ಬೆಂಗಳೂರು: ರಾಜ್ಯದ ಸರ್ಕಾರಿ ಶೈಕ್ಷಣಿಕ ಸಂಸ್ಥೆಗಳ ಭೂಮಿಯನ್ನು ರಕ್ಷಿಸುವ ಮತ್ತು ಶಿಕ್ಷಕರ ವರ್ಗಾವಣೆಯನ್ನು ಸಕ್ರಮಗೊಳಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇಟ್ಟಿರುವ ಸರ್ಕಾರ, ವಿಧಾನಸಭೆಯಲ್ಲಿ ಈ ಕುರಿತಾದ ತಿದ್ದುಪಡಿ ವಿಧೇಯಕಗಳನ್ನು ಮಂಡಿಸಿದೆ.
ದಶಕಗಳ ಹಿಂದೆ ದಾನಿಗಳು ಶಾಲೆ-ಕಾಲೇಜುಗಳಿಗಾಗಿ ನೀಡಿದ ಜಮೀನುಗಳಿಗೆ ಸರಿಯಾದ ದಾಖಲೆಗಳಿಲ್ಲದ ಕಾರಣ, ಈಗ ವಾರಸುದಾರರು ಹಕ್ಕು ಮಂಡಿಸುತ್ತಿದ್ದಾರೆ. ಇದನ್ನು ತಡೆಯಲು ಮತ್ತು ಇಂತಹ ಭೂಮಿಯನ್ನು ಶೈಕ್ಷಣಿಕ ಉದ್ದೇಶಕ್ಕಾಗಿಯೇ ಉಳಿಸಿಕೊಳ್ಳಲು ‘ಅಧಿಕೃತ ಭೂಮಿ ರಿಜಿಸ್ಟರ್’ ನಿರ್ವಹಿಸಲು ಹಾಗೂ ಅಪೀಲು ವ್ಯವಸ್ಥೆ ಸ್ಥಾಪಿಸಲು ಮಸೂದೆಯಲ್ಲಿ ಅವಕಾಶ ಕಲ್ಪಿಸಲಾಗಿದೆ.
ಶಿಕ್ಷಕರ ವರ್ಗಾವಣೆ ನಿಯಂತ್ರಣ
ಆದರ್ಶ ವಿದ್ಯಾಲಯ, ಪಿಯು ಕಾಲೇಜುಗಳ ಪ್ರಾಂಶುಪಾಲರು ಹಾಗೂ ಶಿಕ್ಷಕರ ವರ್ಗಾವಣೆಯನ್ನು ಇನ್ನು ಮುಂದೆ ಕೌನ್ಸೆಲಿಂಗ್ ಮೂಲಕ ಮಾತ್ರ ನಡೆಸಲು ನಿರ್ಧರಿಸಲಾಗಿದೆ. ಕನಿಷ್ಠ ಸೇವಾ ಅವಧಿಯ ಕುರಿತೂ ತಿದ್ದುಪಡಿ ತರಲಾಗಿದೆ.
ಮರ್ಯಾದೆ ಹತ್ಯೆ ತಡೆಗೆ ಅಸ್ತು
ಮರ್ಯಾದೆ ಹೆಸರಿನಲ್ಲಿ ನಡೆಯುವ ಅಪರಾಧಗಳ ಪ್ರತಿಬಂಧಕ ಮತ್ತು ನಿಷೇಧ ವಿಧೇಯಕಕ್ಕೆ ವಿಧಾನಸಭೆಯಲ್ಲಿ ಅಂಗೀಕಾರ ಸಿಕ್ಕಿದೆ. ಜಾತಿ, ಧರ್ಮದ ಹೆಸರಿನಲ್ಲಿ ಪ್ರೇಮಿಗಳ ಮೇಲೆ ನಡೆಯುವ ದೌರ್ಜನ್ಯ ತಡೆಯುವುದು ಇದರ ಮುಖ್ಯ ಉದ್ದೇಶವಾಗಿದೆ.
ಐಟಿ ರಿಟರ್ನ್ಸ್ ಫೈಲಿಂಗ್ನಿಂದ ವಿನಾಯಿತಿ
ವೃತ್ತಿ ತೆರಿಗೆ ಪಾವತಿಸುವವರಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಮತ್ತೊಂದು ಸಿಹಿ ಸುದ್ದಿ ನೀಡಿದೆ. ತಿಂಗಳಿಗೆ 25 ಸಾವಿರ ರೂ.ಗಳಿಗಿಂತ ಕಡಿಮೆ ಆದಾಯ ಹೊಂದಿರುವವರು ಇನ್ನು ಮುಂದೆ ಐಟಿ ರಿಟರ್ನ್ಸ್ ಫೈಲ್ ಮಾಡುವ ಅಗತ್ಯವಿಲ್ಲ. ವಾರ್ಷಿಕ 2500 ರೂ. ವೃತ್ತಿ ತೆರಿಗೆ ಪಾವತಿಸುವವರಿಗೆ ಈ ಹಿಂದೆ ಇದ್ದ ರಿಟರ್ನ್ಸ್ ಸಲ್ಲಿಕೆಯ ಕಡ್ಡಾಯ ನಿಯಮವನ್ನು ಈ ತಿದ್ದುಪಡಿ ಮೂಲಕ ತೆಗೆದುಹಾಕಲಾಗಿದೆ.








