ಬೆಂಗಳೂರು: ರಾಜ್ಯ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಕರ್ನಾಟಕ ಸರ್ಕಾರವು ಮೇ 11, 2026ರಂದು ಮಹತ್ವದ ಕೊಡುಗೆ ನೀಡಿದೆ. 2024ರ ಪರಿಷ್ಕೃತ ವೇತನ ಶ್ರೇಣಿಯಲ್ಲಿ ವೇತನ ಪಡೆಯುತ್ತಿರುವ ನೌಕರರ ತುಟ್ಟಿಭತ್ಯೆಯನ್ನು (Dearness Allowance) ಶೇ. 1.5 ರಷ್ಟು ಹೆಚ್ಚಿಸಿ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ.ಪ್ರಸ್ತುತ ಮೂಲ ವೇತನದ ಶೇ. 14.25 ರಷ್ಟಿದ್ದ ತುಟ್ಟಿಭತ್ಯೆಯನ್ನು ಶೇ. 15.75 ಕ್ಕೆ ಏರಿಸಲಾಗಿದೆ.
ಯಾರಿಗೆ ಅನ್ವಯ?
ಈ ಹೆಚ್ಚಳವು ರಾಜ್ಯ ಸರ್ಕಾರಿ ನೌಕರರು, ನಿವೃತ್ತಿ ವೇತನದಾರರು/ಕುಟುಂಬ ನಿವೃತ್ತಿ ವೇತನದಾರರು, ಅನುದಾನಿತ ಶಿಕ್ಷಣ ಸಂಸ್ಥೆಗಳ ನೌಕರರು ಹಾಗೂ ಯುಜಿಸಿ/ಎಐಸಿಟಿಇ/ಐಸಿಎಆರ್ ವೇತನ ಶ್ರೇಣಿಯ ನಿವೃತ್ತ ನೌಕರರಿಗೂ ಅನ್ವಯವಾಗಲಿದೆ.
ಪೂರ್ವಾನ್ವಯ ಜಾರಿ: ಈ ಪರಿಷ್ಕೃತ ದರವು 2026ರ ಜನವರಿ 1ರಿಂದ ಪೂರ್ವಾನ್ವಯವಾಗುವಂತೆ ಜಾರಿಗೆ ಬರಲಿದೆ.
ಬಾಕಿ ಹಣ ಪಾವತಿ ಹೇಗೆ?
ಆದೇಶದ ಪ್ರಕಾರ, ಜನವರಿ 1 ರಿಂದ ಏಪ್ರಿಲ್ ವರೆಗಿನ ತುಟ್ಟಿಭತ್ಯೆಯ ಬಾಕಿ ಮೊತ್ತವನ್ನು (Arrears), 2026ರ ಮೇ ತಿಂಗಳ ವೇತನ ಅಥವಾ ಪಿಂಚಣಿಯೊಂದಿಗೆ ಪಾವತಿಸಲು ಸೂಚಿಸಲಾಗಿದೆ. ಅಂದರೆ, ಮೇ ತಿಂಗಳ ಸಂಬಳದಲ್ಲಿ ನೌಕರರು ಈ ಹೆಚ್ಚುವರಿ ಮೊತ್ತವನ್ನು ಒಟ್ಟಾಗಿ ಪಡೆಯಲಿದ್ದಾರೆ.
ಪ್ರಮುಖ ಸೂಚನೆಗಳು:
ಮೂಲ ವೇತನದ ವ್ಯಾಖ್ಯಾನ: ತುಟ್ಟಿಭತ್ಯೆಯ ಲೆಕ್ಕಾಚಾರಕ್ಕಾಗಿ ‘ಮೂಲ ವೇತನ’ ಎಂದರೆ ನೌಕರರು ಪಡೆಯುತ್ತಿರುವ ವೇತನ ಶ್ರೇಣಿಯ ವೇತನ ಹಾಗೂ ಅದರಲ್ಲಿನ ಸ್ಥಗಿತ ವೇತನ ಬಡ್ತಿ ಮತ್ತು ವೈಯಕ್ತಿಕ ವೇತನಗಳನ್ನು ಮಾತ್ರ ಒಳಗೊಂಡಿರುತ್ತದೆ.
ನಗದು ಪಾವತಿ: ಈ ಹೆಚ್ಚುವರಿ ತುಟ್ಟಿಭತ್ಯೆಯನ್ನು ಮುಂದಿನ ಆದೇಶದವರೆಗೆ ನಗದು ರೂಪದಲ್ಲೇ ಪಾವತಿಸಲಾಗುತ್ತದೆ. 50 ಪೈಸೆ ಮತ್ತು ಅದಕ್ಕಿಂತ ಹೆಚ್ಚಿನ ಭಿನ್ನಾಂಕಗಳನ್ನು ಮುಂದಿನ ರೂಪಾಯಿಗೆ ಪೂರ್ಣಗೊಳಿಸಬೇಕು ಹಾಗೂ 50 ಪೈಸೆಗಿಂತ ಕಡಿಮೆ ಇರುವುದನ್ನು ಕಡೆಗಣಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.ರಾಜ್ಯ ಸರ್ಕಾರದ ಈ ನಿರ್ಧಾರದಿಂದ ಲಕ್ಷಾಂತರ ಸರ್ಕಾರಿ ನೌಕರರ ಕೈಗೆ ಹೆಚ್ಚಿನ ಹಣ ಸಿಗಲಿದ್ದು, ಮೇ ತಿಂಗಳ ವೇತನದಲ್ಲಿ ಈ ಬದಲಾವಣೆ ಪ್ರತಿಫಲಿಸಲಿದೆ.









