ಬೆಂಗಳೂರು: `ಸುಲಲಿತ ಕೈಗಾರಿಕಾ ಸಂಸ್ಕೃತಿ’ಗೆ ಮತ್ತಷ್ಟು ಬಲ ತುಂಬುವ ಉದ್ದೇಶದಿಂದ ಸರಕಾರದ ಉನ್ನತ ಅಧಿಕಾರಿ ಮತ್ತು ಖಾಸಗಿ ಉದ್ಯಮಿಗಳನ್ನು ಒಳಗೊಂಡ ಜಂಟಿ ಸಮಾಲೋಚನಾ ಸಮಿತಿಯನ್ನು ರಚಿಸಲಾಗುವುದು. ಇದರಿಂದ ಕೈಗಾರಿಕಾ ರಂಗಕ್ಕೆ ಸಂಬಂಧಿಸಿದ ಅಗತ್ಯ ಪ್ರಕ್ರಿಯೆ ಮುಂತಾದವು ತ್ವರಿತವಾಗಿ ಪರಿಹಾರ ಕಾಣಲಿವೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಹೇಳಿದ್ದಾರೆ.
ಮಂಗಳವಾರ ಇಲ್ಲಿನ ಖಾಸಗಿ ಹೋಟೆಲಿನಲ್ಲಿ ನಡೆದ ಭಾರತೀಯ ಕೈಗಾರಿಕಾ ಒಕ್ಕೂಟದ (ಸಿಐಐ) ರಾಜ್ಯ ಶಾಖೆಯ ವಾರ್ಷಿಕ ಸಭೆಯಲ್ಲಿ ಅವರು ಪಾಲ್ಗೊಂಡಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, `ಕೈಗಾರಿಕಾ ವಲಯದಲ್ಲಿ ಕಂಡುಬರುವ ಸಮಸ್ಯೆಗಳಿಗೆ ಕ್ಷಿಪ್ರವಾಗಿ ಪರಿಹಾರೋಪಾಯಗಳನ್ನು ಕಂಡುಕೊಳ್ಳಲು ಕೇರಳದಲ್ಲಿ ಸರಕಾರದ ಮುಖ್ಯ ಕಾರ್ಯದರ್ಶಿ ಮತ್ತು ಉದ್ಯಮಿಗಳಿಬ್ಬರೂ ಇರುವ ವೇದಿಕೆ ಇದ್ದು, ಅದು ಅತ್ಯುತ್ತಮವಾಗಿ ಕೆಲಸ ಮಾಡುತ್ತಿದೆ ಎನ್ನುವ ಸಂಗತಿಯನ್ನು ಸಿಐಐ ಪ್ರತಿನಿಧಿಗಳು ಗಮನಕ್ಕೆ ತಂದಿದ್ದಾರೆ. ಇದನ್ನು ನಮ್ಮಲ್ಲೂ ಅಳವಡಿಸಿಕೊಳ್ಳಲಾಗುವುದು. ಒಟ್ಟಿನಲ್ಲಿ ಕೈಗಾರಿಕೆಗಳ ಬೆಳವಣಿಗೆಗೆ ಬೇಕಾದ ರಚನಾತ್ಮಕ ಕ್ರಮಗಳು ಎಲ್ಲೇ ಇದ್ದರೂ ಅವುಗಳನ್ನು ನಮ್ಮದನ್ನಾಗಿಸಿಕೊಳ್ಳಲು ಮುಕ್ತ ಮನಸ್ಸಿದೆ’ ಎಂದಿದ್ದಾರೆ.
ರಾಜ್ಯದಲ್ಲಿ ಈಗಾಗಲೇ ದಕ್ಷ ಕೈಗಾರಿಕಾ ನೀತಿ, ಇಂಧನ ನೀತಿ, ಏಕಗವಾಕ್ಷಿ ವ್ಯವಸ್ಥೆ, ಚಾಟ್-ಬಾಟ್, ಏಕೀಕೃತ ಸೇವೆಗಳ ಜಾಲ ಮುಂತಾದ ಉಪಕ್ರಮಗಳನ್ನು ಜಾರಿಗೆ ತರಲಾಗಿದೆ. ಒಟ್ಟಿನಲ್ಲಿ ರಾಜ್ಯವು ಕೈಗಾರಿಕಾ ಬೆಳವಣಿಗೆಯಲ್ಲಿ ಅಗ್ರಪಂಕ್ತಿಯಲ್ಲಿ ಇರುವಂತೆ ನೋಡಿಕೊಳ್ಳಲು ಬೇಕಾದ ಅಗತ್ಯ ಕ್ರಮಗಳನ್ನು ವಿಳಂಬ ಮಾಡದೆ ತರಲಾಗುವುದು. ನಾವು ಸುಲಲಿತ ವಾಣಿಜ್ಯ ವಹಿವಾಟಿನ ಜತೆಗೆ ನಾವೀನ್ಯತೆಯ ವೇಗಕ್ಕೂ (ಸ್ಪೀಡ್ ಆಫ್ ಇನ್ನೋವೇಶನ್) ಆದ್ಯತೆ ಕೊಟ್ಟಿದ್ದೇವೆ ಎಂದು ಅವರು ತಿಳಿಸಿದ್ದಾರೆ.
ಕೃತಕ ಬುದ್ಧಿಮತ್ತೆ ಕ್ಷೇತ್ರದ ಉತ್ತೇಜನಕ್ಕೆ ಸರಕಾರವು 1,386 ಕೋಟಿ ರೂ. ವೆಚ್ಚದಲ್ಲಿ `ಕೆ-ಕ್ವೆಸ್ಟ್’ ಯೋಜನೆಯನ್ನು ಮತ್ತು 233 ಕೋಟಿ ರೂ. ವೆಚ್ಚದಲ್ಲಿ ವಿಜ್ಞಾನ ನಗರ ಯೋಜನೆಯನ್ನು 2026-27ರ ಬಜೆಟ್ಟಿನಲ್ಲಿ ಘೋಷಿಸಿದೆ. ಜತೆಗೆ `ಕ್ಯಾಟ್ಸ್’ (ಸೆಂಟರ್ ಫಾರ್ ಅಪ್ಲೈಡ್ ಎಐ ಫಾರ್ ಟೆಕ್-ಸೊಪ್ಯೂಷನ್ಸ್) ಸಂಸ್ಥೆಗೆ 50 ಕೋಟಿ ರೂ. ಕೊಡಲಾಗುತ್ತಿದೆ. ಇದಕ್ಕೆ ಪೂರಕವಾಗಿ ಬೆಂಗಳೂರಿನಲ್ಲಿರುವ ಕೆಐಎಬಿಡಿ ಏರೋಸ್ಪೇಸ್ ಪಾರ್ಕ್ ಪ್ರದೇಶದಲ್ಲಿ ಏರೋಸ್ಪೇಸ್ ಕಾಮನ್ ಫೆಸಿಲಿಟಿ ಸೆಂಟರನ್ನು ಸ್ಥಾಪಿಸಲಾಗುತ್ತಿದೆ ಎಂದು ಅವರು ವಿವರಿಸಿದ್ದಾರೆ.
ಐಟಿ ಮತ್ತು ಆಧುನಿಕ ಉತ್ಪಾದನೆಯನ್ನು ಉತ್ತೇಜಿಸಲು ತೀರ್ಮಾನಿಸಲಾಗಿದೆ. ಇದಕ್ಕಾಗಿ ಡಾಬಸಪೇಟೆ- ದೊಡ್ಡಬಳ್ಳಾಪುರ ಸಮೀಪ ಅಸ್ತಿತ್ವಕ್ಕೆ ಬರುತ್ತಿರುವ ಕ್ವಿನ್ ಸಿಟಿಯಲ್ಲಿ 200 ಎಕರೆ ಜಾಗದಲ್ಲಿ ಸೆಮಿಕಂಡಕ್ಟರ್ ಪಾರ್ಕ್ ಸ್ಥಾಪಿಸಲಾಗುವುದು. ಈ ಸಿಟಿಯ ಮೊದಲ ಹಂತವು ಈ ವರ್ಷದ ಡಿಸೆಂಬರ್ ವೇಳೆಗೆ ಪೂರ್ಣಗೊಳ್ಳಲಿದೆ. ಇದಲ್ಲದೆ ಹೆಸರಘಟ್ಟದ ಹತ್ತಿರ ಭಾರತದ ಪ್ರಪ್ರಥಮ ಕ್ವಾಂಟಂ ಸಿಟಿ ಮತ್ತು ಬಿಡದಿ ಬಳಿ `ಎಐ ಸಿಟಿ’ ಅಭಿವೃದ್ಧಿಪಡಿಸಲಾಗುವುದು. ಸದ್ಯಕ್ಕೆ ಭಾರತವು ಎಐ ಕ್ಷೇತ್ರದಲ್ಲಿ 200 ಬಿಲಿಯನ್ ಡಾಲರ್ ಗೂ ಹೆಚ್ಚು ಮೌಲ್ಯದ ವಹಿವಾಟು ನಡೆಸುತ್ತಿದ್ದು, ಇದರಲ್ಲಿ ರಾಜ್ಯವು ಸಿಂಹಪಾಲು ಕೊಡುಗೆ ನೀಡುತ್ತಿದೆ ಎಂದು ಪಾಟೀಲ ನುಡಿದಿದ್ದಾರೆ.
ಕಾರ್ಯಕ್ರಮದಲ್ಲಿ ಮುತ್ತೂಟ್ ಫಿನ್ ಕಾರ್ಪ್ ಲಿಮಿಟೆಡ್ ಅಧ್ಯಕ್ಷ ಥಾಮನ್ ಜಾನ್ ಮುತ್ತೂಟ್, ಸಿಐಐ ರಾಜ್ಯ ಘಟಕದ ಅಧ್ಯಕ್ಷ ರವೀಂದ್ರ ಶ್ರೀಕಂಠನ್, ಉಪಾಧ್ಯಕ್ಷ ಗುರುಪ್ರಸಾದ್ ಮುದಲಾಪುರ ಮುಂತಾದವರು ಉಪಸ್ಥಿತರಿದ್ದರು.








