ಬೆಂಗಳೂರು: ಕೃಷಿ ಜಮೀನನ್ನು ಕೈಗಾರಿಕೆ ಅಥವಾ ಶಿಕ್ಷಣ ಸಂಸ್ಥೆಗಳ ಸ್ಥಾಪನೆಗಾಗಿ ಖರೀದಿಸಿ, ನಂತರ ನಿಗದಿತ ಉದ್ದೇಶಕ್ಕೆ ಬಳಸಲಾಗದೆ ಸಂಕಷ್ಟಕ್ಕೆ ಸಿಲುಕಿದ್ದ ಮಾಲೀಕರಿಗೆ ರಾಜ್ಯ ಸರ್ಕಾರ ಬಿಗ್ ರಿಲೀಫ್ ನೀಡಿದೆ. ಕರ್ನಾಟಕ ಭೂ ಕಂದಾಯ ಕಾಯ್ದೆಯಡಿ ಮಹತ್ವದ ತಿದ್ದುಪಡಿ ತರಲು ಕಂದಾಯ ಇಲಾಖೆ ಮುಂದಾಗಿದ್ದು, ಭೂಮಿಯ ಬಳಕೆಯ ಉದ್ದೇಶವನ್ನು ಬದಲಿಸಿಕೊಳ್ಳಲು ಈಗ ಹೊಸದಾಗಿ ಅವಕಾಶ ಕಲ್ಪಿಸಲಾಗುತ್ತಿದೆ.
ಏನಿದು ಹೊಸ ಬದಲಾವಣೆ?
2020ಕ್ಕೂ ಮೊದಲು ಜಾರಿಯಲ್ಲಿದ್ದ ನಿಯಮಗಳ ಪ್ರಕಾರ, ಉದ್ಯಮಿಗಳು ಅಥವಾ ಶಿಕ್ಷಣ ಸಂಸ್ಥೆಗಳು ಕಂದಾಯ ಕಾಯ್ದೆ ಸೆಕ್ಷನ್ 109ರ ಅಡಿ ಅನುಮತಿ ಪಡೆದು ಕೃಷಿ ಭೂಮಿಯನ್ನು ಖರೀದಿಸಿದ್ದರು. ಆದರೆ ಹಲವು ಕಾರಣಗಳಿಂದಾಗಿ ಆ ಭೂಮಿಯಲ್ಲಿ ಉದ್ದೇಶಿತ ಯೋಜನೆ ಕೈಗೊಳ್ಳಲು ಸಾಧ್ಯವಾಗಿರಲಿಲ್ಲ. ಅಂತಹ ಭೂ ಮಾಲೀಕರಿಗೆ ಈಗ ಸರ್ಕಾರ ವರ ನೀಡಿದೆ.
ಉದ್ದೇಶ ಬದಲಾವಣೆಗೆ ಅವಕಾಶ: ಈ ಹಿಂದೆ ಯಾವುದೋ ಒಂದು ಉದ್ದೇಶಕ್ಕೆ (ಉದಾಹರಣೆಗೆ: ಸಣ್ಣ ಕೈಗಾರಿಕೆ) ಭೂಮಿ ಪಡೆದು, ಈಗ ಅಲ್ಲಿ ಬೇರೆ ಉದ್ದೇಶದ (ಉದಾಹರಣೆಗೆ: ವಸತಿ ಅಥವಾ ಶಿಕ್ಷಣ ಸಂಸ್ಥೆ) ಯೋಜನೆ ಕೈಗೊಳ್ಳಲು ಬಯಸಿದರೆ ಅದಕ್ಕೆ ಕಾನೂನಾತ್ಮಕವಾಗಿ ಅನುಮತಿ ನೀಡಲಾಗುವುದು.
ಸ್ಥಳೀಯ ಸವಾಲುಗಳಿಗೆ ಪರಿಹಾರ: ಕೈಗಾರಿಕೆಗಾಗಿ ಭೂಮಿ ಪಡೆದಿದ್ದ ಜಾಗದ ಸುತ್ತಮುತ್ತ ಈಗ ವಸತಿ ಪ್ರದೇಶಗಳು ನಿರ್ಮಾಣವಾಗಿದ್ದರೆ, ಅಂತಹ ಕಡೆಗಳಲ್ಲಿ ಕೈಗಾರಿಕೆ ಆರಂಭಿಸಲು ಸಾಧ್ಯವಾಗುತ್ತಿರಲಿಲ್ಲ. ಈಗ ಈ ಹೊಸ ತಿದ್ದುಪಡಿಯಿಂದ ಅಂತಹ ಭೂಮಿಯನ್ನು ಪರ್ಯಾಯ ಉದ್ದೇಶಕ್ಕೆ ಬಳಸಿಕೊಳ್ಳಬಹುದಾಗಿದೆ.
ಸರ್ಕಾರದ ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯ ಸಮಿತಿ
ಈ ಪ್ರಕ್ರಿಯೆಯನ್ನು ಸುಗಮಗೊಳಿಸಲು ಮತ್ತು ಪಾರದರ್ಶಕತೆ ತರಲು ಉನ್ನತ ಮಟ್ಟದ ಸಮಿತಿಯನ್ನು ರಚಿಸಲಾಗಿದೆ:
ಅಧ್ಯಕ್ಷತೆ: ಸರ್ಕಾರದ ಮುಖ್ಯ ಕಾರ್ಯದರ್ಶಿಗಳು (CS) ಈ ಸಮಿತಿಯ ಅಧ್ಯಕ್ಷರಾಗಿರುತ್ತಾರೆ.
ಆಟೋಮ್ಯಾಟಿಕ್ ಭೂ ಪರಿವರ್ತನೆ: ಬೆಂಗಳೂರು ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಈ ಸಮಿತಿಯು ನೀಡುವ ಅನುಮತಿಯು ‘ಆಟೋಮ್ಯಾಟಿಕ್ ಭೂ ಪರಿವರ್ತನೆ’ (Deemed Conversion) ಎಂದು ಪರಿಗಣಿತವಾಗಲಿದೆ.
ಸದಸ್ಯರು: ಕಂದಾಯ, ಕೈಗಾರಿಕೆ ಮತ್ತು ವಾಣಿಜ್ಯ, ಶಿಕ್ಷಣ, ತೋಟಗಾರಿಕೆ ಹಾಗೂ ನಗರಾಭಿವೃದ್ಧಿ ಇಲಾಖೆಗಳ ಪ್ರಧಾನ ಕಾರ್ಯದರ್ಶಿಗಳು ಮತ್ತು ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು ಈ ಸಮಿತಿಯಲ್ಲಿ ಇರಲಿದ್ದಾರೆ.
ಉದ್ಯಮಿಗಳಿಗೆ ವರದಾನ
ಈ ಹಿಂದೆ ಭೂಮಿಯನ್ನು ಒಂದು ಉದ್ದೇಶದಿಂದ ಮತ್ತೊಂದು ಉದ್ದೇಶಕ್ಕೆ ಬದಲಾಯಿಸಲು ಕಾನೂನಿನಲ್ಲಿ ಅವಕಾಶವಿರಲಿಲ್ಲ. ಆದರೆ ಪ್ರಸ್ತುತ ಪರಿಸ್ಥಿತಿ ಮತ್ತು ಕೈಗಾರಿಕಾ ಬೆಳವಣಿಗೆಯನ್ನು ಗಮನದಲ್ಲಿಟ್ಟುಕೊಂಡು ಕಂದಾಯ ಇಲಾಖೆಯ ಅಧಿಕಾರಿಗಳು ಈ ಹೊಸ ಪದ್ಧತಿಯನ್ನು ಜಾರಿಗೆ ತಂದಿದ್ದಾರೆ. ಇದರಿಂದ ಸಾವಿರಾರು ಎಕರೆ ಪಾಳು ಬಿದ್ದಿದ್ದ ಭೂಮಿ ಈಗ ಅಭಿವೃದ್ಧಿ ಕಾರ್ಯಗಳಿಗೆ ಬಳಕೆಯಾಗುವ ನಿರೀಕ್ಷೆಯಿದೆ.








