ಬೆಂಗಳೂರು: ಕರ್ನಾಟಕದಲ್ಲಿ ವಿವಾಹದ ಆಯ್ಕೆಯ ಸ್ವಾತಂತ್ರ್ಯವನ್ನು ಎತ್ತಿಹಿಡಿಯಲು ಮತ್ತು ಮರ್ಯಾದೆ ಹಾಗೂ ಸಂಪ್ರದಾಯದ ಹೆಸರಿನಲ್ಲಿ ನಡೆಯುವ ಅಪರಾಧಗಳನ್ನು ತಡೆಯಲು ರಾಜ್ಯ ಸರ್ಕಾರವು ‘ಇವ ನಮ್ಮವ’ (ಕರ್ನಾಟಕ ವಿವಾಹದಲ್ಲಿ ಆಯ್ಕೆಯ ಸ್ವಾತಂತ್ರ್ಯ ಹಾಗೂ ಮರ್ಯಾದೆ ಮತ್ತು ಸಂಪ್ರದಾಯದ ಹೆಸರಿನಲ್ಲಿ ಅಪರಾಧಗಳ ಪ್ರತಿಬಂಧಕ, ನಿಷೇಧ ಕಾಯ್ದೆ-2026) ಅನ್ನು ಅಧಿಕೃತವಾಗಿ ಜಾರಿಗೆ ತಂದಿದೆ. ಮಂಗಳವಾರ ಈ ಕುರಿತು ಸರ್ಕಾರ ಅಧಿಸೂಚನೆ ಹೊರಡಿಸಿದೆ.
ಕಾಯ್ದೆಯ ಪ್ರಮುಖ ಉದ್ದೇಶಗಳು:
ಜಾತಿ ಆಧಾರಿತ ಅಪರಾಧಗಳ ಮೂಲಕ ನಡೆಯುವ ಮಾನವ ಹಕ್ಕು ಉಲ್ಲಂಘನೆ ತಡೆಯುವುದು.
ಅಂತರ್ಜಾತಿ ವಿವಾಹಗಳಿಗೆ ಗೌರವ ನೀಡುವುದು ಮತ್ತು ವೈಯಕ್ತಿಕ ಆಯ್ಕೆಗಳ ಮೇಲೆ ಜಾತಿ ಆಧಾರಿತ ಬಲವಂತದ ಭೇದಭಾವವನ್ನು ತಡೆಯುವುದು.
ಪ್ರಾಪ್ತ ವಯಸ್ಕ ಗಂಡು-ಹೆಣ್ಣು ಪರಸ್ಪರ ಒಪ್ಪಿ ಮದುವೆಯಾಗಲು ಯಾರ ಅನುಮತಿಯೂ ಬೇಕಿಲ್ಲ ಹಾಗೂ ಕುಟುಂಬದವರಿಂದ ಯಾವುದೇ ಅಡೆತಡೆ ಇಲ್ಲದಂತೆ ವಿವಾಹವಾಗುವ ಹಕ್ಕನ್ನು ಖಚಿತಪಡಿಸುವುದು.
ಯಾವೆಲ್ಲಾ ಕೃತ್ಯಗಳು ಅಪರಾಧ?
ಈ ಹೊಸ ಕಾನೂನಿನ ಅಡಿಯಲ್ಲಿ ಈ ಕೆಳಗಿನವುಗಳನ್ನು ಶಿಕ್ಷಾರ್ಹ ಅಪರಾಧವೆಂದು ಪರಿಗಣಿಸಲಾಗುತ್ತದೆ:
ವಿವಾಹಿತ ಅಥವಾ ಪ್ರೇಮಿಗಳ ಮೇಲೆ ಸಂಬಂಧಿಕರು ಅಥವಾ ಸ್ನೇಹಿತರು ನಡೆಸುವ ದೈಹಿಕ ಹಲ್ಲೆ ಮತ್ತು ಕೊಲೆ.
ಅಂತರ್ಜಾತಿ ವಿವಾಹಿತರಿಗೆ ಕಿರುಕುಳ ನೀಡುವುದು ಅಥವಾ ಅವರನ್ನು ಬೇರ್ಪಡಿಸಲು ಯತ್ನಿಸುವುದು.
ಅಪಹರಣ, ಸಾಮಾಜಿಕ ಮತ್ತು ಆರ್ಥಿಕ ಬಹಿಷ್ಕಾರ ಹಾಗೂ ದಂಪತಿಗಳನ್ನು ಅಥವಾ ಅವರ ಕುಟುಂಬವನ್ನು ಗ್ರಾಮದಿಂದ ಹೊರಹಾಕುವುದು.
ದಂಪತಿಗಳ ವಿರುದ್ಧ ತಿಥಿ ಅಥವಾ ಅಂತ್ಯಕ್ರಿಯೆ ಶಾಸ್ತ್ರಗಳನ್ನು ಮಾಡುವುದು.
ಮದುವೆಯಾದ ಜೋಡಿಗಳನ್ನು ಬಲವಂತವಾಗಿ ಅಣ್ಣ-ತಂಗಿ ಎಂದು ಘೋಷಿಸುವುದು ಅಥವಾ ಮನೆಯಲ್ಲಿ ಬಂಧಿಯಾಗಿಡುವುದು.
ಆಸ್ತಿ ಹಕ್ಕುಗಳಲ್ಲಿ ಹಸ್ತಕ್ಷೇಪ ಮಾಡುವುದು ಮತ್ತು ದ್ವೇಷ ಹರಡುವುದು.
ಕಠಿಣ ಶಿಕ್ಷೆಯ ವಿವರಗಳು:
ಕಾಯ್ದೆಯ ಉಲ್ಲಂಘನೆಯಾದಲ್ಲಿ ಈ ಕೆಳಗಿನ ಶಿಕ್ಷೆಗಳನ್ನು ವಿಧಿಸಲಾಗುತ್ತದೆ:
ಮರ್ಯಾದೆ ಹತ್ಯೆ: ಕನಿಷ್ಠ 5 ವರ್ಷಗಳ ಶಿಕ್ಷೆ.
ಗಂಭೀರ ಹಲ್ಲೆ: ಕನಿಷ್ಠ 3 ವರ್ಷಗಳ ಜೈಲು ಶಿಕ್ಷೆ.
ಸಣ್ಣಪುಟ್ಟ ಹಲ್ಲೆ: 2 ವರ್ಷಗಳ ಕಠಿಣ ಸೆರೆಮನೆ ವಾಸ ಮತ್ತು 3 ಲಕ್ಷ ರೂ. ದಂಡ.
ವಂಚನೆಯ ಮದುವೆ: ಮದುವೆ ಆಮಿಷವೊಡ್ಡಿ ಲೈಂಗಿಕ ಸಂಪರ್ಕ ನಡೆಸಿ, ನಂತರ ಜಾತಿ ಕಾರಣಕ್ಕೆ ಮದುವೆ ನಿರಾಕರಿಸಿದರೆ ಜೀವಾವಧಿ ಶಿಕ್ಷೆ ವಿಧಿಸಲು ಅವಕಾಶವಿದೆ.
ಈ ಕಾಯ್ದೆಯು ಅಂತರ್ಜಾತಿ ವಿವಾಹವಾಗುವವರಿಗೆ ರಕ್ಷಣೆ ನೀಡಲು ‘ಇವ ನಮ್ಮವ’ ವೇದಿಕೆಯನ್ನು ಸ್ಥಾಪಿಸಲು ಕೂಡ ನಿಯಮ ರೂಪಿಸಿದೆ.








