ಬೆಂಗಳೂರು: ಕೇಂದ್ರ ಚುನಾವಣಾ ಆಯೋಗವು ಮೂರನೇ ಹಂತದ ವಿಶೇಷ ಸಮಗ್ರ ಪರಿಷ್ಕರಣೆ (SIR) ಅಡಿಯಲ್ಲಿ ದೇಶದ 16 ರಾಜ್ಯಗಳು ಹಾಗೂ 3 ಕೇಂದ್ರಾಡಳಿತ ಪ್ರದೇಶಗಳಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದೆ. ಇದರ ಭಾಗವಾಗಿ ಕರ್ನಾಟಕದಲ್ಲಿ ಜೂನ್ 20 ರಿಂದ ಒಟ್ಟು 5.55 ಕೋಟಿ ಮತದಾರರ ಪಟ್ಟಿಯ ಪರಿಷ್ಕರಣೆ ಕಾರ್ಯ ಆರಂಭವಾಗುತ್ತಿದೆ. ಈ ಹಿನ್ನೆಲೆಯಲ್ಲಿ, ರಾಜ್ಯದಲ್ಲಿ ಯಾವುದೇ ಒಬ್ಬ ಅರ್ಹ ಮತದಾರನೂ ಪಟ್ಟಿಯಿಂದ ಕೈಬಿಟ್ಟು ಹೋಗದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಕೆಪಿಸಿಸಿ ಮಾಧ್ಯಮ ಮತ್ತು ಸಂವಹನ ವಿಭಾಗದ ಅಧ್ಯಕ್ಷ ರಮೇಶ್ ಬಾಬು ಅವರು ರಾಜ್ಯ ಮುಖ್ಯ ಚುನಾವಣಾಧಿಕಾರಿಗಳಿಗೆ ಮಹತ್ವದ ಪತ್ರವೊಂದನ್ನು ಬರೆದಿದ್ದಾರೆ.
ಸಾಂವಿಧಾನಿಕ ಆಶಯದಂತೆ ಪಕ್ಷಪಾತವಿಲ್ಲದ ಪರಿಷ್ಕರಣೆ ನಡೆಯಲಿ
ಸಂವಿಧಾನದ ಆರ್ಟಿಕಲ್ 326, ಪ್ರಜಾಪ್ರತಿನಿಧಿ ಕಾಯಿದೆ 1950 ಮತ್ತು ಮತದಾರರ ನೋಂದಾವಣಿ ನಿಯಮ 1960ರ ಅಡಿಯಲ್ಲಿ ಈ ವಿಶೇಷ ಪರಿಷ್ಕರಣೆ ಕಾರ್ಯ ನಡೆಯಬೇಕಿದೆ. ಕರ್ನಾಟಕದಲ್ಲಿ ಯಾವುದೇ ಅನಾಹುತಗಳಿಗೆ ಅಥವಾ ರಾಜಕೀಯ ಪ್ರೇರಿತ ಅಕ್ರಮಗಳಿಗೆ ಅವಕಾಶ ನೀಡದಂತೆ, ಪಕ್ಷಪಾತವಿಲ್ಲದೆ ಯಾವುದೇ ಧರ್ಮ ಅಥವಾ ವರ್ಗಗಳ ಮತದಾರರನ್ನು ಉದ್ದೇಶಪೂರ್ವಕವಾಗಿ ಕೈಬಿಡದಂತೆ ಚುನಾವಣಾ ಆಯೋಗವು ಅತ್ಯಂತ ಪಾರದರ್ಶಕವಾಗಿ ನಡೆದುಕೊಳ್ಳಬೇಕು ಎಂದು ರಮೇಶ್ ಬಾಬು ಪತ್ರದಲ್ಲಿ ಆಗ್ರಹಿಸಿದ್ದಾರೆ.
21 ವರ್ಷಗಳಿಂದ ನಡೆಯದ ವಿಶೇಷ ಪರಿಷ್ಕರಣೆ: ಅಕ್ರಮಗಳ ಆತಂಕ
ದೇಶದ ಇತಿಹಾಸದಲ್ಲಿ 1951 ರಿಂದ ಇಲ್ಲಿಯವರೆಗೆ 8 ಬಾರಿ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ಆಗಿದೆ. ಆದರೆ, ಕಳೆದ 21 ವರ್ಷಗಳಿಂದ ಚುನಾವಣಾ ಆಯೋಗವು ಇಂತಹ ಯಾವುದೇ ವಿಶೇಷ ಪರಿಷ್ಕರಣೆ ಕಾರ್ಯ ನಡೆಸಿರುವುದಿಲ್ಲ ಮತ್ತು ಇದಕ್ಕೆ ಆಯೋಗ ಸೂಕ್ತ ಕಾರಣವನ್ನೂ ನೀಡಿಲ್ಲ ಎಂದು ಪತ್ರದಲ್ಲಿ ಬೆರಳು ಮಾಡಲಾಗಿದೆ. ಇತ್ತೀಚಿನ ವಿಧಾನಸಭಾ ಚುನಾವಣೆಗಳಲ್ಲಿ ವಿಶೇಷ ಪರಿಷ್ಕರಣೆಯ ಹೆಸರಿನಲ್ಲಿ ಕೆಲವು ರಾಜಕೀಯ ಪಕ್ಷಗಳನ್ನು ಗುರಿಯಾಗಿಸಿಕೊಂಡು ಮತದಾರರ ಪಟ್ಟಿಯಲ್ಲಿ ಏರುಪೇರು ಮಾಡಿ, ಚುನಾವಣಾ ಫಲಿತಾಂಶವನ್ನೇ ಬದಲಾಯಿಸಿರುವ ಗಂಭೀರ ಆರೋಪಗಳ ಹಿನ್ನೆಲೆಯಲ್ಲಿ, ಆಯೋಗ ಈ ಬಾರಿ ಅತ್ಯಂತ ಎಚ್ಚರಿಕೆ ವಹಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಈ 8 ವರ್ಗಗಳ ಮತದಾರರನ್ನು ಕೈಬಿಡದಂತೆ ಕಟ್ಟುನಿಟ್ಟಿನ ಒತ್ತಾಯ
ವಿಶೇಷ ಸಮಗ್ರ ಪರಿಷ್ಕರಣೆಯ ಸಂದರ್ಭದಲ್ಲಿ ಕೆಳಕಂಡ ಅಂಶಗಳನ್ನು ಗಂಭೀರವಾಗಿ ಪರಿಗಣಿಸಿ, ಯಾವುದೇ ಕಾರಣಕ್ಕೂ ಇಂತಹ ಮತದಾರರ ಹೆಸರುಗಳನ್ನು ಪಟ್ಟಿಯಿಂದ ತೆಗೆದುಹಾಕದಂತೆ ರಮೇಶ್ ಬಾಬು ಅವರು ಆಯೋಗವನ್ನು ಆಗ್ರಹಿಸಿದ್ದಾರೆ:
-
ಕ್ಷೇತ್ರ ಮರುವಿಂಗಡಣೆ (Delimitation) ಗೊಂದಲದ ಮತದಾರರು: 2008ರ ಕ್ಷೇತ್ರ ಮರುವಿಂಗಡಣೆ ಕಾರಣ ಅನೇಕ ವಿಧಾನಸಭಾ ಕ್ಷೇತ್ರಗಳು ಈಗ ಅಸ್ತಿತ್ವದಲ್ಲಿ ಇಲ್ಲ. ಹೀಗಾಗಿ ಮ್ಯಾಪಿಂಗ್ ಪ್ರಕ್ರಿಯೆಯಲ್ಲಿ 2002ರ ಮತದಾರರ ಪಟ್ಟಿಗೆ ಹೊಂದಾಣಿಕೆಯಾಗದ ಮತದಾರರನ್ನು ಕೈಬಿಡಬಾರದು.
-
ಕ್ಷೇತ್ರ ಬದಲಾಯಿಸಿಕೊಂಡಿರುವ ಮೂಲ ನಿವಾಸಿಗಳು: ಕರ್ನಾಟಕದಲ್ಲೇ ಜನಿಸಿ, ಕಾರಣಾಂತರಗಳಿಂದ ಮತದಾರರ ಪಟ್ಟಿಯನ್ನು ಬೇರೆ ಬೇರೆ ವಿಧಾನಸಭಾ ಕ್ಷೇತ್ರಗಳಿಗೆ ಬದಲಾಯಿಸಿಕೊಂಡಿರುವ ಮತದಾರರ ರಕ್ಷಣೆ ಮಾಡಬೇಕು.
-
ಸ್ಥಳಾಂತರಗೊಂಡ ಮಹಿಳೆಯರು: ಮದುವೆ, ಉದ್ಯೋಗ ಅಥವಾ ಶಿಕ್ಷಣದ ಕಾರಣಕ್ಕಾಗಿ ಕ್ಷೇತ್ರ ಬದಲಾವಣೆ ಮಾಡಿಕೊಂಡಿರುವ ಹೆಣ್ಣುಮಕ್ಕಳ ಹೆಸರುಗಳನ್ನು ಸುರಕ್ಷಿತವಾಗಿಡಬೇಕು.
-
ಸರ್ಕಾರಿ ನೌಕರರು: ವರ್ಗಾವಣೆಯ ಕಾರಣಕ್ಕಾಗಿ ಬೇರೆ ಬೇರೆ ಕ್ಷೇತ್ರಗಳಿಗೆ ಮತದಾರರ ಪಟ್ಟಿಯಲ್ಲಿ ಬದಲಾವಣೆ ಆಗಿರುವ ಸರ್ಕಾರಿ ನೌಕರರ ಮತದಾನದ ಹಕ್ಕನ್ನು ಖಚಿತಪಡಿಸಬೇಕು.
-
ಜೀವನೋಪಾಯಕ್ಕಾಗಿ ವಲಸೆ ಹೋದವರು: ವ್ಯಾಪಾರ, ಉದ್ಯೋಗ ಅಥವಾ ಜೀವನೋಪಾಯಕ್ಕಾಗಿ ತಾತ್ಕಾಲಿಕವಾಗಿ ಸ್ಥಳಾಂತರಗೊಂಡಿರುವ ಮತದಾರರನ್ನು ಪಟ್ಟಿಯಿಂದ ತೆಗೆಯಬಾರದು.
-
ಸ್ಥಳೀಯ ನಿವಾಸಿಗಳು: ಕರ್ನಾಟಕದಲ್ಲೇ ಜನಿಸಿ, ಇಲ್ಲೇ ಸುದೀರ್ಘವಾಗಿ ವಾಸಿಸುತ್ತಿರುವ ಮತದಾರರಿಗೆ ಯಾವುದೇ ತೊಂದರೆಯಾಗಬಾರದು.
-
ಅಲೆಮಾರಿ ಹಾಗೂ ಆದಿವಾಸಿಗಳು: ಕರ್ನಾಟಕದಲ್ಲಿರುವ ಅಲೆಮಾರಿ, ಆದಿವಾಸಿ ಮತ್ತು ಬುಡಕಟ್ಟು ಸಮುದಾಯಗಳ ಮತದಾರರನ್ನು ವಿಶೇಷವಾಗಿ ಪರಿಗಣಿಸಿ ಪಟ್ಟಿಯಲ್ಲಿ ಉಳಿಸಿಕೊಳ್ಳಬೇಕು.
-
ವಾಸ ದೃಢೀಕರಣ ಪತ್ರ ಹೊಂದಿರುವವರು: ಸ್ಥಳೀಯ ಸಂಸ್ಥೆಗಳಿಂದ ಅಥವಾ ಸರ್ಕಾರಿ, ಅರೆ ಸರ್ಕಾರಿ ಸಂಸ್ಥೆಗಳಿಂದ ಅಧಿಕೃತ ವಾಸ ದೃಢೀಕರಣ ಹೊಂದಿರುವ ಮತದಾರರನ್ನು ಕೈಬಿಡಬಾರದು.
ಕಾಲಮಿತಿಯನ್ನು ಒಂದು ವರ್ಷಕ್ಕೆ ವಿಸ್ತರಿಸಲು ಕೋರಿಕೆ
ಕರ್ನಾಟಕದಲ್ಲಿ ಸಾರ್ವತ್ರಿಕ ಚುನಾವಣೆಗೆ ಇನ್ನೂ ಸಾಕಷ್ಟು ಸಮಯ ಇರುವುದರಿಂದ, ಅರ್ಹ ಮತದಾರರ ಹಿತದೃಷ್ಟಿಯಿಂದ ಮತ್ತು ಗೊಂದಲರಹಿತವಾಗಿ ಪ್ರಕ್ರಿಯೆ ಮುಗಿಸಲು ಈ ವಿಶೇಷ ಮತದಾರರ ಪಟ್ಟಿಯ ಪರಿಷ್ಕರಣ ಕಾರ್ಯದ ಕಾಲಮಿತಿಯನ್ನು ಒಂದು ವರ್ಷದವರೆಗೆ ವಿಸ್ತರಿಸಬೇಕು ಎಂದು ಅವರು ಪತ್ರದಲ್ಲಿ ಮನವಿ ಮಾಡಿದ್ದಾರೆ. ಸಾಂವಿಧಾನಿಕ ಮೌಲ್ಯಗಳನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಚುನಾವಣಾ ಆಯೋಗವು ತನ್ನ ಜವಾಬ್ದಾರಿಯನ್ನು ಅರಿತು ಈ ಎಲ್ಲಾ ಅಂಶಗಳನ್ನು ಕಡ್ಡಾಯವಾಗಿ ಜಾರಿಗೊಳಿಸಬೇಕು ಎಂದು ಕೆಪಿಸಿಸಿ ಮಾಧ್ಯಮ ವಿಭಾಗದ ಅಧ್ಯಕ್ಷರು ಪತ್ರದ ಮೂಲಕ ಮುಖ್ಯ ಚುನಾವಣಾಧಿಕಾರಿಗಳನ್ನು ಕೋರಿದ್ದಾರೆ.
BREAKING: ಬೆಳ್ಳಿಯ ಆಮದಿಗೆ ನಿರ್ಬಂಧ ಹೇರಿದ ಕೇಂದ್ರ ಸರ್ಕಾರ | silver bar imports
BIG NEWS: ಜೂನ್.1ರಂದು ರಾಜ್ಯಾದ್ಯಂತ ಅದ್ಧೂರಿ ‘ಶಾಲಾ ಪ್ರಾರಂಭೋತ್ಸವ’: ಸಿಎಂ ಸಿದ್ದರಾಮಯ್ಯ ಚಾಲನೆ








