ನವದೆಹಲಿ: ತುಟ್ಟಿಭತ್ಯೆ (DA) ಮತ್ತು ತುಟ್ಟಿ ಪರಿಹಾರ (DR) ಹೆಚ್ಚಳ ಮಾಡುವ ವಿಚಾರದಲ್ಲಿ ರಾಜ್ಯ ಸರ್ಕಾರಗಳು ಸೇವೆಯಲ್ಲಿರುವ ನೌಕರರು ಮತ್ತು ನಿವೃತ್ತ ಪೆನ್ಷನರ್ ಗಳ ನಡುವೆ ಯಾವುದೇ ತಾರತಮ್ಯ ಮಾಡುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪು ನೀಡಿದೆ.
ಕೇರಳ ಸರ್ಕಾರ ಮತ್ತು ಕೆಎಸ್ಆರ್ಟಿಸಿ (KSRTC) ಸಲ್ಲಿಸಿದ್ದ ಮೇಲ್ಮನವಿಗಳನ್ನು ವಜಾಗೊಳಿಸಿದ ನ್ಯಾಯಮೂರ್ತಿ ಮನೋಜ್ ಮಿಶ್ರಾ ಮತ್ತು ನ್ಯಾಯಮೂರ್ತಿ ಪ್ರಸನ್ನ ಬಿ. ವರಾಳೆ ಅವರಿದ್ದ ಪೀಠವು ಈ ಮಹತ್ವದ ಆದೇಶ ಹೊರಡಿಸಿದೆ.
ತಾರತಮ್ಯಕ್ಕೆ ಅವಕಾಶವಿಲ್ಲ: ಸಮಾನತೆಯ ಹಕ್ಕು ಎಂಬುದು ಒಂದು ಕ್ರಿಯಾತ್ಮಕ ಪರಿಕಲ್ಪನೆಯಾಗಿದ್ದು, ಅದನ್ನು ಯಾವುದೇ ಮಿತಿಗಳಲ್ಲಿ ಬಂಧಿಸಲು ಸಾಧ್ಯವಿಲ್ಲ. ಸಂವಿಧಾನದ 14ನೇ ವಿಧಿಯು ಯಾವುದೇ ರೀತಿಯ ‘ಅಸಮರ್ಪಕ ವರ್ಗೀಕರಣ’ಕ್ಕೆ ಅವಕಾಶ ನೀಡುವುದಿಲ್ಲ.
ಬೆಲೆ ಏರಿಕೆಯ ಹೊರೆ ಸಮಾನ: ಬೆಲೆ ಏರಿಕೆಯ ಬಿಸಿ ಸರ್ಕಾರಿ ನೌಕರರಿಗೂ ಮತ್ತು ಪೆನ್ಷನರ್ಗಳಿಗೂ ಸಮಾನವಾಗಿಯೇ ತಟ್ಟುತ್ತದೆ. ಹೀಗಿರುವಾಗ ಉಭಯ ಗುಂಪುಗಳಿಗೆ ಬೇರೆ ಬೇರೆ ದರದಲ್ಲಿ ಡಿಎ ನೀಡುವುದು ತರ್ಕಬದ್ಧವಲ್ಲ.
ಸರ್ಕಾರದ ಜವಾಬ್ದಾರಿ: ಪಿಂಚಣಿ ಎಂಬುದು ಸರ್ಕಾರ ನೀಡುವ ಭಿಕ್ಷೆಯಲ್ಲ, ಅದು ಉದ್ಯೋಗಿಗಳ ಸಾಂವಿಧಾನಿಕ ಹಕ್ಕು. ಹಣದ ಕೊರತೆಯ ನೆಪವೊಡ್ಡಿ ಹಿರಿಯ ನಾಗರಿಕರ ಹಕ್ಕನ್ನು ಕಸಿಯುವಂತಿಲ್ಲ.
ತೀರ್ಪಿನ ನೇರ ಪರಿಣಾಮ ಯಾರ ಮೇಲೆ?
ಸುಪ್ರೀಂ ಕೋರ್ಟ್ನ ಈ ಸ್ಪಷ್ಟ ನಿಲುವಿನಿಂದಾಗಿ ಇನ್ನು ಮುಂದೆ ದೇಶದ ಯಾವುದೇ ರಾಜ್ಯ ಸರ್ಕಾರಗಳು ಪೆನ್ಷನರ್ಗಳಿಗೆ ನೀಡುವ ತುಟ್ಟಿಭತ್ಯೆಯಲ್ಲಿ ಕಡಿತ ಮಾಡುವಂತಿಲ್ಲ ಅಥವಾ ನೌಕರರಿಗೆ ಹೋಲಿಸಿದರೆ ಕಡಿಮೆ ದರ ನಿಗದಿಪಡಿಸುವಂತಿಲ್ಲ. ಈ ನಿರ್ಧಾರವು ದೇಶಾದ್ಯಂತ ಇರುವ ಲಕ್ಷಾಂತರ ನಿವೃತ್ತ ಸರ್ಕಾರಿ ನೌಕರರಿಗೆ ದೊಡ್ಡ ಮಟ್ಟದ ಆರ್ಥಿಕ ನೆಮ್ಮದಿ ನೀಡಲಿದೆ.
ಉದ್ದೇಶ ಒಂದೇ ಆಗಿರುವಾಗ (ಬೆಲೆ ಏರಿಕೆಯಿಂದ ರಕ್ಷಣೆ), ಎರಡು ಬೇರೆ ಬೇರೆ ಮಾನದಂಡಗಳು ನಡೆಯುವುದಿಲ್ಲ” ಎಂದು ನ್ಯಾಯಾಲಯ ಸರ್ಕಾರಗಳಿಗೆ ಚಾಟಿ ಬೀಸಿದೆ.








