ನವದೆಹಲಿ: ‘ಆಪರೇಷನ್ ಸಿಂದೂರ್’ ಕಾರ್ಯಾಚರಣೆಯ ನಡುವೆಯೇ ಪಾಕಿಸ್ತಾನದ ಬೆನ್ನಿಗೆ ನಿಂತಿರುವ ಚೀನಾಗೆ ಭಾರತವು ರಾಜತಾಂತ್ರಿಕವಾಗಿ ಬಿಸಿ ಮುಟ್ಟಿಸಿದೆ. ಭಯೋತ್ಪಾದನೆ ಮತ್ತು ಪ್ರಾದೇಶಿಕ ಅಸ್ಥಿರತೆಗೆ ಕಾರಣವಾಗುವ ರಾಷ್ಟ್ರಗಳನ್ನು ಬೆಂಬಲಿಸುವುದು ಜವಾಬ್ದಾರಿಯುತ ದೇಶದ ಲಕ್ಷಣವಲ್ಲ ಎಂದು ಭಾರತ ನೇರವಾಗಿಯೇ ತಿವಿದಿದೆ.
ಗಡಿಯಾಚೆಗಿನ ಸಂಚುಗಳನ್ನು ಹತ್ತಿಕ್ಕಲು ಭಾರತ ‘ಆಪರೇಷನ್ ಸಿಂದೂರ್’ ನಡೆಸುತ್ತಿದ್ದರೆ, ಈ ಹಂತದಲ್ಲಿ ಪಾಕಿಸ್ತಾನಕ್ಕೆ ಚೀನಾ ನೀಡುತ್ತಿರುವ ತಾಂತ್ರಿಕ ಮತ್ತು ರಾಜತಾಂತ್ರಿಕ ಬೆಂಬಲವನ್ನು ಭಾರತ ತೀವ್ರವಾಗಿ ಖಂಡಿಸಿದೆ.
“ಜವಾಬ್ದಾರಿಯುತ ರಾಷ್ಟ್ರಗಳು ಜಾಗತಿಕ ಶಾಂತಿಗೆ ಭಂಗ ತರುವ ಶಕ್ತಿಗಳ ಪರ ನಿಲ್ಲಬಾರದು. ಭಯೋತ್ಪಾದನೆಯನ್ನು ಪೋಷಿಸುವವರಿಗೆ ರಕ್ಷಣೆ ನೀಡುವುದು ಇಡೀ ಪ್ರಾದೇಶಿಕ ಭದ್ರತೆಗೆ ಅಪಾಯಕಾರಿ,” ಎಂದು ವಿದೇಶಾಂಗ ಸಚಿವಾಲಯದ ಮೂಲಗಳು ತಿಳಿಸಿವೆ.
ಪಾಕಿಸ್ತಾನ ಪ್ರೇರಿತ ಒಳನುಸುಳುವಿಕೆ ಮತ್ತು ಭಯೋತ್ಪಾದನಾ ಜಾಲವನ್ನು ಧ್ವಂಸಗೊಳಿಸಲು ಭಾರತೀಯ ಸೇನೆಯು ಈ ವಿಶೇಷ ಕಾರ್ಯಾಚರಣೆಯನ್ನು ತೀವ್ರಗೊಳಿಸಿದೆ.








