ಶಿವಮೊಗ್ಗ: ಬೇಸೂರು ಭಾಗದಲ್ಲಿ ಉದ್ದೇಶಿತ ಅಣು ವಿದ್ಯುತ್ ಸ್ಥಾವರದ ವಿರುದ್ಧ ಈಗಲೇ ಸಂಘಟಿತ ಹೋರಾಟ ನಡೆಸದಿದ್ದರೆ ಮಲೆನಾಡಿಗೆ ಭವಿಷ್ಯದಲ್ಲಿ ದೊಡ್ಡ ಅಪಾಯ ಕಟ್ಟಿಟ್ಟ ಬುತ್ತಿ ಎಂದು ಜನಪರ ಸಂಘಟನೆಗಳ ಒಕ್ಕೂಟದ ಸಂಚಾಲಕ ಎಚ್.ಬಿ. ರಾಘವೇಂದ್ರ ಎಚ್ಚರಿಕೆ ನೀಡಿದ್ದಾರೆ.
ಇತಿಹಾಸದ ಪಾಠ ಮತ್ತು ಸಂಘಟನೆಯ ಅಗತ್ಯ
ಇಂದು ಶಿವಮೊಗ್ಗ ಜಿಲ್ಲೆಯ ಸಾಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಷ್ಯಾದ ಚರ್ನೋಬಿಲ್ ಅಣು ಸ್ಥಾವರ ದುರಂತದ ಕಹಿ ನೆನಪುಗಳು ನಮ್ಮ ಕಣ್ಣಮುಂದಿವೆ. ಹಿಂದೆ ಕೈಗಾ ಅಣು ಸ್ಥಾವರದ ವಿರುದ್ಧ ಕುಸುಮಾ ಸೊರಬ ಹಾಗೂ ಶಿವರಾಂ ಕಾರಂತ ಅವರು ನಡೆಸಿದ ಹೋರಾಟಕ್ಕೆ ಸಮೂಹದ ಬೆಂಬಲ ಸಿಗದ ಕಾರಣ ಅದು ವಿಫಲವಾಯಿತು. ಅದೇ ತಪ್ಪು ಬೇಸೂರು ವಿಚಾರದಲ್ಲಿ ಮರುಕಳಿಸಬಾರದು. ಈ ಯೋಜನೆ ಅನುಷ್ಠಾನಕ್ಕೆ ಬರುವ ಮುನ್ನ ಸಂಸದರ ಗಮನಕ್ಕೆ ಬಂದಿಲ್ಲವೇ ಎಂದು ಅವರು ಪ್ರಶ್ನಿಸಿದರು.
ಜನಪ್ರತಿನಿಧಿಗಳ ನಿಲುವಿಗೆ ಒತ್ತಾಯ
ಮಾಜಿ ಸಚಿವ ಹರತಾಳು ಹಾಲಪ್ಪ ಅವರು ಪ್ರತಿಭಟನೆಗೆ ಕೇವಲ ಬೆಂಬಲ ನೀಡಿದರೆ ಸಾಲದು. ಕೇಂದ್ರದಲ್ಲಿ ಅವರದ್ದೇ ಸರ್ಕಾರ ಮತ್ತು ಅವರದ್ದೇ ಸಂಸದರು ಇರುವುದರಿಂದ, ಅವರ ಮೇಲೆ ಒತ್ತಡ ತಂದು ಈ ಯೋಜನೆಯನ್ನು ಹಿಂಪಡೆಯುವಂತೆ ಮಾಡಬೇಕು ಎಂದು ರಾಘವೇಂದ್ರ ಒತ್ತಾಯಿಸಿದರು. ಇದೇ ವೇಳೆ ಶಾಸಕರ ನಿಲುವಿನ ಬಗ್ಗೆಯೂ ಅಸಮಾಧಾನ ವ್ಯಕ್ತಪಡಿಸಿದ ಅವರು, ಶಾಸಕರು ‘ಪಂಪ್ಡ್ ಸ್ಟೋರೇಜ್’ ಬೇಕು ಎನ್ನುವ ಪರಿಸರ ವಿರೋಧಿ ಆಲೋಚನೆ ಬಿಟ್ಟು, ಈ ಪ್ರಕರಣದಲ್ಲಿ ದ್ವಂದ್ವ ನಿಲುವು ತಳೆಯಬಾರದು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ರೈತ ಸಂಘದ ಉಪಾಧ್ಯಕ್ಷ ಶಿವಾನಂದ ಕುಗ್ವೆ, ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ಡಿ. ವಸಂತ ಕುಮಾರ್, ಪ್ರಮುಖರಾದಂತ ಸುಂದರ ಸಿಂಗ್, ರಮೇಶ್ ಐಗಿನಬೈಲು ಮತ್ತು ಚಿಪ್ಳಿ ಕೃಷ್ಣಪ್ಪ ಅವರು ಉಪಸ್ಥಿತರಿದ್ದರು.
ವರದಿ; ವಸಂತ ಬಿ ಈಶ್ವರಗೆರೆ, ಸಂಪಾದಕರು..
ಸಾಗರದ ಬೇಸೂರು ಅಣು ವಿದ್ಯುತ್ ಸ್ಥಾವರ ಯೋಜನೆ: ತಕ್ಷಣ ಕೈಬಿಡುವಂತೆ ರೈತ ಸಂಘದ ಉಪಾಧ್ಯಕ್ಷ ಶಿವಾನಂದ ಕುಗ್ವೆ ಆಗ್ರಹ
BREAKING: ‘ಜನರು ಮೊದಲು, ನಂತರ ರಾಜಕೀಯ’: TVK ಪಕ್ಷ ಭರ್ಜರಿ ಗೆಲುವಿನ ನಂತರ ‘ದಳಪತಿ ವಿಜಯ್’ ಫಸ್ಟ್ ರಿಯಾಕ್ಷನ್








