ಶಿವಮೊಗ್ಗ: ಸಾಮಾನ್ಯವಾಗಿ ಪೊಲೀಸ್ ಎಂದರೆ ಸಾಮಾನ್ಯ ಜನರಿಗೆ ಒಂದು ರೀತಿಯ ಭಯ, ಆತಂಕ. ಪೊಲೀಸರ ಬಳಿ ಹೋಗುವುದು ಎಂದರೆ ಏನೋ ದೊಡ್ಡ ಸಮಸ್ಯೆ ಎನ್ನುವ ಭಾವನೆ ಹಳ್ಳಿ ಜನರಲ್ಲಿ ಮನೆ ಮಾಡಿರುತ್ತದೆ. ಆದರೆ, ಈ ಕಲ್ಪನೆಯನ್ನು ಸುಳ್ಳು ಮಾಡಿ, ಪೊಲೀಸರೇ ಜನರ ಮನೆಬಾಗಿಲಿಗೆ ಬಂದು, ಅವರೊಂದಿಗೆ ಬೆರೆತು, ಅವರ ಸಮಸ್ಯೆಗಳನ್ನು ಆಲಿಸಿದ ಅಪರೂಪದ ಘಟನೆಗೆ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಆನಂದಪುರ ಸಾಕ್ಷಿಯಾಗಿದೆ. ಆ ಮೂಲಕ ಗ್ರಾಮ ವಾಸ್ತವ್ಯ ಮಾಡಿ, ಪಿಎಸ್ಐ ಪ್ರವೀಣ್ ಎಲ್ಲರಿಗೂ ಮಾದರಿಯಾಗುವಂತ ನಡೆಯನ್ನು ತೋರಿದ್ದಾರೆ.
ಹೌದು.. ಆನಂದಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಹಮ್ಮಿಕೊಂಡಿದ್ದ ಈ ‘ಗ್ರಾಮವಾಸ್ತವ್ಯ’ ಕಾರ್ಯಕ್ರಮವು ಕೇವಲ ಒಂದು ಸರ್ಕಾರಿ ಕಾರ್ಯಕ್ರಮವಾಗಿ ಉಳಿಯಲಿಲ್ಲ. ಪೊಲೀಸ್ ಮತ್ತು ಸಾರ್ವಜನಿಕರ ನಡುವಿನ ಅಂತರವನ್ನು ಕುಗ್ಗಿಸುವಲ್ಲಿ ಒಂದು ಮೈಲಿಗಲ್ಲಾಗಿ ಪರಿಣಮಿಸಿ, ಪೊಲೀಸ್ ವ್ಯವಸ್ಥೆಯನ್ನು ಜನಸ್ನೇಹಿಯಾಗಿ ಸಾಕ್ಷೀಕರಿಸಿತು.
ಗ್ರಾಮವಾಸ್ತವ್ಯದ ಹಿನ್ನೆಲೆ ಮತ್ತು ಉದ್ದೇಶ
ಗ್ರಾಮೀಣ ಭಾಗದಲ್ಲಿ ಇಂದಿಗೂ ಹಲವು ಕುಟುಂಬಗಳ ನಡುವೆ ಹಳೆಯ ವೈಷಮ್ಯಗಳಿರುತ್ತವೆ. ಗಡಿ ವಿವಾದ, ಸಣ್ಣಪುಟ್ಟ ಜಗಳಗಳು ಅಥವಾ ಗ್ರಾಮಗಳಲ್ಲಿ ನಡೆಯುವ ಅಕ್ರಮ ಜೂಜಾಟದಂತಹ ಚಟುವಟಿಕೆಗಳು ಜನರ ನೆಮ್ಮದಿ ಕೆಡಿಸಿರುತ್ತವೆ. ಇಂತಹ ಸಮಸ್ಯೆಗಳನ್ನು ಹೊತ್ತು ಜನರು ಪೊಲೀಸ್ ಠಾಣೆಗೆ ಬರಲು ಹಿಂಜರಿಯುತ್ತಾರೆ. ಈ ಹಿಂಜರಿಕೆಯನ್ನು ಹೋಗಲಾಡಿಸಿ, ಕಾನೂನಿನ ಮೇಲೆ ಜನರಿಗೆ ವಿಶ್ವಾಸ ಮೂಡಿಸುವುದು ಈ ಗ್ರಾಮವಾಸ್ತವ್ಯದ ಪ್ರಮುಖ ಆಶಯವಾಗಿತ್ತು.
ಶಿವಮೊಗ್ಗ ಎಸ್ಪಿ, ಸಾಗರ ಎಎಸ್ಪಿ ಡಾ.ಬೆನಕ ಪ್ರಸಾದ್ ಮಾರ್ಗದರ್ಶನದಲ್ಲಿ ಗ್ರಾಮ ವಾಸ್ತವ್ಯ ಮಾಡಿದ ಪಿಎಸ್ಐ ಪ್ರವೀಣ್
ಪಿಎಸ್ಐ ಪ್ರವೀಣ್ ಎಸ್.ಪಿ. ಅವರ ನೇತೃತ್ವದಲ್ಲಿ ನಡೆದ ಈ ವಿಶಿಷ್ಟ ಪ್ರಯತ್ನಕ್ಕೆ ಸಾಗರ ಉಪವಿಭಾಗದ ಎಎಸ್ಪಿ ಬೆನಕ ಪ್ರಸಾದ್ ಹಾಗೂ ಸಾಗರ ಗ್ರಾಮಾಂತರ ವೃತ್ತ ನಿರೀಕ್ಷಕ ಸಂತೋಷ್ ಶೆಟ್ಟಿ ಅವರು ಸಂಪೂರ್ಣ ಮಾರ್ಗದರ್ಶನ ನೀಡಿದ್ದರು.
ಕಾರೆಹೊಂಡದಲ್ಲಿ ರಾತ್ರಿ ಕಳೆದ ಪೊಲೀಸರು
ದಿನಾಂಕ 28-02-2026ರ ಶನಿವಾರದಂದು ಆನಂದಪುರ ವ್ಯಾಪ್ತಿಯ ಕಾರೆಹೊಂಡ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಧಿಕಾರಿಗಳ ತಂಡ ಬೀಡುಬಿಟ್ಟಿತ್ತು. ಅಧಿಕಾರಿಗಳು ಶಾಲೆಯ ಕೊಠಡಿಯಲ್ಲೇ ವಾಸ್ತವ್ಯ ಹೂಡುವ ಮೂಲಕ ಗ್ರಾಮಸ್ಥರಿಗೆ ತಾವೂ ನಿಮ್ಮವರೇ ಎನ್ನುವ ಭರವಸೆ ನೀಡಿದರು. ರಾತ್ರಿಯ ಹೊತ್ತು ಗ್ರಾಮಸ್ಥರ ಜೊತೆ ಕುಳಿತು ಸಮಾಲೋಚನೆ ನಡೆಸಿದ ಪೊಲೀಸರು, ಗ್ರಾಮದ ಸದ್ಯದ ಕಾನೂನು ಸುವ್ಯವಸ್ಥೆಯ ಪರಿಸ್ಥಿತಿಯನ್ನು ಪರಾಮರ್ಶಿಸಿದರು.
ಹಳ್ಳಿಯ ಹಲವು ವರ್ಷಗಳ ಹಳೆಯ ಕೇಸುಗಳು ಅಥವಾ ಕೋರ್ಟು ಮೆಟ್ಟಿಲೇರುವ ಮುನ್ನವೇ ಬಗೆಹರಿಸಬಹುದಾದ ಸಣ್ಣಪುಟ್ಟ ವ್ಯಾಜ್ಯಗಳ ಬಗ್ಗೆ ಚರ್ಚಿಸಲಾಯಿತು. “ಠಾಣೆಗೆ ಬಂದು ದೂರು ನೀಡಲು ಭಯಪಡಬೇಡಿ, ನಿಮ್ಮ ಗ್ರಾಮದ ಶಾಂತಿ ಕಾಪಾಡುವುದು ನಮ್ಮ ಮೊದಲ ಆದ್ಯತೆ” ಎಂದು ಆನಂದಪುರ ಠಾಣೆಯ ಪಿಎಸ್ಐ ಪ್ರವೀಣ್ ಅವರು ಗ್ರಾಮಸ್ಥರಲ್ಲಿ ಸ್ಥೈರ್ಯ ತುಂಬಿದರು.
‘ಮಿಷನ್ ಸುರಕ್ಷಾ’: ಮಕ್ಕಳ ರಕ್ಷಣೆಯೇ ನಮ್ಮ ಗುರಿ
ಮರುದಿನ ಅಂದರೆ ಮಾರ್ಚ್ 01, 2026ರ ಭಾನುವಾರದಂದು ಬೆಳಿಗ್ಗೆ 10 ಗಂಟೆಗೆ ಸರಿಯಾಗಿ ಶಾಲಾ ಆವರಣದಲ್ಲಿ ‘ಮಿಷನ್ ಸುರಕ್ಷಾ’ ಎಂಬ ಹೆಸರಿನಡಿ ಬೃಹತ್ ಜಾಗೃತಿ ಅಭಿಯಾನವನ್ನು ಹಮ್ಮಿಕೊಳ್ಳಲಾಗಿತ್ತು. ಮಕ್ಕಳ ವಿರುದ್ಧ ನಡೆಯುವ ದೌರ್ಜನ್ಯಗಳನ್ನು ತಡೆಗಟ್ಟುವುದು ಈ ಅಭಿಯಾನದ ಮೂಲ ಮಂತ್ರವಾಗಿತ್ತು. ಈ ಕಾರ್ಯಕ್ರಮದಲ್ಲಿ ಮಕ್ಕಳ ರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸುವಂತ ಕೆಲಸವನ್ನು ಪೊಲೀಸರು ಮಾಡಿದರು.
ಪೋಕ್ಸೋ ಕಾಯ್ದೆಯ ಬಗ್ಗೆ ಅರಿವು
ಇಂದಿನ ಕಾಲಘಟ್ಟದಲ್ಲಿ ಮಕ್ಕಳ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯಗಳು ಸಮಾಜಕ್ಕೆ ದೊಡ್ಡ ಕಳಂಕವಾಗಿವೆ. ಈ ಹಿನ್ನೆಲೆಯಲ್ಲಿ ಪೊಲೀಸರು ಪೋಕ್ಸೋ (POCSO) ಕಾಯ್ದೆಯ ಬಗ್ಗೆ ಗ್ರಾಮದ ಪೋಷಕರಿಗೆ ಸವಿಸ್ತಾರವಾಗಿ ಮಾಹಿತಿ ನೀಡಿದರು. ಮಕ್ಕಳನ್ನು ಅಪರಿಚಿತರಿಂದ ಹೇಗೆ ರಕ್ಷಿಸಬೇಕು? ಮಕ್ಕಳ ನಡವಳಿಕೆಯಲ್ಲಿ ಬದಲಾವಣೆ ಕಂಡರೆ ಪೋಷಕರು ಏನು ಮಾಡಬೇಕು? ಎನ್ನುವುದನ್ನು ಸರಳ ಭಾಷೆಯಲ್ಲಿ ವಿವರಿಸಲಾಯಿತು.
ಬಾಲ್ಯವಿವಾಹ ಎಂಬ ಸಾಮಾಜಿಕ ಪಿಡುಗು
ಗ್ರಾಮೀಣ ಭಾಗದಲ್ಲಿ ಇಂದಿಗೂ ಅಲ್ಲಲ್ಲಿ ಕಂಡುಬರುತ್ತಿರುವ ಬಾಲ್ಯವಿವಾಹದ ಪ್ರಕರಣಗಳ ಬಗ್ಗೆ ಪೊಲೀಸರು ಗಂಭೀರ ಎಚ್ಚರಿಕೆ ನೀಡಿದರು. “ಬಾಲ್ಯವಿವಾಹ ಎನ್ನುವುದು ಕೇವಲ ಕಾನೂನು ಬಾಹಿರ ಮಾತ್ರವಲ್ಲ, ಅದು ಒಂದು ಹೆಣ್ಣು ಮಗುವಿನ ಭವಿಷ್ಯವನ್ನೇ ಚಿವುಟಿ ಹಾಕುವ ಕ್ರೂರ ಪದ್ಧತಿ. ಇಂತಹ ಘಟನೆಗಳು ನಡೆದರೆ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿ” ಎಂದು ಆನಂದಪುರ ಠಾಣೆಯ ಪಿಎಸ್ಐ ಪ್ರವೀಣ್ ಮನವಿ ಮಾಡಿದರು.
ವ್ಯಸನ ಮುಕ್ತ ಸಮಾಜಕ್ಕೆ ಕರೆ
ಈ ಸಭೆಯನ್ನುದ್ದೇಶಿಸಿ ಮಾತನಾಡಿದ ಪಿಎಸ್ಐ ಪ್ರವೀಣ್ ಎಸ್.ಪಿ. ಅವರು ಪೋಷಕರಿಗೆ ಕೆಲವು ಖಡಕ್ ಕಿವಿಮಾತುಗಳನ್ನು ಹೇಳಿದರು. ಇತ್ತೀಚಿನ ದಿನಗಳಲ್ಲಿ ಯುವಪೀಳಿಗೆ ಮಾದಕ ವ್ಯಸನಕ್ಕೆ ಬಲಿಯಾಗುತ್ತಿರುವುದನ್ನು ಪ್ರಸ್ತಾಪಿಸಿದ ಅವರು, “ಮಕ್ಕಳ ಕೈಗೆ ಮದ್ಯಪಾನ ಅಥವಾ ತಂಬಾಕಿನಂತಹ ಹಾನಿಕಾರಕ ಪದಾರ್ಥಗಳು ಸಿಗದಂತೆ ನೋಡಿಕೊಳ್ಳುವುದು ಪೋಷಕರ ಮೊದಲ ಕರ್ತವ್ಯ. ಮನೆಯೇ ಮೊದಲ ಪಾಠಶಾಲೆ, ನಿಮ್ಮ ಶಿಸ್ತು ಮಕ್ಕಳ ಭವಿಷ್ಯವನ್ನು ರೂಪಿಸುತ್ತದೆ” ಎಂದರು.
ಇದೇ ವೇಳೆ ಶಿಕ್ಷಣದ ಮಹತ್ವವನ್ನು ಸಾರಿದ ಅವರು, “ಮಕ್ಕಳು ಮೊಬೈಲ್ ಫೋನ್ಗಳಿಗೆ ಅಂಟಿಕೊಳ್ಳುವ ಬದಲು ಮೈದಾನಕ್ಕೆ ಬಂದು ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಬೇಕು. ದೈಹಿಕ ಶ್ರಮ ಮತ್ತು ಶಿಸ್ತು ಇದ್ದರೆ ಮಾತ್ರ ಬದುಕು ಸುಂದರವಾಗಿರುತ್ತದೆ” ಎಂದು ವಿದ್ಯಾರ್ಥಿಗಳಿಗೆ ಸ್ಫೂರ್ತಿ ನೀಡಿದರು.
ಸಾರ್ವಜನಿಕರ ಸ್ಪಂದನೆ ಹೇಗಿತ್ತು?
ಈ ಕಾರ್ಯಕ್ರಮಕ್ಕೆ ಕಾರೆಹೊಂಡ ಹಾಗೂ ಸುತ್ತಮುತ್ತಲ ಗ್ರಾಮಗಳಿಂದ ನೂರಾರು ಜನರು ಆಗಮಿಸಿದ್ದರು. “ಪೊಲೀಸರು ನಮ್ಮ ಶಾಲೆಗೆ ಬಂದು ರಾತ್ರಿ ಉಳಿದು ನಮ್ಮ ಕಷ್ಟ ಕೇಳುತ್ತಾರೆ ಎಂದು ನಾವು ಕನಸಿನಲ್ಲೂ ಅಂದುಕೊಂಡಿರಲಿಲ್ಲ. ಇದು ನಮಗೆ ಇಲಾಖೆಯ ಮೇಲೆ ಇನ್ನಷ್ಟು ಗೌರವ ತಂದಿದೆ” ಎಂದು ಗ್ರಾಮದ ಹಿರಿಯರೊಬ್ಬರು ಸಂತಸ ಹಂಚಿಕೊಂಡರು.
ಗ್ರಾಮಸ್ಥರು ತಮ್ಮ ಗ್ರಾಮದಲ್ಲಿ ನಡೆಯುವ ಜೂಜಾಟ ಹಾಗೂ ಅಕ್ರಮ ಮದ್ಯ ಮಾರಾಟದಂತಹ ವಿಷಯಗಳನ್ನು ಪೊಲೀಸರ ಗಮನಕ್ಕೆ ತಂದರು. ಇದಕ್ಕೆ ತಕ್ಷಣವೇ ಸ್ಪಂದಿಸಿದ ಆನಂದಪುರ ಠಾಣೆಯ ಪಿಎಸ್ಐ ಪ್ರವೀಣ್.ಎಸ್ ಪಿ ಅವರು ಅಕ್ರಮ ಚಟುವಟಿಕೆಗಳಿಗೆ ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ ಎಂದು ಭರವಸೆ ನೀಡಿದರು.
ಜನಸ್ನೇಹಿ ಪೊಲೀಸ್ ವ್ಯವಸ್ಥೆಯ ಕನಸು
ಆನಂದಪುರ ಪೊಲೀಸರ ಈ ಗ್ರಾಮವಾಸ್ತವ್ಯವು ಕೇವಲ 24 ಗಂಟೆಗಳ ಕಾರ್ಯಕ್ರಮವಾಗಿರಲಿಲ್ಲ. ಅದು ಸಮಾಜದಲ್ಲಿ ಶಾಂತಿ ನೆಲೆಸಲು ಮತ್ತು ಪೊಲೀಸರ ಮೇಲೆ ಜನಸಾಮಾನ್ಯರು ಹೊಂದಿರುವ ದೃಷ್ಟಿಕೋನವನ್ನು ಬದಲಿಸಲು ಹಾಕಿದ ಒಂದು ಭದ್ರ ಬುನಾದಿಯಾಗಿದೆ. ರಾಜ್ಯದ ಇತರೆ ಠಾಣೆಗಳಿಗೂ ಆನಂದಪುರ ಪೊಲೀಸರ ಈ ಕಾರ್ಯ ವೈಖರಿ ಮಾದರಿಯಾಗಿದೆ.
ಒಟ್ಟಾರೆಯಾಗಿ, ಖಾಕಿ ವೇಷದ ಹಿಂದೆ ಇರುವ ಮಾನವೀಯ ಮುಖವನ್ನು ಕಾರೆಹೊಂಡ ಗ್ರಾಮಸ್ಥರು ಕಂಡುಕೊಂಡರು. ಈ ಮಿಷನ್ ಸುರಕ್ಷಾ ಮತ್ತು ಗ್ರಾಮವಾಸ್ತವ್ಯದ ಪ್ರಭಾವ ಮುಂದಿನ ದಿನಗಳಲ್ಲಿ ಗ್ರಾಮದ ಅಪರಾಧ ಮುಕ್ತ ವಾತಾವರಣಕ್ಕೆ ಕಾರಣವಾಗಲಿದೆ ಎಂಬ ಆಶಯ ಎಲ್ಲರದ್ದಾಗಿದೆ. ಆ ನಿಟ್ಟಿನಲ್ಲಿ ಆನಂದಪುರ ಠಾಣೆಯ ಪಿಎಸ್ಐ ಪ್ರವೀಣ್ ಗ್ರಾಮ ವಾಸ್ತವ್ಯ ಗಮನ ಸೆಳೆದು, ರಾಜ್ಯದ ಇತರೆ ಠಾಣೆಯಲ್ಲೂ ಅಣಿಯಾಗಲಿ ಎಂಬ ಆಶಯ ಕೂಡ ನಮ್ಮದಾಗಿದೆ.
ಈ ಪೊಲೀಸರ ಗ್ರಾಮ ವಾಸ್ತವ್ಯ ಕಾರ್ಯಕ್ರಮದ ವೇಳೆ ಉಳ್ಳೂರು ಗ್ರಾಮ ಪಂಚಾಯ್ತಿ ಮಾಜಿ ಸದಸ್ಯರಾದಂತ ತಿರುಮಲೇಶ್, ಹರೀಶ್, ಹುಚ್ಚರಾಯಪ್ಪ ಹಾಗೂ ಆನಂದಪುರ ಪೊಲೀಸ್ ಠಾಣೆಯ ಸಿಬ್ಬಂದಿಗಳಾದಂತ ಎಎಸ್ಐ ವೆಂಕಟೇಶ್, ನಿಂಗರಾಜ್, ಪ್ರಶಾಂತ್, ಶಶಿಕುಮಾರ್, ಉಮೇಶ್, ನೂತನ್, ಮಾಲತೇಶ್, ನಿರಂಜನ್, ಹರ್ಷ, ಸತೀಶ್ ಉಪಸ್ಥಿತರಿದ್ದರು.
ವರದಿ; ವಸಂತ ಬಿ ಈಶ್ವರಗೆರೆ, ಸಂಪಾದಕರು….








