ನವದೆಹಲಿ : ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಕೇಂದ್ರ ಆಡಳಿತ ವ್ಯವಸ್ಥೆಯಲ್ಲಿ ಮಹತ್ತರವಾದ ಹೆಜ್ಜೆಯೊಂದನ್ನು ಇಟ್ಟಿದ್ದು, ಒಂದೇ ರಾತ್ರಿಯಲ್ಲಿ ಒಟ್ಟು 9 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ರಾಜ್ಯಪಾಲರು ಮತ್ತು ಲೆಫ್ಟಿನೆಂಟ್ ಗವರ್ನರ್ಗಳನ್ನು (ಉಪ ರಾಜ್ಯಪಾಲರು) ವರ್ಗಾವಣೆ ಮತ್ತು ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ. ಈ ದಿಢೀರ್ ಬೆಳವಣಿಗೆಯು ರಾಜಕೀಯ ವಲಯದಲ್ಲಿ ತೀವ್ರ ಸಂಚಲನಕ್ಕೆ ಕಾರಣವಾಗಿದೆ.
ಇತ್ತೀಚಿನ ಬೆಳವಣಿಗೆಗಳ ಪ್ರಕಾರ, ಕೇಂದ್ರ ಸರ್ಕಾರವು ಈ ಕೆಳಗಿನಂತೆ 9 ರಾಜ್ಯಪಾಲರ ಸ್ಥಾನಗಳನ್ನು ಬದಲಾಯಿಸಿದೆ:
ವಿನಯ್ ಕುಮಾರ್ ಸಕ್ಸೇನಾ: ದೆಹಲಿಯ ಲೆಫ್ಟಿನೆಂಟ್ ಗವರ್ನರ್ ಆಗಿದ್ದ ಇವರನ್ನು ‘ಲಡಾಖ್ನ ಲೆಫ್ಟಿನೆಂಟ್ ಗವರ್ನರ್’ ಆಗಿ ನೇಮಿಸಲಾಗಿದೆ.
ತರಂಜಿತ್ ಸಿಂಗ್ ಸಂಧು: ಇವರನ್ನು ‘ದೆಹಲಿಯ ನೂತನ ಲೆಫ್ಟಿನೆಂಟ್ ಗವರ್ನರ್’ ಆಗಿ ನೇಮಕ ಮಾಡಲಾಗಿದೆ.
ಶಿವ್ ಪ್ರತಾಪ್ ಶುಕ್ಲಾ: ಹಿಮಾಚಲ ಪ್ರದೇಶದ ರಾಜ್ಯಪಾಲರಾಗಿದ್ದ ಇವರನ್ನು ‘ತೆಲಂಗಾಣ ರಾಜ್ಯಪಾಲರಾಗಿ’ ವರ್ಗಾವಣೆ ಮಾಡಲಾಗಿದೆ.
ಜಿಷ್ಣು ದೇವ್ ವರ್ಮಾ: ತೆಲಂಗಾಣದ ರಾಜ್ಯಪಾಲರಾಗಿದ್ದ ಇವರನ್ನು ‘ಮಹಾರಾಷ್ಟ್ರ ರಾಜ್ಯಪಾಲರಾಗಿ’ ನೇಮಿಸಲಾಗಿದೆ.
ನಂದ್ ಕಿಶೋರ್ ಯಾದವ್: ಇವರನ್ನು ‘ನಾಗಾಲ್ಯಾಂಡ್ನ ನೂತನ ರಾಜ್ಯಪಾಲರಾಗಿ’ ನೇಮಕ ಮಾಡಲಾಗಿದೆ.
ಲೆಫ್ಟಿನೆಂಟ್ ಜನರಲ್ (ನಿವೃತ್ತ) ಸೈಯದ್ ಅತಾ ಹಸ್ನೇನ್: ಇವರನ್ನು ‘ಬಿಹಾರದ ರಾಜ್ಯಪಾಲರನ್ನಾಗಿ’ ನೇಮಿಸಲಾಗಿದೆ.
ಆರ್.ಎನ್. ರವಿ: ತಮಿಳುನಾಡು ರಾಜ್ಯಪಾಲರಾಗಿದ್ದ ಇವರನ್ನು ‘ಪಶ್ಚಿಮ ಬಂಗಾಳದ ರಾಜ್ಯಪಾಲರಾಗಿ’ ವರ್ಗಾವಣೆ ಮಾಡಲಾಗಿದೆ.
ರಾಜೇಂದ್ರ ವಿಶ್ವನಾಥ್ ಅರ್ಲೇಕರ್: ಕೇರಳದ ರಾಜ್ಯಪಾಲರಾಗಿರುವ ಇವರಿಗೆ ‘ತಮಿಳುನಾಡು ರಾಜ್ಯಪಾಲರ ಹುದ್ದೆಯ ಹೆಚ್ಚುವರಿ ಹೊಣೆಗಾರಿಕೆ’ ನೀಡಲಾಗಿದೆ.
ಕವೀಂದರ್ ಗುಪ್ತಾ: ಲಡಾಖ್ನ ಲೆಫ್ಟಿನೆಂಟ್ ಗವರ್ನರ್ ಆಗಿದ್ದ ಇವರನ್ನು ‘ಹಿಮಾಚಲ ಪ್ರದೇಶದ ರಾಜ್ಯಪಾಲರಾಗಿ’ ನೇಮಿಸಲಾಗಿದೆ.
ರಾಜಕೀಯ ಲೆಕ್ಕಾಚಾರಗಳೇನು?
ಪಶ್ಚಿಮ ಬಂಗಾಳ ಮತ್ತು ತಮಿಳುನಾಡಿನಲ್ಲಿ ಮುಂಬರುವ ವಿಧಾನಸಭಾ ಚುನಾವಣೆಗೆ ಇನ್ನು ಕೆಲವೇ ವಾರಗಳು ಬಾಕಿ ಇರುವ ಬೆನ್ನಲ್ಲೇ, ಕೇಂದ್ರ ಸರ್ಕಾರದ ಈ ಮಹತ್ವದ ಬದಲಾವಣೆಗಳು ಸಾಕಷ್ಟು ಕುತೂಹಲ ಕೆರಳಿಸಿವೆ. ಚುನಾವಣಾ ದೃಷ್ಟಿಯಿಂದಲೇ ಈ ಮಹತ್ವದ ಬದಲಾವಣೆಗಳನ್ನು ಮಾಡಲಾಗಿದೆಯೇ ಎಂಬ ಬಗ್ಗೆ ರಾಜಕೀಯ ವಲಯದಲ್ಲಿ ಭಾರೀ ಊಹಾಪೋಹಗಳು ಮತ್ತು ಚರ್ಚೆಗಳು ನಡೆಯುತ್ತಿವೆ.








