ಬೆಂಗಳೂರು: ರಾಜ್ಯದ ಹಲವು ನಗರಗಳಲ್ಲಿ ಕಳೆದ ಕೆಲವು ದಿನಗಳಿಂದ ಗಾಳಿಯ ಗುಣಮಟ್ಟದಲ್ಲಿ ಏರುಪೇರು ಕಂಡುಬರುತ್ತಿದ್ದು, ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ವಿಶೇಷವಾಗಿ ಕರಾವಳಿ ಭಾಗದ ಪ್ರಮುಖ ನಗರಗಳಾದ ಉಡುಪಿ ಮತ್ತು ಮಂಗಳೂರಿನಲ್ಲಿ ಗಾಳಿಯ ಗುಣಮಟ್ಟ ‘ಕಳಪೆ’ ಮಟ್ಟಕ್ಕೆ ತಲುಪಿದೆ ಎಂದು ವರದಿಯಾಗಿದೆ.
ಶ್ವಾಸಕೋಶದ ಕಾಯಿಲೆಗಳ ಎಚ್ಚರಿಕೆ
ಗಾಳಿಯ ಗುಣಮಟ್ಟ ಕುಸಿಯುತ್ತಿರುವುದರಿಂದ ನಗರವಾಸಿಗಳಲ್ಲಿ ಶ್ವಾಸಕೋಶಕ್ಕೆ ಸಂಬಂಧಿಸಿದ ಕಾಯಿಲೆಗಳು ಕಾಣಿಸಿಕೊಳ್ಳುವ ಸಾಧ್ಯತೆ ಇದೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ. ಮಾಲಿನ್ಯಯುತ ಗಾಳಿಯಿಂದಾಗಿ ಉಸಿರಾಟದ ತೊಂದರೆಗಳು ಎದುರಾಗಬಹುದು ಎಂಬ ಭೀತಿ ಜನರಲ್ಲಿ ಮನೆಮಾಡಿದೆ.
ಕಳೆದ ಕೆಲವು ದಿನಗಳಿಂದ ಬೆಂಗಳೂರಿನಲ್ಲಿ ಗಾಳಿಯ ಗುಣಮಟ್ಟ ಕಳಪೆ ಹಂತ ತಲುಪಿತ್ತಾದರೂ, ಮಂಗಳವಾರದ ವೇಳೆಗೆ ಸುಧಾರಣೆ ಕಂಡುಬಂದಿದೆ. ದೇಶದ ಇತರ ಮೆಟ್ರೋ ನಗರಗಳಿಗೆ ಹೋಲಿಸಿದರೆ ಬೆಂಗಳೂರಿನಲ್ಲಿ ಸದ್ಯ ಗಾಳಿಯ ಗುಣಮಟ್ಟ ಉತ್ತಮವಾಗಿದೆ. ಈ ಹಿಂದೆ ತೀವ್ರ ಕಳಪೆ ಮಟ್ಟಕ್ಕೆ ಇಳಿದಿದ್ದ ಹುಬ್ಬಳ್ಳಿಯ ಏರ್ ಕ್ವಾಲಿಟಿ ಇಂಡೆಕ್ಸ್ (AQI) ಈಗ 52ಕ್ಕೆ ತಲುಪುವ ಮೂಲಕ ಗಣನೀಯ ಸುಧಾರಣೆ ಕಂಡಿದೆ.








