ಶಿವಮೊಗ್ಗ: ಜಿಲ್ಲೆಯ ಸಾಗರದ ಇತಿಹಾಸ ಪ್ರಸಿದ್ಧ ಶ್ರೀ ಮಹಾಗಣಪತಿ ದೇವಸ್ಥಾನದ ಜಾತ್ರಾ ಮಹೋತ್ಸವದ ಸಂಭ್ರಮ ಆರಂಭವಾಗಿದ್ದು, ಈ ಧಾರ್ಮಿಕ ಕಾರ್ಯಕ್ರಮಕ್ಕೆ ಶಾಸಕ ಹಾಗೂ ಕರ್ನಾಟಕ ರಾಜ್ಯ ಅರಣ್ಯ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಗೋಪಾಲಕೃಷ್ಣ ಬೇಳೂರು ಅವರಿಗೆ ಶನಿವಾರ ಅಧಿಕೃತವಾಗಿ ಆಹ್ವಾನ ನೀಡಲಾಯಿತು.
ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ಸಾಗರದ ಉಪವಿಭಾಗಾಧಿಕಾರಿ (AC) ವೀರೇಶ್ ಕುಮಾರ್, ದೇವಸ್ಥಾನ ಸಮಿತಿಯ ಅಧ್ಯಕ್ಷರಾದ ಟಿ.ವಿ. ಪಾಂಡುರಂಗ ಹಾಗೂ ಸಮಿತಿಯ ಸದಸ್ಯ ಐವಿ ಹೆಗಡೆ ಅವರು ಶಾಸಕರನ್ನು ಭೇಟಿ ಮಾಡಿ ಆಮಂತ್ರಣ ಪತ್ರಿಕೆ ನೀಡಿ ಆಹ್ವಾನಿಸಿದರು. ಈ ಸಂದರ್ಭದಲ್ಲಿ ಮುಜರಾಯಿ ಇಲಾಖೆಯ ಕಾರ್ಯನಿರ್ವಾಹಕ ಅಧಿಕಾರಿ (EO) ಪ್ರಮೀಳಾ ಕುಮಾರಿ, ಉಪ ತಹಶೀಲ್ದಾರ್ ತೋಯಜಾಕ್ಷಿ ಉಪಸ್ಥಿತರಿದ್ದರು.
ಸಾಗರದ ಈ ಗಣಪತಿ ಜಾತ್ರೆಯು ಅತ್ಯಂತ ಪುರಾತನ ಹಾಗೂ ಜನಪ್ರಿಯವಾಗಿದ್ದು, ಸಾವಿರಾರು ಭಕ್ತರು ಪಾಲ್ಗೊಳ್ಳುವ ನಿರೀಕ್ಷೆಯಿದೆ. ಈ ಹಿನ್ನೆಲೆಯಲ್ಲಿ ಜಾತ್ರೆಯ ಯಶಸ್ವಿ ನಿರ್ವಹಣೆ ಮತ್ತು ಅಗತ್ಯ ಸಿದ್ಧತೆಗಳ ಕುರಿತು ಕೂಡ ಇದೇ ವೇಳೆ ಚರ್ಚಿಸಲಾಯಿತು ಎಂದು ತಿಳಿದುಬಂದಿದೆ.
ಮಾರ್ಚ್ 22ಕ್ಕೆ ಮಹಾರಥೋತ್ಸವದ ಸಂಭ್ರಮ
ಶಿವಮೊಗ್ಗ ಜಿಲ್ಲೆಯ ಸಾಗರ ಪಟ್ಟಣದ ಇತಿಹಾಸ ಪ್ರಸಿದ್ಧ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ‘ಪರಾಭವ’ ನಾಮ ಸಂವತ್ಸರದ ಜಾತ್ರಾ ಮಹೋತ್ಸವ ಮತ್ತು ಉತ್ಸವಗಳು ಸಡಗರದಿಂದ ಆರಂಭವಾಗಿವೆ. ಮಾರ್ಚ್ 19ರಿಂದ ಪ್ರಾರಂಭವಾಗಿರುವ ಈ ಧಾರ್ಮಿಕ ಕಾರ್ಯಕ್ರಮಗಳು ಮಾರ್ಚ್ 25ರವರೆಗೆ ವಿವಿಧ ಸಾಂಪ್ರದಾಯಿಕ ವಿಧಿವಿಧಾನಗಳೊಂದಿಗೆ ನಡೆಯಲಿವೆ.
ಉತ್ಸವಗಳ ವಿವರ ಮತ್ತು ಪ್ರಮುಖ ದಿನಾಂಕಗಳು:
ಸಕಲ ಲೋಕದ ಸುಭಿಕ್ಷೆಗಾಗಿ ಶ್ರೀ ಮಹಾಗಣಪತಿ ದೇವರು ಯಾಗದೀಕ್ಷೆಯನ್ನು ಸ್ವೀಕರಿಸಿದ್ದು, ಹಗಲು-ರಾತ್ರಿ ನಿರಂತರ ಪೂಜಾ ಕಾರ್ಯಕ್ರಮಗಳು ನಡೆಯುತ್ತಿವೆ.
-
ಮಾರ್ಚ್ 21 (ಇಂದು): ಚೈತ್ರ ಶುದ್ಧ ತದಿಗೆಯ ಅಂಗವಾಗಿ ‘ಪುಷ್ಪಮಂಜರಿ ಯಂತ್ರೋತ್ಸವ’ ಜರುಗಿತು.
-
ಮಾರ್ಚ್ 22 (ನಾಳೆ): ಜಾತ್ರೆಯ ಪ್ರಮುಖ ಆಕರ್ಷಣೆಯಾದ ಶ್ರೀ ಮಹಾಗಣಪತಿ ದೇವರ ಮಹಾಸ್ಪಂದನ ರಥೋತ್ಸವ ನಡೆಯಲಿದೆ. ಬೆಳಿಗ್ಗೆ 8:00 ರಿಂದ 8:15ರ ಒಳಗೆ ಸಲ್ಲುವ ಶುಭ ಮೇಷ ಲಗ್ನದಲ್ಲಿ ರಥಾರೋಹಣ ಕಾರ್ಯಕ್ರಮ ಜರುಗಲಿದೆ.
-
ಮಾರ್ಚ್ 23: ಚೈತ್ರ ಶುದ್ಧ ಪಂಚಮಿಯಂದು ಕುಂಕುಮೋತ್ಸವ, ಅವಭೃತ ಮತ್ತು ಅಂಕುರಾರ್ಪಣೆ ನಡೆಯಲಿದೆ.
-
ಮಾರ್ಚ್ 24: ದೇವಸ್ಥಾನದಲ್ಲಿ ವಿಶೇಷ ಗಣಪತಿ ಹವನ ಆಯೋಜಿಸಲಾಗಿದೆ.
-
ಮಾರ್ಚ್ 25: ಜಾತ್ರಾ ಮಹೋತ್ಸವದ ಸಮಾರೋಪ ಅಂಗವಾಗಿ ಮಧ್ಯಾಹ್ನ 12:00 ಗಂಟೆಗೆ ಸಾರ್ವತ್ರಿಕ ಗಣಹೋಮದ ಪೂರ್ಣಾಹುತಿ ನೆರವೇರಲಿದೆ.
ಈಗಾಗಲೇ ಧ್ವಜಾರೋಹಣ, ಅಂಕುರಾರ್ಪಣೆ ಮತ್ತು ಮೂಷಿಕ ಯಂತ್ರೋತ್ಸವಗಳು ಯಶಸ್ವಿಯಾಗಿ ನೆರವೇರಿವೆ. ದೇವಸ್ಥಾನ ಸಮಿತಿಯು ಭಕ್ತಾದಿಗಳಿಗೆ ಕುಟುಂಬ ಸಮೇತ ಆಗಮಿಸಿ, ಶ್ರೀ ದೇವರ ದರ್ಶನ ಪಡೆದು ಪ್ರಸಾದ ಸ್ವೀಕರಿಸುವಂತೆ ಕೋರಿದೆ. ರಥೋತ್ಸವದ ಹಿನ್ನೆಲೆಯಲ್ಲಿ ಸಾಗರ ಪಟ್ಟಣದಲ್ಲಿ ಹಬ್ಬದ ವಾತಾವರಣ ಮನೆಮಾಡಿದೆ.








