ಬೆಂಗಳೂರು: ಆಧುನಿಕತೆಯ ಅಬ್ಬರದ ನಡುವೆಯೂ ತನ್ನ ಸಾಂಪ್ರದಾಯಿಕ ವೈಶಿಷ್ಟ್ಯ ಹಾಗೂ ಭಾವೈಕ್ಯತೆಯನ್ನು ಉಳಿಸಿಕೊಂಡು ಬಂದಿರುವ ಐತಿಹಾಸಿಕ ಬೆಂಗಳೂರು ಕರಗ ಉತ್ಸವಕ್ಕೆ ಇಂದು (ಮಾರ್ಚ್ 24, ಮಂಗಳವಾರ) ಚಾಲನೆ ಸಿಗಲಿದೆ.
ಪ್ರಧಾನ ಅರ್ಚಕರಾದ ವಿ. ಜ್ಞಾನೇಂದ್ರ ಅವರು ಸತತ 16ನೇ ಬಾರಿಗೆ ಕರಗ ಹೊರುವ ಮೂಲಕ ಈ ಬಾರಿಯ ಉತ್ಸವವನ್ನು ನಡೆಸಿಕೊಡಲಿದ್ದಾರೆ. ಇಂದಿನಿಂದ ಏಪ್ರಿಲ್ 3ರವರೆಗೆ ಪ್ರತಿದಿನ ವಿಶೇಷ ಪೂಜೆ, ಮಹಾಮಂಗಳಾರತಿ ಹಾಗೂ ನಿಗದಿತ ಕೆರೆ ಪ್ರದೇಶಗಳಲ್ಲಿ ಗಂಗಾಪೂಜೆ ಸೇರಿದಂತೆ ವಿವಿಧ ಧಾರ್ಮಿಕ ಕೈಂಕರ್ಯಗಳು ನೆರವೇರಲಿವೆ.
ಶಕ್ತ್ಯುತ್ಸವದ ದಿನಾಂಕ: ಕರಗ ಉತ್ಸವದ ಪ್ರಮುಖ ಆಕರ್ಷಣೆಯಾದ ‘ಕರಗ ಶಕ್ತ್ಯುತ್ಸವ’ ಏಪ್ರಿಲ್ 1ರ ಮಧ್ಯರಾತ್ರಿ ಅದ್ಧೂರಿಯಾಗಿ ಜರುಗಲಿದೆ.
ಹೂವಿನ ಅಲಂಕಾರ: ಉತ್ಸವ ನಡೆಯುವ 11 ದಿನಗಳ ಕಾಲ ಕರಗಕ್ಕೆ ಬಿಡಿ ಹೂವುಗಳನ್ನೇ ತರಿಸಿ, ದೇವಾಲಯದ ಆವರಣದಲ್ಲೇ ಹೂವು ಪೋಣಿಸಿ ವಿಶೇಷ ಅಲಂಕಾರ ಮಾಡಲಾಗುತ್ತದೆ ಎಂದು ಧರ್ಮರಾಯ ಸ್ವಾಮಿ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಎನ್. ರುದ್ರೇಶ್ ತಿಳಿಸಿದ್ದಾರೆ.
ನಗರದಲ್ಲಿ ದೀಪಾಲಂಕಾರದ ಸಡಗರ:
ದಸರಾ ಮಹೋತ್ಸವದ ಮಾದರಿಯಲ್ಲಿ ದೇವಸ್ಥಾನದ ಒಳಗೆ ಮತ್ತು ಹೊರಗೆ ವಿದ್ಯುತ್ ದೀಪಗಳಿಂದ ಕಂಗೊಳಿಸುವಂತೆ ವ್ಯವಸ್ಥೆ ಮಾಡಲಾಗಿದೆ. ಹಡ್ಸನ್ ಸರ್ಕಲ್, ಟೌನ್ ಹಾಲ್ ವೃತ್ತ, ಸಿಟಿ ಮಾರುಕಟ್ಟೆ, ಮೈಸೂರು ಬ್ಯಾಂಕ್ ವೃತ್ತ, ಕೆಂಪೇಗೌಡ ವೃತ್ತ ಸೇರಿದಂತೆ ಹಳೇ ಪೇಟೆಗಳ ಪ್ರಮುಖ ರಸ್ತೆಗಳಲ್ಲಿ ಭವ್ಯವಾದ ದೀಪಾಲಂಕಾರ ಮಾಡಲಾಗಿದೆ.








