ನವದೆಹಲಿ: ಕೇಂದ್ರ ಮುಖ್ಯ ಚುನಾವಣಾ ಆಯುಕ್ತ (CEC) ಜ್ಞಾನೇಶ್ ಕುಮಾರ್ ಅವರನ್ನು ಅಧಿಕಾರದಿಂದ ತೆಗೆದುಹಾಕಬೇಕು ಎಂದು ಕೋರಿ ವಿರೋಧ ಪಕ್ಷದ 193 ಸಂಸದರು ಸಲ್ಲಿಸಿದ್ದ ಮರುಪರಿಶೀಲನಾ ಅರ್ಜಿ ಅಥವಾ ಮಹಾಭಿಯೋಗ (Impeachment) ನೋಟಿಸ್ ಅನ್ನು ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಮತ್ತು ರಾಜ್ಯಸಭಾ ಅಧ್ಯಕ್ಷ ಸಿ.ಪಿ. ರಾಧಾಕೃಷ್ಣನ್ ಅವರು ತಿರಸ್ಕರಿಸಿದ್ದಾರೆ. ಈ ಮೂಲಕ ಚುನಾವಣಾ ಆಯೋಗದ ಮುಖ್ಯಸ್ಥರ ವಿರುದ್ಧ ಸಂಸತ್ತಿನಲ್ಲಿ ನಡೆದ ಮೊದಲ ಪದಚ್ಯುತಿ ಪ್ರಯತ್ನಕ್ಕೆ ತೆರೆ ಬಿದ್ದಿದೆ.
ಎಲ್ಲಾ ಅಂಶಗಳನ್ನು ಕೂಲಂಕಷವಾಗಿ ಮತ್ತು ವಸ್ತುನಿಷ್ಠವಾಗಿ ಪರಿಶೀಲಿಸಿದ ನಂತರ, ಜ್ಞಾನೇಶ್ ಕುಮಾರ್ ಅವರ ವಿರುದ್ಧ ಸಲ್ಲಿಕೆಯಾದ ನೋಟಿಸ್ನಲ್ಲಿ ಯಾವುದೇ ಬಲವಾದ ಆಧಾರಗಳಿಲ್ಲದ ಕಾರಣ ಅದನ್ನು ಅಂಗೀಕರಿಸಲು ನಿರಾಕರಿಸಲಾಗಿದೆ ಎಂದು ಎರಡೂ ಸದನಗಳ ಸಚಿವಾಲಯಗಳು ಪ್ರಕಟಿಸಿವೆ.
ಮಾರ್ಚ್ 12, 2026 ರಂದು ಲೋಕಸಭೆಯ 130 ಮತ್ತು ರಾಜ್ಯಸಭೆಯ 63 ಸಂಸದರು (ಒಟ್ಟು 193) ಈ ನೋಟಿಸ್ಗೆ ಸಹಿ ಹಾಕಿದ್ದರು. ತೃಣಮೂಲ ಕಾಂಗ್ರೆಸ್ (TMC) ಮತ್ತು ಕಾಂಗ್ರೆಸ್ ನೇತೃತ್ವದ ಇಂಡಿಯಾ (INDIA) ಮೈತ್ರಿಕೂಟದ ಸದಸ್ಯರು ಈ ನಿರ್ಣಯದ ಮುಂದಾಳತ್ವ ವಹಿಸಿದ್ದರು.
ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ (SIR) ಪಕ್ಷಪಾತ, ಚುನಾವಣಾ ಅಕ್ರಮಗಳ ತನಿಖೆಗೆ ಅಡ್ಡಿ ಮತ್ತು ಪ್ರತಿಪಕ್ಷಗಳ ನಾಯಕರ ಬಗ್ಗೆ ತಾರತಮ್ಯ ಎಸಗಿದ್ದಾರೆ ಎಂಬ 7 ಪ್ರಮುಖ ಆರೋಪಗಳನ್ನು ಸಿಇಸಿ ವಿರುದ್ಧ ಹೊರಿಸಲಾಗಿತ್ತು.
ಯಾವುದೇ ನಿರ್ದಿಷ್ಟ ಕಾರಣ ನೀಡದೆ ನೋಟಿಸ್ ತಿರಸ್ಕರಿಸಲಾಗಿದೆ ಎಂದು ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಕಿಡಿಕಾರಿದ್ದಾರೆ. ಇದು “ಸಂಸದೀಯ ವ್ಯವಸ್ಥೆಯ ಅಪಹಾಸ್ಯ” ಎಂದು ಟೀಕಿಸಿದ್ದಾರೆ.








