ಬೆಂಗಳೂರು: ರಾಜ್ಯದ ಜನತೆಗೆ ಆಸ್ತಿ ನೋಂದಣಿ ಪ್ರಕ್ರಿಯೆಯಲ್ಲಿ ದೊಡ್ಡ ಬದಲಾವಣೆಯೊಂದು ಎದುರಾಗಲಿದೆ. ಸಬ್ ರಿಜಿಸ್ಟ್ರಾರ್ ಕಚೇರಿಗಳಲ್ಲಿ ಇನ್ನು ಮುಂದೆ ದಸ್ತಾವೇಜುಗಳ ನೋಂದಣಿ ಸಂಪೂರ್ಣವಾಗಿ ‘ಕಾಗದರಹಿತ’ (Paperless) ವಾಗಲಿದ್ದು, ಈ ಮಹತ್ವದ ಯೋಜನೆಗೆ ಇಂದು ಚಾಮರಾಜನಗರದಲ್ಲಿ ಚಾಲನೆ ಸಿಗಲಿದೆ.
ನೋಂದಣಿ ಮತ್ತು ಮುದ್ರಾಂಕ ಇಲಾಖೆಯು ಕಾವೇರಿ 2.0 ತಂತ್ರಾಂಶವನ್ನು ಈ ನಿಟ್ಟಿನಲ್ಲಿ ಅಪ್ಡೇಟ್ ಮಾಡಿದ್ದು, ಚಾಮರಾಜನಗರ ಜಿಲ್ಲೆಯ ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ಗುರುವಾರದಿಂದ ಪ್ರಾಯೋಗಿಕವಾಗಿ ಈ ವ್ಯವಸ್ಥೆ ಜಾರಿಗೆ ಬರಲಿದೆ. ಇದರ ಸಾಧಕ-ಬಾಧಕಗಳನ್ನು ಪರಿಶೀಲಿಸಿದ ಬಳಿಕ ರಾಜ್ಯಾದ್ಯಂತ ಹಂತ ಹಂತವಾಗಿ ವಿಸ್ತರಿಸಲು ಸರ್ಕಾರ ನಿರ್ಧರಿಸಿದೆ.
ಹೇಗಿರಲಿದೆ ಹೊಸ ವ್ಯವಸ್ಥೆ?
ಈ ಹೊಸ ಕ್ರಮದಡಿ, ಆಸ್ತಿ ನೋಂದಣಿಯಾದ ನಂತರ ಭೌತಿಕವಾಗಿ ಯಾವುದೇ ದಾಖಲೆ ಪತ್ರಗಳನ್ನು ಕೈಗೆ ನೀಡುವುದಿಲ್ಲ. ಬದಲಾಗಿ ಎಲ್ಲವೂ ಡಿಜಿಟಲ್ ರೂಪದಲ್ಲಿ ಇರಲಿದೆ.
ಡಿಜಿಟಲ್ ಶೇಖರಣೆ: ನೋಂದಾಯಿತ ದಾಖಲೆಗಳು ಸ್ವಯಂಚಾಲಿತವಾಗಿ ಕಂದಾಯ ಇಲಾಖೆಯ ‘ಕರ್ನಾಟಕ ನೋಂದಾಯಿತ ದಾಖಲೆ ಸಂಗ್ರಹಾಲಯ’ ಮತ್ತು ಡಿಜಿ ಲಾಕರ್ (DigiLocker) ನಲ್ಲಿ ಸಂಗ್ರಹವಾಗಲಿವೆ.
ಲಾಗಿನ್ ಐಡಿ ಮೂಲಕ ಲಭ್ಯ: ಗ್ರಾಹಕರಿಗೆ ಲಾಗಿನ್ ಐಡಿ ಮತ್ತು ಪಾಸ್ವರ್ಡ್ ನೀಡಲಾಗುವುದು. ಯಾವುದೇ ವ್ಯವಹಾರವಿದ್ದರೂ ಇದರ ಮೂಲಕವೇ ನಡೆಸಬೇಕಾಗುತ್ತದೆ.
ವಿಶಿಷ್ಟ ಸಂಖ್ಯೆ: ದಾಖಲೆಗಳನ್ನು ಡೌನ್ಲೋಡ್ ಮಾಡಲು ಅಥವಾ ಮುದ್ರಿಸಲು ವಿಶಿಷ್ಟ ದಾಖಲೆ ಸಂಖ್ಯೆಯನ್ನು ನೀಡಲಾಗುತ್ತದೆ. ಈ ಡಿಜಿಟಲ್ ದಾಖಲೆಯು ಕಾನೂನುಬದ್ಧವಾಗಿ ಮಾನ್ಯತೆ ಹೊಂದಿರುತ್ತದೆ.
ನೋಂದಣಿ ಪ್ರಕ್ರಿಯೆ ಹೇಗೆ ನಡೆಯುತ್ತದೆ?
ಆನ್ಲೈನ್ ಅಪ್ಲೋಡ್: ಮೊದಲು ಕಾವೇರಿ 2.0 ಸಿಟಿಜನ್ ಲಾಗಿನ್ನಲ್ಲಿ ದಸ್ತಾವೇಜುಗಳನ್ನು ಅಪ್ಲೋಡ್ ಮಾಡಬೇಕು.
ಅಧಿಕಾರಿಗಳ ಪರಿಶೀಲನೆ: ಸಬ್ ರಿಜಿಸ್ಟ್ರಾರ್ ದಾಖಲೆಗಳನ್ನು ಪರಿಶೀಲಿಸಿ ಸರಿ ಇದ್ದಲ್ಲಿ ಶುಲ್ಕ ಪಾವತಿಗೆ ಅನುಮೋದನೆ ನೀಡುತ್ತಾರೆ. ಏನಾದರೂ ದೋಷವಿದ್ದರೆ ವಾಪಸ್ ಕಳುಹಿಸುತ್ತಾರೆ.
ಡಿಜಿಟಲ್ ಸಹಿ: ನೋಂದಣಿ ಮತ್ತು ಮುದ್ರಾಂಕ ಶುಲ್ಕವನ್ನು ಆನ್ಲೈನ್ನಲ್ಲಿ ಪಾವತಿಸಿದ ನಂತರ, ಪಕ್ಷಕಾರರು ಆಧಾರ್ ಆಧಾರಿತ ಡಿಜಿಟಲ್ ಸಿಗ್ನೇಚರ್ (E-Sign) ಮೂಲಕ ಸಹಿ ಮಾಡಬೇಕು.
ಅಂತಿಮ ಹಂತ: ಕಚೇರಿಯಲ್ಲಿ ಪಕ್ಷಕಾರರು ಮತ್ತು ಸಾಕ್ಷಿಗಳ ಫೋಟೋ ಹಾಗೂ ಬೆರಳಚ್ಚು ಗುರುತನ್ನು ಡಿಜಿಟಲ್ ಯಂತ್ರದ ಮೂಲಕ ಪಡೆಯಲಾಗುತ್ತದೆ. ಅಂತಿಮವಾಗಿ ಸಬ್ ರಿಜಿಸ್ಟ್ರಾರ್ ಕೂಡ ಡಿಜಿಟಲ್ ಸಹಿ ಮಾಡುವ ಮೂಲಕ ಪ್ರಕ್ರಿಯೆ ಪೂರ್ಣಗೊಳಿಸುತ್ತಾರೆ.
ಮುಖ್ಯ ಅಂಶ: ಕಂದಾಯ ಇಲಾಖೆಯ ಡೇಟಾಬೇಸ್ನಲ್ಲಿರುವ ಮಾಹಿತಿಯೇ ಇನ್ನು ಮುಂದೆ ‘ಅಸಲಿ ದಾಖಲೆ’ ಎಂದು ಪರಿಗಣಿತವಾಗುತ್ತದೆ. ಸಾರ್ವಜನಿಕರು ಅಗತ್ಯವಿದ್ದಾಗ ಅಧಿಕೃತವಾಗಿ ಸರ್ಟಿಫೈಡ್ ಕಾಪಿಗಳನ್ನು ಪಡೆದುಕೊಳ್ಳಬಹುದು.








