ಬೆಂಗಳೂರು: ಕಾಳೇನ ಅಗ್ರಹಾರದಿಂದ ನಾಗವಾರತನಕ ಸಂಪರ್ಕ ಕಲ್ಪಿಸುವ ನಮ್ಮ ಮೆಟ್ರೋದ 3ಎ ಹಂತದ ಯೋಜನೆ ಪಿಂಕ್ ಮಾರ್ಗದ ಕಾಮಗಾರಿಗಳು ಮೊದಲ ಹಂತದವರೆಗೆ ಬಹುತೇಕ ಪೂರ್ಣಗೊಂಡಿದ್ದು, ಕಾಳೇನ ಎತ್ತರಿಸಿದ ಮೆಟ್ರೋ ಮಾರ್ಗವನ್ನು ಮೇನಲ್ಲಿ ಶುರು ಮಾಡುವ ನಿರೀಕ್ಷೆ ಇದೆ.
ಈಗಾಗಲೆ ಗುಲಾಬಿ ಮಾರ್ಗಕ್ಕೆ ನಾಲ್ಕು ರೈಲುಗಳು ಆಗಮಿಸಿದ್ದು, ಇದೇ 22ರಿಂದ ಏ. 5ರವರೆಗೆ ಆರ್ಡಿಎಸ್ಒ ಅಧಿಕಾರಿಗಳ ನೇತೃತ್ವದಲ್ಲಿ ವಿವಿಧ ಪರಿಶೀಲನಾ ಕಾರ್ಯಗಳು, ರೈಲಿನ ವೇಗ ಮತ್ತು ತೂಕ, ಹಳಿ ನಿಲ್ದಾಣಗಳ ತಪಾಸಣೆ ನಡೆಯಲಿದೆ. ಮಾಸಾಂತ್ಯಕ್ಕೆ ಮತ್ತೊಂದು ರೈಲು ಸೇರ್ಪಡೆಯಾಗುವ ನಿರೀಕ್ಷೆ ಇದ್ದು, ಮಾರ್ಗದಲ್ಲಿ ಕಾರ್ಯಾಚರಣೆ ಪ್ರಾರಂಭವಾಗುವ ಹೊತ್ತಿಗೆ 6 ರೈಲುಗಳು ಪೂರೈಕೆಯಾಗುವ ನಿರೀಕ್ಷೆ ಇದೆ.
ಕಾಳೇನ ಅಗ್ರಹಾರ ಮತ್ತು ತಾವರೆಕೆರೆ ನಡುವಿನ 7.5 ಕಿಮೀ ಎತ್ತರಿಸಿದ ಮಾರ್ಗವು ಮೇನಲ್ಲಿ ಶುರುವಾದರೆ, ಡೇರಿ ಸರ್ಕಲ್ ನಿಂದ ನಾಗವಾರದವರೆಗಿನ ಉಳಿದ 13.76 ಕಿಮೀ ಸುರಂಗ ಮಾರ್ಗವು 2026ರ ಡಿಸೆಂಬರ್ ವೇಳೆಗೆ ಕಾರ್ಯಾರಂಭ ಮಾಡುವ ಸಾಧ್ಯತೆ ಇದೆ ಎಂದು ಬಿಎಂಆರ್ಸಿಎಲ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಬನ್ನೇರುಘಟ್ಟ ರಸ್ತೆಯ ಉದ್ದಕ್ಕೂ ಸಾಗುವ ಈ ವಿಭಾಗವು ಆರು ನಿಲ್ದಾಣಗಳನ್ನು (ತಾವರೆಕೆರೆ, ಜಯದೇವ ಆಸ್ಪತ್ರೆ, ಜೆ.ಪಿ. ನಗರ 4ನೇ ಹಂತ, ಐಐಎಂಬಿ, ಹುಳಿಮಾವು ಮತ್ತು ಕಾಳೇನ ಅಗ್ರಹಾರ) ಹೊಂದಿರುತ್ತದೆ ಎಂದು ತಿಳಿಸಿದ್ದಾರೆ.
ದಕ್ಷಿಣ ಭಾರತದ ಅತಿ ಎತ್ತರದ ಮೆಟ್ರೋ ನಿಲ್ದಾಣ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿರುವ ಜಯದೇವ ಆಸ್ಪತ್ರೆ ಮೆಟ್ರೋ ನಿಲ್ದಾಣವು ಇಂಟರ್ಚೇಂಜ್ ನಿಲ್ದಾಣವಾಗಿ ಈ ಮಾರ್ಗದಲ್ಲಿ ಕಾರ್ಯನಿರ್ವಹಿಸಲಿದೆ. 2024ರ ಡಿಸೆಂಬರ್ನಲ್ಲಿ ಸುರಂಗ ಮಾರ್ಗ ಪೂರ್ಣಗೊಂಡರೂ ಕೆಲ ಕಾಮಗಾರಿಗಳು ಇನ್ನೂ ನಡೆಯುತ್ತಿದೆ. ಡೇರಿ ಸರ್ಕಲ್, ಮಹಾತ್ಮ ಗಾಂಧಿ ರಸ್ತೆ ಮತ್ತು ನಾಗವಾರ ಮೂಲಕ ಹಾದುಹೋಗುವ 13.76 ಕಿ.ಮೀ. ಕಾರಿಡಾರ್ 12 ನಿಲ್ದಾಣಗಳನ್ನು ಒಳಗೊಂಡಿದ್ದು ಎಂ.ಜಿ. ರಸ್ತೆ ಮೆಟ್ರೋ ನಿಲ್ದಾಣವು ನಗರದ ನಾಲ್ಕನೇ ಇಂಟರ್ಚೇಂಜ್ ನಿಲ್ದಾಣವಾಗಲಿದೆ ಎಂದು ಬಿಎಂಆರ್ಸಿಎಲ್ ತಿಳಿಸಿದೆ.








