ಶಿವಮೊಗ್ಗ: ಜಿಲ್ಲೆಯ ಇತಿಹಾಸ ಪ್ರಸಿದ್ಧ ಸಾಗರದ ಮಾರಿಕಾಂಬ ದೇವಿ ನ್ಯಾಸ ಪ್ರತಿಷ್ಠಾನದ ನೂತನ ಸಮಿತಿಗೆ ಹಳೆಯ ಸಮಿತಿಯ ಅಧ್ಯಕ್ಷರಾದಂತ ಕೆ.ಎನ್ ನಾಗೇಂದ್ರ ಅವರು ಹೊಸ ಸಮಿತಿಯ ಅಧ್ಯಕ್ಷರಾದಂತ ಪವಿತ್ರಾ ನಾಗರಾಜ್ ಅವರಿಗೆ ಅಧಿಕಾರವನ್ನು ಹಸ್ತಾಂತರಿಸಿದೆ.
ಇಂದು ಸಾಗರದ ಮಾರಿಕಾಂಬ ದೇವಸ್ಥಾನದಲ್ಲಿ ನೂತನ ಸಮಿತಿಗೆ ಅಧಿಕಾರ ಹಸ್ತಾಂತರದ ಕಾರ್ಯಕ್ರಮ ನಡೆಯಿತು. ಹಳೆಯ ಸಮಿತಿಯ ಅಧ್ಯಕ್ಷರಾದಂತ ಕೆ.ಎನ್ ನಾಗೇಂದ್ರ, ಪ್ರಧಾನ ಕಾರ್ಯದರ್ಶಿ ಗಿರಿಧರ್ ಜೊತೆಗೂಡಿ ನೂತನ ಸಮಿತಿಯ ಅಧ್ಯಕ್ಷ ಪವಿತ್ರಾ ನಾಗರಾಜ್, ಪ್ರಧಾನ ಕಾರ್ಯದರ್ಶಿ ಎಂ.ಡಿ ಆನಂದ್ ಅವರಿಗೆ ಸಮಿತಿಯ ಲೆಕ್ಕದ ಪುಸ್ತಕಗಳನ್ನು ನೀಡುವ ಮೂಲಕ ಅಧಿಕಾರ ಹಸ್ತಾಂತರಿಸಿದರು.
ನೂತನ ಸಮಿತಿಯ ಅಧ್ಯಕ್ಷರಿಗೆ ಮಾಜಿ ಪ್ರಧಾನ ಕಾರ್ಯದರ್ಶಿ ಗಿರಿಧರ ಭಟ್ ಅವರು ಲೆಕ್ಕ ಪತ್ರ, ಮಾರಿಕಾಂಬೆಗೆ ಬಂದಂತ ಬಂಗಾರ, ಬೆಳ್ಳಿಯ ವಸ್ತುಗಳು ಸೇರಿದಂತೆ ಹಣಕಾಸಿನ ಮಾಹಿತಿಯನ್ನು ಸಭೆಯಲ್ಲಿಯೇ ಸಮಿತಿಯ ಎಲ್ಲರ ಮುಂದೆ ಮಾಹಿತಿ ನೀಡಿದರು. ಜೊತೆಗೆ ಮಾರಿಕಾಂಬ ದೇವಿಯ ಲೆಕ್ಕ ಪತ್ರವನ್ನು ಆಡಿಟ್ ಮಾಡಿಸುವ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಯಿತು.
ಮೇ, ಜೂನ್ ಒಳಗಾಗಿ ಮಾರಿಕಾಂಬ ಸಮಿತಿಯ ಲೆಕ್ಕ ಪತ್ರದ ಆಡಿಟ್ ವಿವರವನ್ನು ನೀಡಲಾಗುತ್ತದೆ. ಜೂನ್ ನಲ್ಲಿ ಜನರಲ್ ಬಾಡಿ ಮೀಟಿಂಗ್ ಕರೆದು ದೇವಸ್ಥಾನದ ಇತರೆ ವಿಚಾರವನ್ನು ಚರ್ಚಿಸಬಹುದಾಗಿ ಎನ್ನುವ ತೀರ್ಮಾನಕ್ಕೆ ಬರಲಾಯಿತು.
ಮಾರಿಕಾಂಬ ದೇವಿ ನ್ಯಾಸ ಪ್ರತಿಷ್ಠಾನದಲ್ಲಿ ಸೇವೆ ಸಲ್ಲಿಸಿದ ಹಿಂದಿನ ಆಡಳಿತ ಮಂಡಳಿ ಸದಸ್ಯರಿಗೆ ಬೀಳ್ಕೊಡುಗೆ ವಿಚಾರವಾಗಿ ಸುಂದರ್ ಸಿಂಗ್ ಅವರು ಆಕ್ಷೇಪ ವ್ಯಕ್ತ ಪಡಿಸಿದರು. ಅಲ್ಲದೇ ಮಾರಿ ತಾಯಿಯ ಸೇವೆ ಸಲ್ಲಿಸಿದ್ದಾರೆ. ಅವರಿಗೆ ಬೀಳ್ಕೊಡುಗೆ ಎಂಬುದು ಸರಿಯಲ್ಲ. ಅವರಿಗೆ ಗೌರವಯುತ ಧನ್ಯವಾದ ಸಲ್ಲಿಸುವಂತೆ ಕೋರಿದರು. ಈ ವೇಳೆ ಅಧ್ಯಕ್ಷ ಎಂ.ನಾಗರಾಜ ಅವರು ಅದನ್ನು ತಿದ್ದಿಕೊಳ್ಳುವುದಾಗಿ ಸ್ಪಷ್ಟ ಪಡಿಸಿದಿರು.
ನೂತನ ಅಧ್ಯಕ್ಷರಾದಂತ ಪವಿತ್ರಾ ನಾಗರಾಜ್ ಮಾತನಾಡಿ, ಮಾರಿಗುಡಿ ದೇವಸ್ಥಾನದ ಅಭಿವೃದ್ಧಿಗೆ ಒಟ್ಟಾಗಿ ಜೊತೆಗೂಡಿ ಮುನ್ನಡೆಯೋಣ. ಹೊಸ ಸಮಿತಿಗೆ ಹಳೆಯ ಸಮಿತಿಯಿಂದ ಸಹಕಾರ ಸದಾ ಇರಲಿ. ಇಲ್ಲಿ ಹೊಸ ಸಮಿತಿ, ಹಳೆ ಸಮಿತಿ ಎನ್ನುವುದಕ್ಕಿಂತ ಅನುಭವ ಮುಖ್ಯವಾಗಿದೆ. ಎಲ್ಲ ಸದಸ್ಯರ ಸಹಕಾರದೊಂದಿಗೆ ಮುನ್ನಡೆಯೋಣ ಎಂದರು.
ಇಂದಿನ ಅಧಿಕಾರ ಹಸ್ತಾಂತರದ ಸಭೆಯಲ್ಲಿ ಹಲವರು ಹಲವು ರೀತಿಯ ಅಭಿಪ್ರಾಯವನ್ನು ವ್ಯಕ್ತ ಪಡಿಸಿದ್ದಾರೆ. ಅನ್ನ ಸಂತರ್ಪಣೆ, ದೇವರ ಪೂಜಾ ವಿಧಿ ವಿಧಾನಗಳಲ್ಲಿ ಬದಲಾವಣೆ ಸೇರಿದಂತೆ ಇತರೆ ವಿಷಯಗಳ ಬಗ್ಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುತ್ತದೆ. ಭಕ್ತಾಧಿಗಳ ಸಹಕಾರದೊಂದಿಗೆ ಅನ್ನ ಸಂತರ್ಪಣೆ ಆರಂಭದ ಬಗ್ಗೆ ಚರ್ಚಿಸಲಾಗುವುದು ಎಂದು ತಿಳಿಸಿದರು.
ಈ ಸಭೆಯಲ್ಲಿ ಮಾಜಿ ಪ್ರಧಾನ ಕಾರ್ಯದರ್ಶಿ ನಾಗೇಂದ್ರ ಕುಮಟ, ಹಿರಿಯ ಮುಖಂಡ ಪಾಂಡುರಂಗ ಟಿ.ವಿ, ಖಜಾಂಚಿ ವಿ.ಶಂಕರ್, ಉಪಾಧ್ಯಕ್ಷ ಶ್ರೀನಿವಾಸ ಮೇಸ್ತ್ರಿ, ಸಹ ಕಾರ್ಯದರ್ಶಿಗಳಾದಂತ ಪರುಷೋತ್ತಮ(ಪುಚ್ಚಿ), ಡಿಶ್ ಗುರು, ಲಲಿತಮ್ಮ ಸೇರಿದಂತೆ ಇತರರೆ ಸದಸ್ಯರು ಹಾಜರಿದ್ದರು.








