ಬೆಂಗಳೂರು: ದಶಕಗಳಿಂದ ಧರ್ಮಸ್ಥಳ ಗ್ರಾಮದಲ್ಲಿ ನಡೆದಿದೆ ಎನ್ನಲಾದ ಸಾಲು ಸಾಲು ಅತ್ಯಾಚಾರ, ಸರಣಿ ಕೊಲೆ ಮತ್ತು ಅಸಹಜ ಸಾವುಗಳ ವಿರುದ್ಧದ ಕಾನೂನು ಹೋರಾಟ ಈಗ ನಿರ್ಣಾಯಕ ಹಂತಕ್ಕೆ ಬಂದು ತಲುಪಿದೆ. ಈ ಕುರಿತು ಸಲ್ಲಿಕೆಯಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ (PIL) ವಿಚಾರಣೆ ನಡೆಸಿದ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ಪೀಠವು, ತನಿಖೆಯಲ್ಲಿನ ಲೋಪಗಳ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಸರ್ಕಾರಕ್ಕೆ ಕಟ್ಟುನಿಟ್ಟಿನ ಆದೇಶ ನೀಡಿದೆ.
ನ್ಯಾಯಾಲಯದ ಗಂಭೀರ ಅವಲೋಕನ: “ಸಾವಿನ ಸಂಖ್ಯೆ ಸಹಜವಾಗಿಲ್ಲ”
ವಿಚಾರಣೆ ವೇಳೆ ಅರ್ಜಿದಾರರಾದ ಕುಸುಮಾವತಿ ಅವರ ಪರವಾಗಿ ಹಿರಿಯ ವಕೀಲ ಶ್ರೀ ಎಸ್. ಬಾಲನ್ ಅವರು ಮಂಡಿಸಿದ ವಾದವನ್ನು ಪುರಸ್ಕರಿಸಿದ ಮುಖ್ಯ ನ್ಯಾಯಮೂರ್ತಿಗಳು, “Death Rate is Disproportionate” (ಸಾವಿನ ಸಂಖ್ಯೆ ಸಹಜವಾಗಿಲ್ಲ) ಎಂದು ಅಭಿಪ್ರಾಯಪಟ್ಟಿದ್ದಾರೆ. ಈ ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ, “ಈ ಕುರಿತ ತನಿಖೆಯನ್ನು ಅರ್ಧಕ್ಕೆ ಕೈಬಿಡಲು ಸಾಧ್ಯವಿಲ್ಲ” ಎಂದು ಹೇಳುತ್ತಾ, ಈವರೆಗಿನ ಎಲ್ಲಾ 74 ಪ್ರಕರಣಗಳ ತನಿಖಾ ವರದಿಯನ್ನು ತಕ್ಷಣ ಸಲ್ಲಿಸುವಂತೆ ಸರ್ಕಾರಕ್ಕೆ ಸೂಚಿಸಿದ್ದಾರೆ.
ಹಿರಿಯ ವಕೀಲ ಎಸ್. ಬಾಲನ್ ಮಂಡಿಸಿದ ಪ್ರಮುಖ ವಾದಗಳು:
-
ನಿಯಮಬಾಹಿರ ಶವ ಸಂಸ್ಕಾರ: 74 ಯುಡಿಆರ್ (ಅಸಹಜ ಸಾವು) ಪ್ರಕರಣಗಳಲ್ಲಿ ಕನಿಷ್ಠ ಕಾನೂನು ಪ್ರಕ್ರಿಯೆಗಳನ್ನು ಪಾಲಿಸಿಲ್ಲ. ಪೋಸ್ಟ್ ಮಾರ್ಟಂ ಮಾಡದೆ ಹೆಣಗಳನ್ನು ಸುಟ್ಟು ಹಾಕಲಾಗಿದೆ.
-
ತನಿಖಾ ಲೋಪ: ಪೊಲೀಸರ ಮನವಿ ಮೇರೆಗೆ ಗ್ರಾಮ ಪಂಚಾಯತ್ ಎಲ್ಲಾ ಶವಗಳನ್ನು ಅವಸರವಸರವಾಗಿ ಸುಟ್ಟು ಹಾಕಿದೆ. ಈ ಬಗ್ಗೆ ಆರ್ಟಿಐ ದಾಖಲೆಗಳೂ ಇವೆ.
-
ಸಾಕ್ಷ್ಯ ನಾಶದ ಶಂಕೆ: ಶವಗಳ ವಿಡಿಯೋ ಅಥವಾ ಫೋಟೋಗ್ರಫಿ ಮಾಡಿಲ್ಲ. ಸಂಬಂಧಿಕರ ಪತ್ತೆಗೆ ಪತ್ರಿಕಾ ಪ್ರಕಟಣೆಯನ್ನೂ ನೀಡಿಲ್ಲ.
-
ಮಾಲೀಕರ ವಿಚಾರಣೆ ನಡೆದಿಲ್ಲ: ಶರಾವತಿ ಲಾಡ್ಜ್ ಮತ್ತು ನದಿ ಬದಿಯಲ್ಲಿ ಪದೇ ಪದೇ ಶವಗಳು ಪತ್ತೆಯಾದರೂ, ಲಾಡ್ಜ್ ಮಾಲೀಕರಿಗೆ ಅಥವಾ ಜಮೀನು ಮಾಲೀಕರಿಗೆ ಒಂದೇ ಒಂದು ನೋಟಿಸ್ ನೀಡಿ ವಿಚಾರಣೆ ನಡೆಸಿಲ್ಲ.
ಎಸ್ಐಟಿ ವರದಿಗೆ ಆಗ್ರಹ
ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯವು, “ಶವ ಪತ್ತೆಯಾದಾಗ ಪೋಸ್ಟ್ ಮಾರ್ಟಂ ಮಾಡಲಾಗಿದೆಯೇ? ನಾಪತ್ತೆಯಾದವರ ಪತ್ತೆಗೆ ಸರ್ಕಾರ ಯಾವ ಕ್ರಮ ಕೈಗೊಂಡಿದೆ?” ಎಂದು ಪ್ರಶ್ನಿಸಿದೆ. ಅಲ್ಲದೆ, ಈ ಹಿಂದೆ ಈ ಬಗ್ಗೆ ರಚನೆಯಾಗಿದ್ದ ಎಸ್ಐಟಿ (SIT) ನಡೆಸಿದ ತನಿಖೆಯ ಸಂಪೂರ್ಣ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕು ಎಂದು ಸರ್ಕಾರಕ್ಕೆ ತಾಕೀತು ಮಾಡಿದೆ.
ನೊಂದ ಕುಟುಂಬಗಳಲ್ಲಿ ಮೂಡಿದ ಆಶಾವಾದ
ವಿಚಾರಣೆಯ ಸಂದರ್ಭದಲ್ಲಿ ಹಿರಿಯ ವಕೀಲ ಎಸ್. ಬಾಲನ್ ಅವರೊಂದಿಗೆ ಕಿರಿಯ ನ್ಯಾಯವಾದಿ ರಕ್ಷಿಕಾ ಸಿಂಗ್, ಹಿರಿಯ ಪತ್ರಕರ್ತ ನವೀನ್ ಸೂರಿಂಜೆ ಹಾಗೂ ಧರ್ಮಸ್ಥಳ ಠಾಣೆಯ ಅಧಿಕಾರಿಗಳು ಉಪಸ್ಥಿತರಿದ್ದರು.
“ಉಚ್ಚ ನ್ಯಾಯಾಲಯದ ಈ ಬೆಳವಣಿಗೆಯು ದಶಕಗಳಿಂದ ನ್ಯಾಯಕ್ಕಾಗಿ ಹೋರಾಡುತ್ತಿರುವ ನೊಂದ ಕುಟುಂಬಗಳಿಗೆ ಮತ್ತು ಹೋರಾಟಗಾರರಿಗೆ ದೊಡ್ಡ ಆಶಾವಾದ ಮೂಡಿಸಿದೆ. ಇದು ಈ ಪ್ರಕರಣಕ್ಕೆ ತಾರ್ಕಿಕ ಅಂತ್ಯ ಸಿಗುವ ದಾರಿಯಲ್ಲಿ ನಿರ್ಣಾಯಕ ಹೆಜ್ಜೆಯಾಗಿದೆ,” ಎಂದು ಹೋರಾಟಗಾರ ಗಿರೀಶ ಮಟ್ಟೆಣ್ಣವರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಧಾನಸೌಧದ ‘ಸಾರಥಿಗಳ’ ಮೌನ ರೋದನೆ: ‘ಮೂಲಭೂತ ಸೌಕರ್ಯ’ಕ್ಕಾಗಿ ‘ಶಾಸಕ ಸುರೇಶ್ ಕುಮಾರ್’ ಆಗ್ರಹ
SHOCKING : ರಾಜ್ಯದಲ್ಲಿ ‘ಹೃದಯಾಘಾತಕ್ಕೆ’ ಮತ್ತೊಂದು ಬಲಿ : ಕೋಲಾರದಲ್ಲಿ ಹೆಡ್ ಕಾನ್ಸ್ಟೇಬಲ್ ಸಾವು!








