ಬೆಂಗಳೂರು: ನೈರುತ್ಯ ರೈಲ್ವೆ ಇಲಾಖೆಯ ಮುಂಬಡ್ತಿ (ಪದೋನ್ನತಿ) ಪರೀಕ್ಷೆಗಳನ್ನು ಕೇವಲ ಹಿಂದಿ ಮತ್ತು ಇಂಗ್ಲಿಷ್ನಲ್ಲಿ ನಡೆಸಲು ಮುಂದಾಗಿರುವ ನಿರ್ಧಾರದ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ಕೆಂಡಾಮಂಡಲವಾಗಿದೆ. ಈ ಅನ್ಯಾಯದ ವಿರುದ್ಧ ನಾಳೆಯಿಂದಲೇ (ಮಂಗಳವಾರ) ರಾಜ್ಯಾದ್ಯಂತ ತೀವ್ರ ಸ್ವರೂಪದ ಪ್ರತಿಭಟನೆ ನಡೆಸುವುದಾಗಿ ಕರವೇ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡ ಎಚ್ಚರಿಸಿದ್ದಾರೆ.
ನಂಬಿಕೆ ದ್ರೋಹದ ಆರೋಪ:
ಸೋಮವಾರ ಮಾಧ್ಯಮ ಹೇಳಿಕೆ ನೀಡಿದ ನಾರಾಯಣಗೌಡ ಅವರು, ರೈಲ್ವೆ ಇಲಾಖೆಯು ಕನ್ನಡಿಗ ಉದ್ಯೋಗಿಗಳಿಗೆ ನಂಬಿಕೆ ದ್ರೋಹ ಎಸಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
-
2025ರ ಸೆಪ್ಟೆಂಬರ್ ಮತ್ತು ನವೆಂಬರ್ನಲ್ಲಿ ಹೊರಡಿಸಲಾದ ಗೂಡ್ಸ್ ಟ್ರೇನ್ ಮ್ಯಾನೇಜರ್ (194 ಹುದ್ದೆ) ಮತ್ತು ಹುಬ್ಬಳ್ಳಿ ವಿಭಾಗದ ಎಲ್ಡಿಸಿಇ (101 ಹುದ್ದೆ) ಮುಂಬಡ್ತಿ ಅಧಿಸೂಚನೆಗಳಲ್ಲಿ ಕೇವಲ ಹಿಂದಿ ಮತ್ತು ಇಂಗ್ಲಿಷ್ ಭಾಷೆಗಳನ್ನಷ್ಟೇ ನೀಡಲಾಗಿತ್ತು.
-
ಈ ಬಗ್ಗೆ ಈ ಹಿಂದೆ ಕರವೇ ಪ್ರತಿಭಟಿಸಿದಾಗ, ರೈಲ್ವೆ ಉನ್ನತಾಧಿಕಾರಿಗಳು ಸಭೆ ನಡೆಸಿ “ಕನ್ನಡದಲ್ಲೂ ಪರೀಕ್ಷೆ ನಡೆಸುತ್ತೇವೆ” ಎಂದು ಭರವಸೆ ನೀಡಿದ್ದರು. ಆದರೆ ಈಗ ಆ ಭರವಸೆ ಹುಸಿಯಾಗಿದೆ ಎಂದು ಅವರು ಕಿಡಿಕಾರಿದ್ದಾರೆ.
ಸಚಿವರ ಭರವಸೆ ಎಲ್ಲಿ ಹೋಯಿತು?
ರೈಲ್ವೆ ಇಲಾಖೆಯ ಈ ಕ್ರಮದ ಬಗ್ಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಮತ್ತು ಕೇಂದ್ರ ರೈಲ್ವೆ ರಾಜ್ಯ ಸಚಿವ ವಿ. ಸೋಮಣ್ಣ ಅವರ ಗಮನಕ್ಕೆ ತರಲಾಗಿತ್ತು. ಕನ್ನಡಿಗರಿಗೆ ಅನ್ಯಾಯವಾಗದಂತೆ ನೋಡಿಕೊಳ್ಳುತ್ತೇವೆ ಎಂದು ಸಚಿವರು ನೀಡಿದ್ದ ಮಾತು ಈಗ ಸುಳ್ಳಾಗಿದೆ. ಪರೀಕ್ಷೆಗೆ ಕೇವಲ ನಾಲ್ಕು ದಿನಗಳಿರುವಾಗ ನೋಟಿಫಿಕೇಶನ್ ಹೊರಡಿಸಿರುವುದು ಕನ್ನಡಿಗ ಉದ್ಯೋಗಿಗಳ ಭವಿಷ್ಯವನ್ನು ಅತಂತ್ರಗೊಳಿಸುವ ಸಂಚು ಎಂದು ನಾರಾಯಣಗೌಡ ದೂರಿದ್ದಾರೆ.
ತಾಳ್ಮೆ ಪರೀಕ್ಷಿಸಬೇಡಿ – ಎಚ್ಚರಿಕೆ:
“ರೈಲ್ವೆ ಇಲಾಖೆಯಲ್ಲಿರುವ ಉತ್ತರ ಭಾರತದ ಅಧಿಕಾರಿಗಳು ಪದೇ ಪದೇ ಕನ್ನಡಿಗರ ತಾಳ್ಮೆ ಪರೀಕ್ಷಿಸುತ್ತಿದ್ದಾರೆ. ಕನ್ನಡಿಗರು ಸಿಡಿದೆದ್ದರೆ ಕಾನೂನು ಸುವ್ಯವಸ್ಥೆ ಹದಗೆಡಬಹುದು, ಅದಕ್ಕೆ ಈ ಅಧಿಕಾರಿಗಳೇ ನೇರ ಹೊಣೆ. ಯಾವುದೇ ಬೆಲೆ ತೆತ್ತಾದರೂ ನಾವು ಕನ್ನಡಿಗರ ಹಿತರಕ್ಷಣೆ ಮಾಡುತ್ತೇವೆ ಮತ್ತು ಈ ಪರೀಕ್ಷೆಗಳನ್ನು ನಡೆಯಲು ಬಿಡುವುದಿಲ್ಲ,” ಎಂದು ಅವರು ಗುಡುಗಿದ್ದಾರೆ.
ಕನ್ನಡದಲ್ಲಿ ಪರೀಕ್ಷೆ ಬರೆಯಲು ಸಿದ್ಧರಾಗಿದ್ದ ನೂರಾರು ಕನ್ನಡಿಗ ಉದ್ಯೋಗಿಗಳು ಈಗ ಪರೀಕ್ಷೆ ಬರೆಯಲಾಗದ ಸ್ಥಿತಿಯಲ್ಲಿದ್ದು, ಹೋರಾಟದ ಹಾದಿ ಹಿಡಿಯಲು ಸಜ್ಜಾಗಿದ್ದಾರೆ.
Health Tips: ಇವು ‘ದ್ರಾಕ್ಷಿ ಸೇವನೆ’ಯ ಅದ್ಭುತ ಆರೋಗ್ಯಕರ ಪ್ರಯೋಜನಗಳು
ಅಧಿಕಾರಿಗಳ ಕಿರುಕುಳಕ್ಕೆ ಬೇಸತ್ತು ಕೃಷಿ ಇಲಾಖೆ ಗುತ್ತಿಗೆ ನೌಕರ ಆತ್ಮಹತ್ಯೆ








