ಪ್ರೀತಿಸಿ ಮದುವೆಯಾದ ಪತ್ನಿಯ ಮೇಲೆ ಅನುಮಾನದ ಎಂಬ ವಿಷಬೀಜ ಮೊಳೆದಾಗ, ಆ ಸಂಸಾರ ಸ್ಮಶಾನವಾಗುತ್ತದೆ ಎಂಬುದಕ್ಕೆ ಆಂಧ್ರಪ್ರದೇಶದ ಸೂರ್ಯಾಪೇಟೆ ಜಿಲ್ಲೆಯ ಕೋದಾಡದಲ್ಲಿ ನಡೆದ ಈ ಘಟನೆಯೇ ಸಾಕ್ಷಿ. ಎರಡು ವರ್ಷದ ಮಗನಿದ್ದಾನೆ ಎಂಬ ಕರುಣೆಯೂ ಇಲ್ಲದೆ, ಪತಿಯೊಬ್ಬ ತನ್ನ ಪತ್ನಿಯನ್ನೇ ಸಾರ್ವಜನಿಕವಾಗಿ ಹತ್ಯೆ ಮಾಡಿದ್ದಾನೆ.
ಕೋದಾಡ ನಿವಾಸಿ ಮಣಿದೀಪ್ ವೃತ್ತಿಯಲ್ಲಿ ಲಾರಿ ಚಾಲಕನಾಗಿದ್ದಾನೆ. ಆರು ವರ್ಷಗಳ ಹಿಂದೆ ಆಂಧ್ರಪ್ರದೇಶದ ಜಗ್ಗಯ್ಯಪೇಟೆಯ ಶಿರೀಷಾ ಎಂಬಾಕೆಯನ್ನು ಪ್ರೀತಿಸಿ ಮದುವೆಯಾಗಿದ್ದನು. ಇವರಿಗೆ ಎರಡು ವರ್ಷದ ಮಗನೂ ಇದ್ದಾನೆ.
ಕೆಲವು ಸಮಯದಿಂದ ಮಣಿದೀಪ್ ತನ್ನ ಪತ್ನಿಯ ನಡತೆಯ ಮೇಲೆ ಅನುಮಾನ ಪಡಲು ಶುರುಮಾಡಿದ್ದನು. ಇದರಿಂದಾಗಿ ದಂಪತಿಗಳ ನಡುವೆ ಪ್ರತಿದಿನ ಜಗಳ ನಡೆಯುತ್ತಿತ್ತು. ಪತಿಯ ಕಿರುಕುಳ ತಾಳಲಾರದೆ ಶಿರೀಷಾ ಈ ಹಿಂದೆ ಪೊಲೀಸರಿಗೂ ದೂರು ನೀಡಿದ್ದರು. ಹಿರಿಯರು ಸಂಧಾನ ಮಾಡಿದರೂ ಮಣಿದೀಪ್ ನಡವಳಿಕೆಯಲ್ಲಿ ಬದಲಾವಣೆ ಇರಲಿಲ್ಲ.
ಎರಡು ದಿನಗಳ ಹಿಂದೆ ಮತ್ತೆ ಗಲಾಟೆ ನಡೆದಿದ್ದರಿಂದ, ಶಿರೀಷಾ ತನ್ನ ಮಗನೊಂದಿಗೆ ಹೈದರಾಬಾದ್ನಲ್ಲಿರುವ ಅಕ್ಕನ ಮನೆಗೆ ಹೋಗಿದ್ದರು. ಆದರೆ, ತನ್ನ ಪತ್ನಿ ಮನೆಯಲ್ಲಿದ್ದ 40,000 ರೂಪಾಯಿ ಹಣವನ್ನು ತೆಗೆದುಕೊಂಡು ಹೋಗಿದ್ದಾಳೆ ಎಂದು ಮಣಿದೀಪ್ ಪೊಲೀಸರಿಗೆ ದೂರು ನೀಡಿದ್ದನು. ಈ ಬಗ್ಗೆ ವಿಚಾರಣೆಗೆ ಹಾಜರಾಗಲು ಶಿರೀಷಾ ತನ್ನ ಮಗ ಮತ್ತು ದೊಡ್ಡಮ್ಮನ ಜೊತೆ ಕೋದಾಡ ಪೊಲೀಸ್ ಠಾಣೆಗೆ ಬಂದಿದ್ದರು. ರಾತ್ರಿಯಾದ ಕಾರಣ ಮರುದಿನ ಬರುವಂತೆ ಪೊಲೀಸರು ತಿಳಿಸಿ ಕಳುಹಿಸಿದ್ದರು.
ಠಾಣೆಯಿಂದ ಹೊರಬಂದ ಶಿರೀಷಾ, ಜಗ್ಗಯ್ಯಪೇಟೆಗೆ ಹೋಗಲು ಆಟೋ ಹತ್ತುತ್ತಿದ್ದಾಗ ಹೊಂಚು ಹಾಕುತ್ತಿದ್ದ ಮಣಿದೀಪ್ ಏಕಾಏಕಿ ಕತ್ತಿಯಿಂದ ಆಕೆಯ ಮೇಲೆ ದಾಳಿ ಮಾಡಿದ್ದಾನೆ. ಪ್ರಾಣ ಉಳಿಸಿಕೊಳ್ಳಲು ಶಿರೀಷಾ ಹತ್ತಿರದ ಟೀ ಅಂಗಡಿಗೆ ಓಡಿದರೂ ಬಿಡದ ಪತಿ, ಎಲ್ಲರ ಕಣ್ಣೆದುರೇ ಆಕೆಯನ್ನು ಮನಬಂದಂತೆ ಚುಚ್ಚಿ ಕೊಂದಿದ್ದಾನೆ. ತೀವ್ರ ರಕ್ತಸ್ರಾವದಿಂದ ಶಿರೀಷಾ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.








