ನವದೆಹಲಿ: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಪ್ರತಿಷ್ಠಿತ ‘ಬಾರ್ಡರ್-ಗವಾಸ್ಕರ್ ಟ್ರೋಫಿ’ (BGT 2027) ಪಂದ್ಯಾವಳಿಗೆ ವೇದಿಕೆಗಳನ್ನು ಪ್ರಕಟಿಸಿರುವ ಬಿಸಿಸಿಐ (BCCI), ಸಾಂಪ್ರದಾಯಿಕ ಟೆಸ್ಟ್ ಕೇಂದ್ರಗಳನ್ನು ಕಡೆಗಣಿಸಿರುವುದು ಈಗ ದೊಡ್ಡ ವಿವಾದಕ್ಕೆ ಕಾರಣವಾಗಿದೆ. ಕ್ರಿಕೆಟ್ ಇತಿಹಾಸದ ಪ್ರಮುಖ ಮೈದಾನಗಳಾದ ಬೆಂಗಳೂರಿನ ಚಿನ್ನಸ್ವಾಮಿ, ಮುಂಬೈನ ವಾಂಖೆಡೆ ಮತ್ತು ಕೋಲ್ಕತ್ತಾದ ಈಡನ್ ಗಾರ್ಡನ್ಸ್ಗೆ ಟೆಸ್ಟ್ ಆತಿಥ್ಯ ನೀಡದಿರುವುದಕ್ಕೆ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಟೆಸ್ಟ್ ಕ್ರಿಕೆಟ್ಗೆ ತನ್ನದೇ ಆದ ಪರಂಪರೆ ಹೊಂದಿರುವ ಬೆಂಗಳೂರು, ಮುಂಬೈ, ದೆಹಲಿ ಮತ್ತು ಕೋಲ್ಕತ್ತಾ ನಗರಗಳಿಗೆ ಈ ಬಾರಿ ಒಂದೂ ಟೆಸ್ಟ್ ಪಂದ್ಯವನ್ನು ನೀಡಿಲ್ಲ. ಬದಲಾಗಿ ಗುವಾಹಟಿ ಮತ್ತು ರಾಂಚಿಯಂತಹ ತುಲನಾತ್ಮಕವಾಗಿ ಹೊಸ ಕೇಂದ್ರಗಳಿಗೆ ಅವಕಾಶ ನೀಡಲಾಗಿದೆ.
“ಆಸ್ಟ್ರೇಲಿಯಾದಂತಹ ಬಲಿಷ್ಠ ತಂಡದ ವಿರುದ್ಧದ ಸರಣಿಯು ಐತಿಹಾಸಿಕ ಮೈದಾನಗಳಲ್ಲಿ ನಡೆದರೆ ಅದರ ಗಾಂಭೀರ್ಯವೇ ಬೇರೆ. ಬಿಸಿಸಿಐ ಕೇವಲ ‘ರೊಟೇಷನ್ ಪಾಲಿಸಿ’ ಹೆಸರಿನಲ್ಲಿ ಕ್ರಿಕೆಟ್ ಕಾಶಿಯಂತಿರುವ ಮೈದಾನಗಳನ್ನು ವಂಚಿಸುತ್ತಿದೆ” ಎಂದು ಫ್ಯಾನ್ಸ್ ಕಿಡಿಕಾರುತ್ತಿದ್ದಾರೆ.
ಅಸ್ಸಾಂನ ಗುವಾಹಟಿ (Barsapara Stadium) ಇದೇ ಮೊದಲ ಬಾರಿಗೆ ಬಾರ್ಡರ್-ಗವಾಸ್ಕರ್ ಟ್ರೋಫಿಯ ಟೆಸ್ಟ್ ಪಂದ್ಯಕ್ಕೆ ಆತಿಥ್ಯ ವಹಿಸುತ್ತಿದೆ.








