ತೆಯಾಗಿಲ್ಲ.
”ಮರಣೋತ್ತರ ಪರೀಕ್ಷೆಯ ವರದಿ ಮತ್ತು ನಾವು ಸಂಗ್ರಹಿಸಿದ ಇತರ ಸಾಕ್ಷ್ಯಗಳಿಂದ ಇದುವರೆಗೆ ನಮಗೆ ತಿಳಿದುಬಂದಿ ಏನೆಂದರೆ, ಇದು ಆತ್ಮಹತ್ಯೆಯ ಪ್ರಕರಣವೇ ಹೊರತು ಕೊಲೆಯಲ್ಲ,” ಎಂದು ಕಮಿಷನರ್ ಸಂಜಯ್ ಕುಮಾರ್ ಎನ್ಡಿಟಿವಿ (NDTV) ಮಾಧ್ಯಮಕ್ಕೆ ತಿಳಿಸಿದ್ದಾರೆ.
ನೋಯ್ಡಾ ನಿವಾಸಿಯಾಗಿದ್ದ ಟ್ವಿಶಾ, ಡಿಸೆಂಬರ್ 2025 ರಲ್ಲಿ ವಕೀಲ ಸಮರ್ಥ್ ಸಿಂಗ್ ಅವರನ್ನು ವಿವಾಹವಾದ ಕೆಲವೇ ತಿಂಗಳುಗಳಲ್ಲಿ, ಮೇ 12 ರಂದು ಭೋಪಾಲ್ನಲ್ಲಿರುವ ತನ್ನ ಪತಿಯ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದರು. ಆಕೆಗೆ ಆಕೆಯ ಪತಿ ಮತ್ತು ಅತ್ತೆ-ಮಾವಂದಿರಿಂದ ಮಾನಸಿಕ ಕಿರುಕುಳ ಮತ್ತು ವರದಕ್ಷಿಣೆ ಕಿರುಕುಳ ನೀಡಲಾಗುತ್ತಿತ್ತು ಎಂದು ಟ್ವಿಶಾ ಕುಟುಂಬಸ್ಥರು ಆರೋಪಿಸಿದ್ದಾರೆ.
ಇದೇ ವೇಳೆ, ಮೃತ ಟ್ವಿಶಾ ಮಾದಕ ವ್ಯಸನದಿಂದ (Drug Addiction) ಬಳಲುತ್ತಿದ್ದರು ಎಂದು ಆರೋಪಿಸಿದ್ದ ಆಕೆಯ ಅತ್ತೆ, ನಿವೃತ್ತ ನ್ಯಾಯಾಧೀಶೆ ಗಿರಿಬಾಲಾ ಸಿಂಗ್ ಅವರ ವಾದವನ್ನು ಪೊಲೀಸರು ತಳ್ಳಿಹಾಕಿದ್ದಾರೆ. ಮರಣೋತ್ತರ ಪರೀಕ್ಷೆಯ ವರದಿಯಲ್ಲಾಗಲಿ ಅಥವಾ ತನಿಖೆಯಲ್ಲಾಗಲಿ ಡ್ರಗ್ಸ್ ಬಳಕೆಯ ಯಾವುದೇ ಲಕ್ಷಣಗಳು ಕಂಡುಬಂದಿಲ್ಲ ಎಂದು ಕಮಿಷನರ್ ಕುಮಾರ್ ಹೇಳಿದ್ದಾರೆ.
”ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಡ್ರಗ್ಸ್ ಬಗ್ಗೆ ಏನೂ ಉಲ್ಲೇಖವಿಲ್ಲ. ನಮ್ಮ ತನಿಖೆಯಲ್ಲೂ ನಮಗೆ ಅಂತಹ ಯಾವುದೇ ಅಂಶಗಳು ಕಂಡುಬಂದಿಲ್ಲ,” ಎಂದು ಅವರು ತಿಳಿಸಿದ್ದಾರೆ.
ಪೊಲೀಸರ ಈ ನಿರ್ಧಾರದ ಹೊರತಾಗಿಯೂ, ಈ ಪ್ರಕರಣವು ಇನ್ನೂ ವಿವಾದಾತ್ಮಕವಾಗಿಯೇ ಉಳಿದಿದೆ. ಟ್ವಿಶಾ ಪತಿ ಸಮರ್ಥ್ ಸಿಂಗ್ ಮತ್ತು ಅತ್ತೆಯನ್ನು ಈ ಪ್ರಕರಣದಲ್ಲಿ ಆರೋಪಿಗಳೆಂದು ಹೆಸರಿಸಲಾಗಿದ್ದು, ಆಕೆಯ ಸಾವಿನ ದಿನದಿಂದ ಪತಿ ಸಮರ್ಥ್ ನಾಪತ್ತೆಯಾಗಿದ್ದಾನೆ ಎಂದು ವರದಿಯಾಗಿದೆ. ಆತನ ಪತ್ತೆಗಾಗಿ ಅಧಿಕಾರಿಗಳು ಲುಕೌಟ್ ನೋಟಿಸ್ (Lookout Notice) ಹೊರಡಿಸಿದ್ದು, ಆತನ ಪಾಸ್ಪೋರ್ಟ್ ರದ್ದುಗೊಳಿಸಲು ಮುಂದಾಗಿದ್ದಾರೆ.
ಮತ್ತೊಂದೆಡೆ, ಟ್ವಿಶಾ ಅವರ ದೇಹದ ಮೇಲೆ ಗಾಯದ ಗುರುತುಗಳಿವೆ ಎಂದು ಆರೋಪಿಸಿರುವ ಆಕೆಯ ಕುಟುಂಬಸ್ಥರು, ನಡೆಯುತ್ತಿರುವ ತನಿಖೆಯ ನಿಷ್ಪಕ್ಷಪಾತತೆಯನ್ನು ಪ್ರಶ್ನಿಸಿದ್ದಾರೆ ಹಾಗೂ ಮತ್ತೊಮ್ಮೆ ಮರಣೋತ್ತರ ಪರೀಕ್ಷೆ ನಡೆಸುವಂತೆ ಒತ್ತಾಯಿಸಿದ್ದಾರೆ. ಯಾವುದೇ ಪಿತೂರಿಯನ್ನು ಸಂಪೂರ್ಣವಾಗಿ ಪತ್ತೆಹಚ್ಚಲು ಅವರು ನ್ಯಾಯಾಂಗದ ಮಧ್ಯಸ್ಥಿಕೆ ಮತ್ತು ಎರಡನೇ ಬಾರಿಗೆ ಶವಪರೀಕ್ಷೆ (Autopsy) ನಡೆಸುವಂತೆ ಕೋರಿದ್ದಾರೆ.








