ನವದೆಹಲಿ:ಪಶ್ಚಿಮ ಏಷ್ಯಾದಲ್ಲಿ ಉದ್ವಿಗ್ನತೆ ಹೆಚ್ಚಾಗಿದ್ದು, ವಿಶ್ವದ ಪ್ರಮುಖ ವ್ಯಾಪಾರ ಮಾರ್ಗವಾದ ‘ಹಾರ್ಮುಜ್ ಜಲಸಂಧಿ’ (Strait of Hormuz) ಬಂದ್ ಆಗಿರುವ ಹಿನ್ನೆಲೆಯಲ್ಲಿ ಜಾಗತಿಕ ಆತಂಕ ಸೃಷ್ಟಿಯಾಗಿದೆ. ಆದರೆ, ಈ ಬಿಕ್ಕಟ್ಟಿನ ನಡುವೆಯೂ ಇರಾನ್ ಸರ್ಕಾರವು ಭಾರತಕ್ಕೆ ವಿಶೇಷ ವಿನಾಯಿತಿ ನೀಡಿದೆ. “ನಮ್ಮ ಭಾರತೀಯ ಮಿತ್ರರು ಸುರಕ್ಷಿತ ಕೈಗಳಲ್ಲಿದ್ದಾರೆ” ಎಂದು ಹೇಳಿರುವ ಇರಾನ್, ಭಾರತೀಯ ಹಡಗುಗಳ ಸಂಚಾರಕ್ಕೆ ಯಾವುದೇ ಅಡ್ಡಿಪಡಿಸುವುದಿಲ್ಲ ಎಂದು ಭರವಸೆ ನೀಡಿದೆ.
ಹಾರ್ಮುಜ್ ಜಲಸಂಧಿಯನ್ನು ಮರುಪಡೆಯಲು ಮತ್ತು ದಿಗ್ಬಂಧನ ತೆರವುಗೊಳಿಸಲು ವಿಶ್ವದ ಪ್ರಮುಖ ರಾಷ್ಟ್ರಗಳು ಪ್ರಯತ್ನಿಸುತ್ತಿರುವ ಬೆನ್ನಲ್ಲೇ, ಇರಾನ್ ಈ ಘೋಷಣೆ ಮಾಡಿದೆ. ಭಾರತೀಯ ಧ್ವಜವಿರುವ ವಾಣಿಜ್ಯ ಹಡಗುಗಳಿಗೆ ಈ ಮಾರ್ಗದಲ್ಲಿ ಸುರಕ್ಷಿತವಾಗಿ ಸಾಗಲು ಇರಾನ್ ಅನುವು ಮಾಡಿಕೊಡಲಿದೆ.
ಭಾರತವು ತನ್ನ ಹೆಚ್ಚಿನ ತೈಲವನ್ನು ಈ ಮಾರ್ಗದ ಮೂಲಕವೇ ಆಮದು ಮಾಡಿಕೊಳ್ಳುತ್ತದೆ. ಇರಾನ್ನ ಈ ಭರವಸೆಯಿಂದಾಗಿ ಭಾರತದಲ್ಲಿ ತೈಲ ಅಭಾವ ಸೃಷ್ಟಿಯಾಗುವ ಭೀತಿ ಸದ್ಯಕ್ಕೆ ದೂರವಾಗಿದೆ.ಅಮೆರಿಕ ಮತ್ತು ಬ್ರಿಟನ್ ಸೇರಿದಂತೆ ಹಲವು ರಾಷ್ಟ್ರಗಳು ಬಿಕ್ಕಟ್ಟು ಬಗೆಹರಿಸಲು ಭಾರತದ ಮಧ್ಯಸ್ಥಿಕೆಯನ್ನು ಕೋರುತ್ತಿರುವ ಸಮಯದಲ್ಲಿ ಇರಾನ್ ಈ ಹೆಜ್ಜೆ ಇಟ್ಟಿರುವುದು ಭಾರತದ ರಾಜತಾಂತ್ರಿಕ ಶಕ್ತಿಯನ್ನು ತೋರಿಸುತ್ತದೆ.
ಭಾರತೀಯ ನೌಕಾಪಡೆಯು ಈಗಾಗಲೇ ಈ ಭಾಗದಲ್ಲಿ ಹದ್ದಿನ ಕಣ್ಣಿಟ್ಟಿದ್ದು, ಇರಾನ್ನ ಈ ಭರವಸೆಯು ನೌಕಾ ಕಾರ್ಯಾಚರಣೆಗಳಿಗೆ ಹೆಚ್ಚಿನ ಬಲ ನೀಡಲಿದೆ.







