ನವದೆಹಲಿ: ದೇಶದ ಇಂಧನ ವಲಯದ ಮೇಲೆ ಹೆಚ್ಚಿನ ನಿಯಂತ್ರಣ ಸಾಧಿಸಲು ಮತ್ತು ಇಂಧನ ಭದ್ರತೆಯನ್ನು ಬಲಪಡಿಸಲು ಕೇಂದ್ರ ಸರ್ಕಾರ ಹೊಸ ನಿಯಮವನ್ನು ಜಾರಿಗೆ ತಂದಿದೆ. ಇನ್ಮುಂದೆ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ವಲಯದ ಎಲ್ಲಾ ಕಂಪನಿಗಳು ತಮ್ಮ ಕಾರ್ಯಾಚರಣೆಯ ವಿವರವಾದ ಮಾಹಿತಿಯನ್ನು ಕೇಂದ್ರ ಸರ್ಕಾರದೊಂದಿಗೆ ಹಂಚಿಕೊಳ್ಳುವುದು ಕಡ್ಡಾಯವಾಗಿದೆ.
ಹೊಸ ಆದೇಶದ ಮುಖ್ಯಾಂಶಗಳು:
-
ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ (ಮಾಹಿತಿ ಸಲ್ಲಿಕೆ) ಆದೇಶ, 2026: ಈ ಹೊಸ ನಿಯಮವನ್ನು ಅಗತ್ಯ ವಸ್ತುಗಳ ಕಾಯ್ದೆ, 1955 ರ ಅಡಿಯಲ್ಲಿ ಹೊರಡಿಸಲಾಗಿದೆ. ಸಾರ್ವಜನಿಕ ಹಿತದೃಷ್ಟಿಯಿಂದ ಪ್ರಮುಖ ಸಂಪನ್ಮೂಲಗಳನ್ನು ನಿಯಂತ್ರಿಸಲು ಇದು ಸರ್ಕಾರಕ್ಕೆ ಅಧಿಕಾರ ನೀಡುತ್ತದೆ.
-
ಕೇಂದ್ರೀಕೃತ ಉಸ್ತುವಾರಿ ವ್ಯವಸ್ಥೆ: ದೇಶಾದ್ಯಂತ ಇರುವ ಕಚ್ಚಾ ತೈಲ ಮತ್ತು ನೈಸರ್ಗಿಕ ಅನಿಲದ ದಾಸ್ತಾನುಗಳನ್ನು ನಿಕಟವಾಗಿ ಮೇಲ್ವಿಚಾರಣೆ ಮಾಡಲು ಕೇಂದ್ರೀಕೃತ ವ್ಯವಸ್ಥೆಯನ್ನು ರೂಪಿಸಲಾಗುತ್ತಿದೆ.
-
ಪಿಪಿಎಸಿ (PPAC) ಮುಖ್ಯ ಏಜೆನ್ಸಿ: ಪೆಟ್ರೋಲಿಯಂ ಯೋಜನೆ ಮತ್ತು ವಿಶ್ಲೇಷಣಾ ಕೋಶವನ್ನು (PPAC) ಈ ಕಾರ್ಯಕ್ಕೆ ಮುಖ್ಯ ಏಜೆನ್ಸಿಯಾಗಿ ನೇಮಿಸಲಾಗಿದೆ. ಇದು ಇಡೀ ವಲಯದ ದತ್ತಾಂಶವನ್ನು ಸಂಗ್ರಹಿಸಿ, ಸಂಘಟಿಸಿ ವಿಶ್ಲೇಷಣೆ ನಡೆಸಲಿದೆ. ಈ ಮೂಲಕ ಸರ್ಕಾರವು ತ್ವರಿತ ಮತ್ತು ಉತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಹಕಾರಿಯಾಗಲಿದೆ.
ಯಾರಿಗೆಲ್ಲ ಅನ್ವಯ? ಈ ನಿಯಮವು ಕಚ್ಚಾ ತೈಲ ಉತ್ಪಾದಕರು, ತೈಲ ಸಂಸ್ಕರಣಾಗಾರಗಳು (Refineries), ತೈಲ ಮಾರುಕಟ್ಟೆ ಕಂಪನಿಗಳು (OMC), ಎಲ್ಎನ್ಜಿ (LNG) ಆಮದುದಾರರು, ಪೈಪ್ಲೈನ್ ನಿರ್ವಾಹಕರು, ನಗರ ಅನಿಲ ವಿತರಕರು ಮತ್ತು ಪೆಟ್ರೋಕೆಮಿಕಲ್ ಘಟಕಗಳಿಗೆ ಅನ್ವಯಿಸುತ್ತದೆ. ಸರ್ಕಾರಿ ಮತ್ತು ಖಾಸಗಿ ವಲಯದ ಎರಡೂ ಕಂಪನಿಗಳು ಈ ವ್ಯಾಪ್ತಿಗೆ ಬರಲಿವೆ.
ಯಾವ ಮಾಹಿತಿ ಹಂಚಿಕೊಳ್ಳಬೇಕು? ಕಂಪನಿಗಳು ತಮ್ಮ ಉತ್ಪಾದನಾ ಮಟ್ಟ, ಆಮದು ಮತ್ತು ರಫ್ತು ವಿವರಗಳು, ಲಭ್ಯವಿರುವ ದಾಸ್ತಾನು, ಶೇಖರಣಾ ಸಾಮರ್ಥ್ಯ, ಸಾರಿಗೆ ವಿವರ ಮತ್ತು ಬಳಕೆಯ ಮಾದರಿಗಳ ಬಗ್ಗೆ ವಿವರವಾದ ಮಾಹಿತಿಯನ್ನು ನೀಡಬೇಕಾಗುತ್ತದೆ. ಈ ಮಾಹಿತಿಯನ್ನು ದೈನಂದಿನ, ವಾರಕ್ಕೊಮ್ಮೆ ಅಥವಾ ಮಾಸಿಕವಾಗಿ ನೀಡಬೇಕಾಗಬಹುದು.
ಗೌಪ್ಯತೆಯ ನೆಪ ಹೇಳುವಂತಿಲ್ಲ: ವ್ಯಾಪಾರ ರಹಸ್ಯ ಅಥವಾ ಗೌಪ್ಯತೆಯ ಕಾರಣಗಳನ್ನು ನೀಡಿ ಮಾಹಿತಿಯನ್ನು ಹಂಚಿಕೊಳ್ಳಲು ಕಂಪನಿಗಳು ನಿರಾಕರಿಸುವಂತಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಇದು ವ್ಯವಸ್ಥೆಯಲ್ಲಿ ಹೆಚ್ಚಿನ ಪಾರದರ್ಶಕತೆ ತರಲು ನೆರವಾಗಲಿದೆ.
ಉದ್ದೇಶವೇನು? ಜಾಗತಿಕ ಮಟ್ಟದಲ್ಲಿ ತೈಲ ಮತ್ತು ಅನಿಲ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುವ ಭೀತಿ ಇರುವುದರಿಂದ, ದೇಶದಲ್ಲಿ ಇಂಧನ ಕೊರತೆಯಾಗದಂತೆ ಮುನ್ನೆಚ್ಚರಿಕೆ ವಹಿಸುವುದು ಈ ಕ್ರಮದ ಮುಖ್ಯ ಉದ್ದೇಶವಾಗಿದೆ. ಪೂರೈಕೆ ಅಡೆತಡೆಗಳನ್ನು ತಡೆಗಟ್ಟುವುದು ಮತ್ತು ಮಾರುಕಟ್ಟೆಯಲ್ಲಿ ಸ್ಥಿರತೆಯನ್ನು ಕಾಪಾಡಿಕೊಳ್ಳಲು ಈ ದತ್ತಾಂಶ ಸಂಗ್ರಹ ಸಹಕಾರಿಯಾಗಲಿದೆ.
ರಾಷ್ಟ್ರಮಟ್ಟದ ಯೋಗ ಸ್ಪರ್ಧೆಯಲ್ಲಿ ಶೈಲಜಾ, ಜಯಮ್ಮಗೆ ದ್ವಿತೀಯ ಸ್ಥಾನ: ಸಾಗರ ತಾಲ್ಲೂಕು ಸರ್ಕಾರಿ ನೌಕರರ ಸಂಘ ಅಭಿನಂದನೆ
ವಾಣಿಜ್ಯ ಬಳಕೆ ಸಿಲಿಂಡರ್ ಪೂರೈಕೆ ಮಾಡುವಂತೆ ಪ್ರಧಾನಿ ಮೋದಿಗೆ ಪತ್ರ ಬರೆದ, ಬೆಂಗಳೂರು ಹೋಟೆಲ್ ಅಸೋಸಿಯೇಷನ್








