ಶಿವಮೊಗ್ಗ: ಕರ್ನಾಟಕದ ಮಲೆನಾಡು ಭಾಗದ ರೈತರ ಪಾಲಿಗೆ ಭೂಮಿ ಎಂಬುದು ಕೇವಲ ಆಸ್ತಿಯಲ್ಲ, ಅದು ಅವರ ಜೀವನದ ಅಸ್ತಿತ್ವ. ಆದರೆ ಕಳೆದ ಆರು ದಶಕಗಳಿಂದ ಈ ಭಾಗದ ರೈತರು ಅರಣ್ಯ ಹಕ್ಕು, ಬಗರ್ ಹುಕುಂ ಸಾಗುವಳಿ ಮತ್ತು ಶರಾವತಿ ಮುಳುಗಡೆ ಸಂತ್ರಸ್ತರ ಸಮಸ್ಯೆಗಳ ಸುಳಿಯಲ್ಲಿ ಸಿಲುಕಿ ನಲುಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ, ಸರ್ಕಾರಗಳ ನಿರ್ಲಕ್ಷ್ಯದ ವಿರುದ್ಧ ಆಕ್ರೋಶಗೊಂಡಿರುವ ‘ಮಲೆನಾಡು ರೈತರ ಹೋರಾಟ ಸಮಿತಿ’ಯಿಂದ ಇಂದು ಸಿಗಂದೂರಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೃಹತ್ ‘ಸೇತುವೆ ರಸ್ತೆ ತಡೆ ಚಳುವಳಿ’ ನಡೆಸಿ, ಹಕ್ಕು ಪತ್ರಕ್ಕಾಗಿ ಒತ್ತಾಯಿಸಲಾಯಿತು.
ಈ ಹೋರಾಟವು ಕೇವಲ ಸಾಂಕೇತಿಕ ಪ್ರತಿಭಟನೆಯಲ್ಲ, ಬದಲಾಗಿ ಮಲೆನಾಡಿನ ರೈತರ ಅಸ್ತಿತ್ವಕ್ಕಾಗಿ ನಡೆಯುತ್ತಿರುವ ‘ಅಂತಿಮ ಸಮರ’ ಎಂದು ಮಲೆನಾಡು ರೈತ ಹೋರಾಟ ಸಮಿತಿಯ ಸಂಚಾಲಕರಾದಂತ ತೀ.ನ.ಶ್ರೀನಿವಾಸ್ ಘೋಷಿಸಿದರು. ಅಲ್ಲದೇ 15 ದಿನಗಳಲ್ಲಿ ಶರಾವತಿ ಮುಳುಗಡೆ ಸಂತ್ರಸ್ತರಿಗೆ ಹಕ್ಕು ಪತ್ರ ವಿತರಣೆ ಮಾಡದೇ ಇದ್ದರೇ, ಜಿಲ್ಲಾಧಿಕಾರಿಗಳ ಕಚೇರಿಗೆ ಬೀಗ ಜಡಿದು ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು.
ರಾಜಕೀಯ ಭರವಸೆಗಳ ಸುಳ್ಳಿನ ಕಂತೆ: ತೀ.ನ ಶ್ರೀನಿವಾಸ್ ಆಕ್ರೋಶ
ಕಳೆದ ವಿಧಾನಸಭಾ ಚುನಾವಣೆಗಳ ಸಂದರ್ಭದಲ್ಲಿ ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಪ್ರಸ್ತುತ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶಿವಮೊಗ್ಗ ಜಿಲ್ಲೆಗೆ ಭೇಟಿ ನೀಡಿದ್ದಾಗ, ಮಲೆನಾಡಿನ ರೈತರ ಜ್ವಲಂತ ಸಮಸ್ಯೆಗಳನ್ನು ಬಗೆಹರಿಸುವುದಾಗಿ ಆಶ್ವಾಸನೆ ನೀಡಿದ್ದರು. ವಿಶೇಷವಾಗಿ ಶರಾವತಿ ಮುಳುಗಡೆ ಸಂತ್ರಸ್ತರಿಗೆ 15 ದಿನಗಳಲ್ಲಿ ಹಕ್ಕುಪತ್ರ ನೀಡುವುದಾಗಿ ಭರವಸೆ ನೀಡಲಾಗಿತ್ತು. ಆದರೆ, ಚುನಾವಣೆ ಮುಗಿದು ವರ್ಷಗಳೇ ಕಳೆದರೂ ಈ ಭರವಸೆಗಳು ಕೇವಲ ಕಾಗದದ ಮೇಲೆ ಉಳಿದಿವೆಯೇ ಹೊರತು ರೈತರ ಕೈಗೆ ಹಕ್ಕುಪತ್ರ ಸಿಕ್ಕಿಲ್ಲ. ಈ ರಾಜಕೀಯ ವಂಚನೆಯ ವಿರುದ್ಧ ರೈತರು ಈಗ ಬೀದಿಗೆ ಇಳಿಯಲು ನಿರ್ಧರಿಸಿದ್ದಾರೆ ಎಂಬುದಾಗಿ ಸಂಚಾಲಕ ತೀ.ನ ಶ್ರೀನಿವಾಸ್ ಹೇಳಿದರು.
ಪಕ್ಷಾತೀತವಾಗಿ ಶರಾವತಿ ಮುಳುಗಡೆ ಸಂತ್ರಸ್ತರ ಸಂಕಷ್ಟಕ್ಕೆ ಪ್ರತಿಸ್ಪಂದಿಸುವಂತ ಕೆಲಸ ಮಾಡಬೇಕಾಗಿತ್ತು. ಆದರೇ ಆ ಕೆಲಸವನ್ನೇ ಮಾಡಿಲ್ಲ. ಒಂದೊಂದು ರಾಜಕೀಯ ಪಕ್ಷಗಳು ಕೇವಲ ಚುನಾವಣೆ ವೇಳೆಯಲ್ಲಿ ಭರವಸೆಯಾಗಿ ಘೋಷಿಸಿ ಗೆಲುವು ಸಾಧಿಸಿದರೇ ವಿನಹ ಈವರೆಗೂ ಸಮಸ್ಯೆ ಬಗೆ ಹರಿಸಿಲ್ಲ. ರಾಜಕೀಯ ಭರವಸೆಗಳು ಸುಳ್ಳಿನ ಕಂತೆಯಾಗಿದೆ ಎಂಬುದಾಗಿ ಆಕ್ರೋಶವನ್ನು ಹೊರ ಹಾಕಿದರು.
ಈ ಬೇಡಿಕೆ ಈಡೇರಿಸುವಂತೆ ಆಗ್ರಹ
1. ಶರಾವತಿ ಮುಳುಗಡೆ ಸಂತ್ರಸ್ತರ ನ್ಯಾಯಯುತ ಹಕ್ಕು:
ಶರಾವತಿ ಅಣೆಕಟ್ಟು ನಿರ್ಮಾಣವಾದಾಗ ಸಾವಿರಾರು ಕುಟುಂಬಗಳು ತಮ್ಮ ಫಲವತ್ತಾದ ಭೂಮಿಯನ್ನು ತ್ಯಾಗ ಮಾಡಿದವು. ಅಂದು ಅವರಿಗೆ ನೀಡಿದ ಪರ್ಯಾಯ ಭೂಮಿಗೆ ಇಂದಿಗೂ ಸಕ್ರಮ ದಾಖಲೆಗಳಿಲ್ಲ. ಅರಣ್ಯ ಇಲಾಖೆ ಮತ್ತು ಕಂದಾಯ ಇಲಾಖೆಯ ನಡುವಿನ ಸಮನ್ವಯದ ಕೊರತೆಯಿಂದಾಗಿ ರೈತರು ಇಂದಿಗೂ ತಮ್ಮದೇ ಭೂಮಿಯಲ್ಲಿ ‘ಅತಿಕ್ರಮಣದಾರರು’ ಎನ್ನಿಸಿಕೊಳ್ಳುವಂತಾಗಿದೆ.
2. ಶರಾವತಿ ಅಭಯಾರಣ್ಯ ಘೋಷಣೆ ರದ್ದತಿ:
ಕರೂರು, ಭಾರಂಗಿ ಮತ್ತು ಆವಿನಹಳ್ಳಿ ಹೋಬಳಿಗಳ ಅನೇಕ ಗ್ರಾಮಗಳನ್ನು ‘ಶರಾವತಿ ಅಭಯಾರಣ್ಯ’ ವ್ಯಾಪ್ತಿಗೆ ಸೇರಿಸಿರುವುದು ರೈತರ ಆತಂಕಕ್ಕೆ ಕಾರಣವಾಗಿದೆ. ಗ್ರಾಮ ಪಂಚಾಯತಿ ಅಥವಾ ಸ್ಥಳೀಯ ಜನರ ಅಭಿಪ್ರಾಯ ಪಡೆಯದೆ ಏಕಪಕ್ಷೀಯವಾಗಿ ಅಭಯಾರಣ್ಯ ಘೋಷಣೆ ಮಾಡಿರುವುದರಿಂದ ರೈತರಿಗೆ ಯಾವುದೇ ಮೂಲಭೂತ ಸೌಕರ್ಯಗಳು ಸಿಗದಂತಾಗಿದೆ. ಮನೆ ದುರಸ್ತಿ ಅಥವಾ ಕೃಷಿ ಚಟುವಟಿಕೆಗಳಿಗೂ ಅರಣ್ಯ ಇಲಾಖೆ ಅಡ್ಡಿಪಡಿಸುತ್ತಿದೆ ಎಂಬುದು ರೈತರ ಗಂಭೀರ ದೂರು.
3. ಬಗರ್ ಹುಕುಂ ಸಾಗುವಳಿದಾರರ ಸಕ್ರಮ:
ಮಲೆನಾಡಿನಲ್ಲಿ ಸುಮಾರು 30 ರಿಂದ 40 ವರ್ಷಗಳಿಂದ ಕಾಫಿ, ಅಡಿಕೆ ಮತ್ತು ಇತರ ಬೆಳೆಗಳನ್ನು ಬೆಳೆಯುತ್ತಾ ಜೀವನ ನಡೆಸುತ್ತಿರುವ ಬಗರ್ ಹುಕುಂ ರೈತರ ಅರ್ಜಿಗಳನ್ನು ಸರ್ಕಾರ ವಿಲೇವಾರಿ ಮಾಡುತ್ತಿಲ್ಲ. 2014ರಲ್ಲಿ ಡೀಮ್ಡ್ ಫಾರೆಸ್ಟ್ ಎಂದು ಘೋಷಿಸಲಾದ ಭೂಮಿಗಳಲ್ಲಿ ಸಾಗುವಳಿ ಮಾಡುತ್ತಿರುವ ರೈತರನ್ನು ಒಕ್ಕಲೆಬ್ಬಿಸುವ ಪ್ರಯತ್ನಗಳು ನಡೆಯುತ್ತಿವೆ.
4. ಡೀಮ್ಡ್ ಫಾರೆಸ್ಟ್ (ಪರಿಭಾವಿತ ಅರಣ್ಯ) ಸಮಸ್ಯೆ:
ಅರಣ್ಯದ ಲಕ್ಷಣಗಳೇ ಇಲ್ಲದ ಕಂದಾಯ ಭೂಮಿಗಳನ್ನು ‘ಡೀಮ್ಡ್ ಫಾರೆಸ್ಟ್’ ಎಂದು ಗುರುತಿಸಲಾಗಿದೆ. ಇದರಿಂದಾಗಿ ಶಾಲಾ ಕಟ್ಟಡ, ಆಸ್ಪತ್ರೆ ಅಥವಾ ರಸ್ತೆ ನಿರ್ಮಾಣದಂತಹ ಸಾರ್ವಜನಿಕ ಕಾರ್ಯಗಳಿಗೂ ಅಡ್ಡಿಯಾಗುತ್ತಿದೆ. ಈ ಕೂಡಲೇ ವಸ್ತುಸ್ಥಿತಿ ಆಧಾರಿತ ಮರು ಸಮೀಕ್ಷೆ ನಡೆಸಿ, ಸಾಗುವಳಿ ಭೂಮಿಯನ್ನು ಅರಣ್ಯ ವ್ಯಾಪ್ತಿಯಿಂದ ಮುಕ್ತಗೊಳಿಸಬೇಕೆಂದು ಸಮಿತಿ ಒತ್ತಾಯಿಸಿದೆ.

5. ಸುಪ್ರೀಂ ಕೋರ್ಟ್ ಆದೇಶ ಮತ್ತು ಸರ್ಕಾರದ ಕರ್ತವ್ಯ:
ಸುಪ್ರೀಂ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ತಿರಸ್ಕರಿಸಲಾದ ಸುಮಾರು 3 ಲಕ್ಷ ಅರ್ಜಿಗಳನ್ನು ಮರು ಪರಿಶೀಲಿಸಲು ಸರ್ಕಾರಕ್ಕೆ ಅವಕಾಶವಿದೆ. ಆದರೆ ಸರ್ಕಾರಿ ಅಧಿಕಾರಿಗಳು ಸರಿಯಾದ ದಾಖಲೆಗಳನ್ನು ಒದಗಿಸದ ಕಾರಣ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಮನ್ವಯ ಸಾಧಿಸಿ ಈ ರೈತರಿಗೆ ನ್ಯಾಯ ಒದಗಿಸಬೇಕಿದೆ.
ಅರಣ್ಯ ಇಲಾಖೆಯ ದಬ್ಬಾಳಿಕೆ ವಿರುದ್ಧ ಕಿಡಿ
ಇತ್ತೀಚಿನ ದಿನಗಳಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ರೈತರ ಮೇಲೆ ದೌರ್ಜನ್ಯ ಎಸಗುತ್ತಿದ್ದಾರೆ. ಸಣ್ಣಪುಟ್ಟ ಮನೆ ನಿರ್ಮಾಣಕ್ಕೂ ಅಡ್ಡಿಪಡಿಸುವುದು, ರೈತರು ಕಷ್ಟಪಟ್ಟು ಬೆಳೆಸಿದ ಬೆಳೆಗಳನ್ನು ನಾಶಪಡಿಸುವುದು ಮತ್ತು ಸುಳ್ಳು ಪ್ರಕರಣಗಳನ್ನು ದಾಖಲಿಸುವ ಮೂಲಕ ರೈತರನ್ನು ಹೆದರಿಸಲಾಗುತ್ತಿದೆ. “ನಾವು ಕಾಡನ್ನು ಉಳಿಸಿದವರು, ನಮಗೆ ಕಾಡಿನ ಮೇಲಿರುವ ಹಕ್ಕನ್ನು ಕಸಿದುಕೊಳ್ಳಲು ಯಾರಿಂದಲೂ ಸಾಧ್ಯವಿಲ್ಲ” ಎಂಬುದು ಹೋರಾಟಗಾರರ ಖಡಕ್ ನುಡಿಯಾಗಿತ್ತು.
ದೆಹಲಿ ಮತ್ತು ಬೆಳಗಾವಿ ಮಾದರಿಯ ಪ್ರತಿಭಟನೆ
ಮಲೆನಾಡು ರೈತ ಹೋರಾಟ ಸಮಿತಿಯ ಸಂಚಾಲಕರಾದ ತೀ.ನ.ಶ್ರೀನಿವಾಸ್ ಅವರು ಮಾತನಾಡಿ ನಾವು ಈವರೆಗೆ ಶಾಂತಿಯುತವಾಗಿ ಮನವಿಗಳನ್ನು ನೀಡಿದ್ದೇವೆ. ಆದರೆ ಸರ್ಕಾರಕ್ಕೆ ನಮ್ಮ ನೋವು ಅರ್ಥವಾಗುತ್ತಿಲ್ಲ. ಹಾಗಾಗಿ, ಇಂದು ಸಿಗಂದೂರಿನಲ್ಲಿ ನಾವು ರಸ್ತೆ ತಡೆ ನಡೆಸಿದ್ದೇವೆ. ಒಂದು ವೇಳೆ ಸರ್ಕಾರ ಆಗಲೂ ಎಚ್ಚೆತ್ತುಕೊಳ್ಳದಿದ್ದರೆ, ದೆಹಲಿಯಲ್ಲಿ ರೈತರು ನಡೆಸಿದ ಸುದೀರ್ಘ ಹೋರಾಟದ ಮಾದರಿಯಲ್ಲಿ ಅಥವಾ ಬೆಳಗಾವಿ ಅಧಿವೇಶನದ ಮಾದರಿಯಲ್ಲಿ ಅನಿರ್ದಿಷ್ಟಾವಧಿ ಪ್ರತಿಭಟನೆ ಹಮ್ಮಿಕೊಳ್ಳುತ್ತೇವೆ ಎಂದು ಎಚ್ಚರಿಸಿದ್ದಾರೆ.
ಸಾರ್ವಜನಿಕರಿಗೆ ಮತ್ತು ರೈತರಿಗೆ ಮನವಿ
ಈ ಬೃಹತ್ ಚಳುವಳಿಯಲ್ಲಿ ಕೇವಲ ಸಾಗರ ತಾಲ್ಲೂಕಿನವರಷ್ಟೇ ಅಲ್ಲದೆ, ಶಿವಮೊಗ್ಗ ಜಿಲ್ಲೆಯ ಎಲ್ಲಾ ಭಾಗದ ರೈತರು, ಸಂತ್ರಸ್ತರು ಮತ್ತು ಬಗರ್ ಹುಕುಂ ಸಾಗುವಳಿದಾರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು. ಇದು ನಮ್ಮ ಭೂಮಿಯ ಹಕ್ಕಿಗಾಗಿ ನಡೆಯುತ್ತಿರುವ ಕೊನೆಯ ಅವಕಾಶ ಎಂದು ಹೋರಾಟ ಸಮಿತಿ ತಿಳಿಸಿದೆ.
15 ದಿನಗಳ ಡೆಡ್ ಲೈನ್ ಕೊಟ್ಟ ಹೋರಾಟಗಾರರು
ಈ ವೇಳೆ ಮಾತನಾಡಿದಂತ ಮಲೆನಾಡು ರೈತರ ಹೋರಾಟ ಮಿತಿಯ ಕಾನೂನು ಸಲಹೆಗಾರ ಹಾಗೂ ಹೈಕೋರ್ಟ್ ವಕೀಲ ಹೆಚ್.ವಿ ಕುಮಾರಸ್ವಾಮಿ ಅವರು, ದಶಕಗಳೇ ಕಳೆಯುತ್ತಾ ಬಂದರೂ ಮಲೆನಾಡಿನ ಶರಾವತಿ ಮುಳುಗಡೆ ಸಂತ್ರಸ್ತರ ಸಮಸ್ಯೆ ಪರಿಹಾರವಾಗಿಲ್ಲ. ಹೀಗಾಗಿಯೆ ಶರವಾತಿ ಮುಳುಗಡೆ ಸಂತ್ರಸ್ತರು, ಅರಣ್ಯ ಭೂಮಿ ಸಾಗುವಳಿದಾರರು ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಸಿಗಂದೂರು ಸೇತುವೆ ಬಳಿಯಲ್ಲಿ ಹೆದ್ದಾರಿ ತಡೆ ನಡೆಸಿ ಪ್ರತಿಭಟನೆ ನಡೆಸಲಾಗಿದೆ. ಸರ್ಕಾರ ಇತ್ತ ಗಮನ ಹರಿಸಿ ಕೂಡಲೇ ಸಮಸ್ಯೆ ಪರಿಹರಿಸಬೇಕು. 15 ದಿನಗಳಲ್ಲಿ ಮಲೆನಾಡು ರೈತರ ಸಮಸ್ಯೆ ಪರಿಹರಿಸದೇ ಹೋದರೇ ಡಿಸಿ ಕಚೇರಿಗೆ ಅಲ್ಲ, ವಿಧಾನಸೌಧಕ್ಕೆ ಬೀಗ ಜಡಿದು ಪ್ರತಿಭಟನೆ ಮಾಡಬೇಕಾಗುತ್ತದೆ ಎಂಬುದಾಗಿ ಎಚ್ಚರಿಕೆ ನೀಡಿದರು.
ವರದಿ; ವಸಂತ ಬಿ ಈಶ್ವರಗೆರೆ, ಸಂಪಾದಕರು…..








