ನೀಟ್-ಯುಜಿ 2026 ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದ ತನಿಖೆಯನ್ನು ತೀವ್ರಗೊಳಿಸಿರುವ ಕೇಂದ್ರೀಯ ತನಿಖಾ ದಳ (CBI), ಬುಧವಾರ ಐವರು ಪ್ರಮುಖ ಆರೋಪಿಗಳನ್ನು ಬಂಧಿಸಿದೆ. ಇವರಲ್ಲಿ ಪತ್ರಿಕೆಯನ್ನು ಜಾಲಕ್ಕೆ ಮೊದಲು ರವಾನಿಸಿದ ವ್ಯಕ್ತಿ ಹಾಗೂ 15 ಲಕ್ಷಕ್ಕೆ ಪತ್ರಿಕೆ ಖರೀದಿಸಿ 30 ಲಕ್ಷಕ್ಕೆ ಮಾರಾಟ ಮಾಡಿದ ಕುಟುಂಬವೂ ಸೇರಿದೆ.
ಮಹಾರಾಷ್ಟ್ರದ ಅಹಲ್ಯಾನಗರದ (ಅಹ್ಮದ್ನಗರ) ಬಿಎಎಂಎಸ್ ಪದವೀಧರ ಮತ್ತು ವೈದ್ಯ. ಮಂಗಳೂರಿನಲ್ಲಿ ವಿದ್ಯಾಭ್ಯಾಸ ಮಾಡಿದ್ದ ಈತನೇ ಈ ಜಾಲದ ಮೊದಲ ಕೊಂಡಿ ಎಂದು ಶಂಕಿಸಲಾಗಿದೆ. ಈತ ಪತ್ರಿಕೆಯನ್ನು ಶುಭಂ ಖೈರ್ನಾರ್ ಎಂಬುವವನಿಗೆ 10 ಲಕ್ಷ ರೂಪಾಯಿಗೆ ರವಾನಿಸಿದ್ದ ಎನ್ನಲಾಗಿದೆ.
ಶುಭಂ ಖೈರ್ನಾರ್: ನಾಸಿಕ್ ಮೂಲದ ಈತ ಲೋಖಂಡೆಯಿಂದ ಪತ್ರಿಕೆ ಪಡೆದು, ಗುರಗಾಂವ್ನ ಯಶ್ ಯಾದವ್ಗೆ 15 ಲಕ್ಷಕ್ಕೆ ಮಾರಾಟ ಮಾಡಿದ್ದ.
ಬಿವಾಲ್ ಕುಟುಂಬ: ಜೈಪುರದ ಜಮ್ವಾ ರಾಮ್ಗಢದ ದಿನೇಶ್ ಬಿವಾಲ್, ಅವರ ಸಹೋದರ ಮಂಗಿಲಾಲ್ ಬಿವಾಲ್ ಮತ್ತು ಮಗ ವಿಕಾಸ್ ಸೇರಿ ಹರಿಯಾಣದ ಯಶ್ ಯಾದವ್ನಿಂದ 15 ಲಕ್ಷಕ್ಕೆ ಪತ್ರಿಕೆ ಖರೀದಿಸಿ, ಸಿಕಾರ್ನಲ್ಲಿ 30 ಲಕ್ಷ ರೂಪಾಯಿಗೆ ಮಾರಾಟ ಮಾಡಿದ್ದರು.
ತನಿಖಾಧಿಕಾರಿಗಳು ಪತ್ತೆಹಚ್ಚಿರುವ ಪ್ರಕಾರ, ಪತ್ರಿಕೆಯು ಈ ಕೆಳಗಿನ ಹಂತಗಳಲ್ಲಿ ಹರಡಿದೆ:
ಧನಂಜಯ್ ಲೋಖಂಡೆ ➔ 10 ಲಕ್ಷಕ್ಕೆ ಶುಭಂ ಖೈರ್ನಾರ್ಗೆ ಮಾರಾಟ.
ಖೈರ್ನಾರ್ ➔ 15 ಲಕ್ಷಕ್ಕೆ ಯಶ್ ಯಾದವ್ಗೆ ಮಾರಾಟ.
ಯಶ್ ಯಾದವ್ ➔ 15 ಲಕ್ಷಕ್ಕೆ ಬಿವಾಲ್ ಸಹೋದರರಿಗೆ ಮಾರಾಟ.
ಬಿವಾಲ್ ಸಹೋದರರು ➔ 30 ಲಕ್ಷಕ್ಕೆ ಸಿಕಾರ್ನ ಕೋಚಿಂಗ್ ಸೆಂಟರ್ ಸಲಹೆಗಾರನಿಗೆ ಮಾರಾಟ.
ಅಂತಿಮವಾಗಿ ಈ ಪತ್ರಿಕೆಯು ಟೆಲಿಗ್ರಾಮ್ ಚಾನಲ್ಗಳ ಮೂಲಕ ದೇಶಾದ್ಯಂತ ಹರಡಿದೆ.
ಬಂಧಿತ ದಿನೇಶ್ ಬಿವಾಲ್ 2014 ರಲ್ಲಿ ಬಿಜೆಪಿ ಯುವ ಮೋರ್ಚಾದ ಕಾರ್ಯದರ್ಶಿಯಾಗಿದ್ದ ಎಂಬುದು ಪ್ರಕರಣಕ್ಕೆ ರಾಜಕೀಯ ಆಯಾಮ ನೀಡಿದೆ. ರಾಜಸ್ಥಾನದ ಶಿಕ್ಷಣ ಸಚಿವ ಮದನ್ ದಿಲಾವರ್ ಮತ್ತು ಸ್ಥಳೀಯ ಶಾಸಕರೊಂದಿಗೆ ದಿನೇಶ್ ಇರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿವೆ. ಆದರೆ ಬಿಜೆಪಿ ಈತನಿಂದ ದೂರ ಸರಿದಿದ್ದು, ಆತ ಪಕ್ಷದಲ್ಲಿ ಸಕ್ರಿಯನಾಗಿರಲಿಲ್ಲ ಎಂದು ಹೇಳಿದೆ.
ದಿನೇಶ್ ಬಿವಾಲ್ ಕುಟುಂಬದ ನಾಲ್ವರು ಸದಸ್ಯರು ಕಳೆದ ವರ್ಷವೇ ನೀಟ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಮೆಡಿಕಲ್ ಕಾಲೇಜು ಸೇರಿದ್ದಾರೆ. ಅವರು ಕೂಡ ಹಿಂದಿನ ವರ್ಷಗಳಲ್ಲಿ ಪತ್ರಿಕೆ ಸೋರಿಕೆ ಅಥವಾ ಅಕ್ರಮದ ಮೂಲಕವೇ ಸೀಟು ಪಡೆದಿದ್ದಾರೆಯೇ ಎಂಬ ಬಗ್ಗೆ ಸಿಬಿಐ ಈಗ ತನಿಖೆ ನಡೆಸುತ್ತಿದೆ.








