ಬೆಂಗಳೂರು : ಮಹಾಯೋಜನೆ ವ್ಯಾಪ್ತಿಯಲ್ಲಿನ ಜಮೀನುಗಳಿಗೆ ಕರ್ನಾಟಕ ಭೂ ಕಂದಾಯ (ತಿದ್ದುಪಡಿ) ನಿಯಮಗಳು, 2025 ರನ್ವಯ ವಿನ್ಯಾಸ ಅನುಮೋದನೆ ಪ್ರಸ್ತಾವನೆಗಳಿಗೆ ಯೋಜನಾ ಪ್ರಾಧಿಕಾರಗಳಲ್ಲಿ ಅನುಸರಿಸಬೇಕಾದ ಕ್ರಮಗಳ ಕುರಿತು ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ.
ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಉಲ್ಲೇಖ(1) ರಲ್ಲಿ ಕಂದಾಯ ಇಲಾಖೆಯಿಂದ ಕರ್ನಾಟಕ ಭೂ ಕಂದಾಯ ಕಾಯ್ದೆ 1964 ರ ಕಲಂ 95 ಕ್ಕೆ ತಿದ್ದುಪಡಿ ತರಲಾಗಿದ್ದು, ಅದರನ್ವಯ ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ, 1961ರಡಿ ಯಲ್ಲಿ, ಸರ್ಕಾರದಿಂದ ಅನುಮೋದನೆಗೊಂಡಿರುವ ಮಹಾಯೋಜನೆಗಳ ವ್ಯಾಪ್ತಿಗೆ ಒಳಪಡುವ ಜಮೀನುಗಳಿಗೆ ಸಂಬಂಧಿಸಿದಂತೆ ಮಹಾಯೋಜನೆಯಲ್ಲಿ ನಿರ್ದಿಷ್ಟಪಡಿಸಿರುವ ಭೂ ಉಪಯೋಗಗಳಿಗೆ ಅನುಗುಣವಾಗಿ, ಕೃಷಿ ಉದ್ದೇಶದಿಂದ ಕೃಷಿಯೇತರ ಉದ್ದೇಶಗಳಿಗೆ ಭೂ ಪರಿವರ್ತನೆಗೆ ಜಿಲ್ಲಾಧಿಕಾರಿಗಳ ಅನುಮತಿ ಅಗತ್ಯವಿರುವುದಿಲ್ಲ. ಆದರೆ ಸದರಿ ಕಾಯ್ದೆಯ, ಕಲಂ 95(7) ರಲ್ಲಿ ನಿಗದಿಪಡಿಸಿದ ಶುಲ್ಕವನ್ನು, ಸಂಬಂಧಪಟ್ಟ ಯೋಜನಾ ಪ್ರಾಧಿಕಾರಗಳಿಂದ ಅಗತ್ಯ ಅನುಮತಿಗಳನ್ನು ಪಡೆಯುವ ಸಂಧರ್ಭದಲ್ಲಿ, ಸ್ವಯಂಘೋಷಣೆಯೊಂದಿಗೆ ಸಂಬಂಧಿತ ಯೋಜನಾ ಪ್ರಾಧಿಕಾರಕ್ಕೆ ಪಾವತಿಸತಕ್ಕದ್ದು ಎಂಬ ಅವಕಾಶವನ್ನು ಕಲ್ಪಿಸಲಾಗಿದೆ.
ಮೇಲ್ಕಂಡ ತಿದ್ದುಪಡಿ ಕಾಯ್ದೆಗೆ ಅನುಗುಣವಾಗಿ ಉಲ್ಲೇಖ (2) ರನ್ವಯ ಕರ್ನಾಟಕ ಭೂಕಂದಾಯ (ತಿದ್ದುಪಡಿ) ನಿಯಮಗಳು, 2025 ಅನ್ನು ರಚಿಸಿ ಸರ್ಕಾರದಿಂದ ಅಧಿಸೂಚನೆ ಹೊರಡಿಸಲಾಗಿರುತ್ತದೆ.
ಹಾಗಾಗಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ/ಗ್ರೇಟರ್ ಬೆಂಗಳೂರು ಪ್ರಾಧಿಕಾರ /ಮೈಸೂರು ಅಭಿವೃದ್ಧಿ ಪ್ರಾಧಿಕಾರ /ನಗರಾಭಿವೃದ್ಧಿ ಪ್ರಾಧಿಕಾರಗಳು/ಯೋಜನಾ ಪ್ರಾಧಿಕಾರಗಳು/ಪುರಸಭೆ ಯೋಜನಾ ಪ್ರಾಧಿಕಾರಗಳು ವಿನ್ಯಾಸ ಅನುಮೋದನೆಗೆ ಕೈಗೊಳ್ಳಬೇಕಾಗಿರುವ ಕ್ರಮಗಳ ಕುರಿತು ಈ ಕೆಳಕಂಡಂತೆ ನಿರ್ದೇಶನ ನೀಡಲಾಗಿದೆ.
1. ಅನುಮೋದಿತ ಮಹಾಯೋಜನೆ ವ್ಯಾಪ್ತಿಗೆ ಒಳಪಡುವ ಜಮೀನುಗಳಿಗೆ ಕೆ.ಟಿ.ಸಿ.ಪಿ. ಕಾಯ್ದೆ, 1961 ರ ಕಲಂ 17 ರಡಿಯಲ್ಲಿ ಅರ್ಜಿದಾರರು ವಿನ್ಯಾಸ ನಕ್ಷೆ ಅನುಮೋದನೆಗೆ ಕೋರುವ ಹಂತದಲ್ಲಿಯೇ ವಿನ್ಯಾಸ ನಕ್ಷೆ ಅನುಮೋದನೆಗೆ ಸಂಬಂಧಿಸಿದ ಅಗತ್ಯ ದಾಖಲೆಗಳೊಂದಿಗೆ ಹೆಚ್ಚುವರಿಯಾಗಿ ಕರ್ನಾಟಕ ಭೂ ಕಂದಾಯ (ತಿದ್ದುಪಡಿ) ನಿಯಮ 106(C) ರಡಿಯಲ್ಲಿ ಸೂಚಿಸಿರುವಂತೆ Form-21B ರಲ್ಲಿ ನಿಗಧಿಪಡಿಸಿದ ಪ್ರಮಾಣ ಪತ್ರ (Affidavit) ವನ್ನು ಸಹ ಕಡ್ಡಾಯವಾಗಿ ಸಂಬಂಧಪಟ್ಟ ಪ್ರಾಧಿಕಾರಗಳು ಅರ್ಜಿದಾರರಿಂದ ಪಡೆಯತಕ್ಕದ್ದು.
2. ವಿನ್ಯಾಸ ನಕ್ಷೆ ಅನುಮೋದನೆಗಾಗಿ ಸಾರ್ವಜನಿಕರಿಂದ ಸಲ್ಲಿಕೆಯಾಗುವ ಪ್ರಸ್ತಾವನೆಗಳನ್ನು ಸಂಬಂಧಪಟ್ಟ ಪ್ರಾಧಿಕಾರಗಳು ನಿಯಮಾನುಸಾರ ಪರಿಶೀಲಿಸಿ, ಮಹಾಯೋಜನೆಯಲ್ಲಿ ನಿಗಧಿಪಡಿಸಲಾಗಿರುವ ಭೂ ಉಪಯೋಗಗಳಿಗೆ ಅನುಗುಣವಾಗಿದ್ದಲ್ಲಿ ಅದರನ್ವಯ ಪ್ರಸ್ತಾವನೆಯನ್ನು ಪ್ರಾಧಿಕಾರದ ಸಾಮಾನ್ಯ ಸಭೆಯಲ್ಲಿ ಚರ್ಚೆಗೆ ಮಂಡಿಸಿ, ಅನುಮೋದಿಸಲು ತೀರ್ಮಾನ ಕೈಗೊಳ್ಳುವುದು.
3. ಪ್ರಾಧಿಕಾರದ ಸಾಮಾನ್ಯ ಸಭೆಯ ತೀರ್ಮಾನದ ನಂತರ, ಕೆ.ಟಿ.ಸಿ.ಪಿ. ಕಾಯ್ದೆ, 1961 ರ ಕಲಂ 18(1)ರಡಿ ಉತ್ತಮತೆ ಶುಲ್ಕ, ಕಲಂ 18(1A) ರಡಿ ಕೆರೆ ಪುನರುಜ್ಜಿವನ ಶುಲ್ಕ ಮತ್ತು ಕಲಂ 18A(1) ರನ್ವಯ ಸಂಗ್ರಹಿಸಲಾಗುವ ಕರ ಹಾಗೂ ಉಪಕರಗಳನ್ನು ಪಾವತಿಸಲು ಅರ್ಜಿದಾರರಿಗೆ ನೀಡುವ ಶುಲ್ಕ ಪಾವತಿ ನೋಟೀಸ್ನಲ್ಲಿ ಹೆಚ್ಚುವರಿಯಾಗಿ ಪ್ರಸ್ತಾವನೆಗೆ ಸಂಬಂಧಿಸಿದಂತೆ ಕಂದಾಯ ಕಾಯ್ದೆ ಕಲಂ 95(7) ರನ್ವಯ ಕಂದಾಯ ಇಲಾಖೆಗೆ ಪಾವತಿಸಬೇಕಾಗಿರುವ ನಿಗಧಿತ ಶುಲ್ಕವನ್ನು ಸಹ ನಮೂದಿಸತಕ್ಕದ್ದು.
4. ಕಂದಾಯ ಕಾಯ್ದೆ ಕಲಂ 95(7)ರನ್ವಯ ಕಂದಾಯ ಇಲಾಖೆಗೆ ಪಾವತಿಸಬೇಕಾಗಿರುವ ನಿಗಧಿತ ಶುಲ್ಕದ ಮೊತ್ತವನ್ನು ಸಂಬಂಧಪಟ್ಟ ಪ್ರಾಧಿಕಾರಗಳು ಪ್ರತ್ಯೇಕ ಖಾತೆಯಲ್ಲಿ ಸಂಗ್ರಹಿಸಿ ಕಂದಾಯ ಇಲಾಖೆಗೆ ಹಸ್ತಾಂತರಿಸತಕ್ಕದ್ದು.
5. ಅರ್ಜಿದಾರರು ಸಲ್ಲಿಸುವ ಪ್ರಮಾಣ ಪತ್ರ ಮತ್ತು ಶುಲ್ಕ ಪಾವತಿಯ ಮಾಹಿತಿಗಳ ಜೊತೆಗೆ ಪ್ರಾಧಿಕಾರ ಕೈಗೊಂಡ ಕ್ರಮದ ಮಾಹಿತಿಯನ್ನು ಕಂದಾಯ ಇಲಾಖೆಗೆ ತಿಳಿಸತಕ್ಕದ್ದು.
6. ಮಹಾಯೋಜನೆ ವ್ಯಾಪ್ತಿಗೆ ಒಳಪಡುವ ಜಮೀನುಗಳಿಗೆ ಕೆ.ಟಿ.ಸಿ.ಪಿ. ಕಾಯ್ದೆ, 1961 ರ ಕಲಂ 17 ರಡಿ ವಿನ್ಯಾಸ ನಕ್ಷೆ ಅನುಮೋದನೆಗೆ ಅರ್ಜಿ ಸಲ್ಲಿಸದೇ, ಕೇವಲ ಭೂ ಪರಿವರ್ತನೆಗೆ ಸೀಮಿತವಾಗಿ ಅರ್ಜಿ ಸಲ್ಲಿಸುವ ಯಾವುದೇ ಪ್ರಸ್ತಾವನೆಗಳನ್ನು ಸಂಬಂಧಪಟ್ಟ ಪ್ರಾಧಿಕಾರಗಳು ಸ್ವೀಕರಿಸತಕ್ಕದ್ದಲ್ಲ.
7. ವಿನ್ಯಾಸ ನಕ್ಷೆ ಅನುಮೋದನೆ ಆದೇಶದಲ್ಲಿ ಈ ಕೆಳಕಂಡ ಷರತ್ತನ್ನು ವಿಧಿಸತಕ್ಕದ್ದು.
“ಜಮೀನಿನ ಮಾಲೀಕರು ಸಲ್ಲಿಸುವ ಕಂದಾಯ ದಾಖಲೆಗಳು/ಪ್ರಮಾಣ ಪತ್ರದ ಆಧಾರದ ಮೇಲೆ ವಿನ್ಯಾಸವನ್ನು ಅನುಮೋದಿಸಿದ್ದು, ಕಂದಾಯ ದಾಖಲೆಗಳು/ ಸಲ್ಲಿಸಿರುವ ಪ್ರಮಾಣ ಪತ್ರದ ವಿವರಗಳು ಮತ್ತು ನ್ಯಾಯಾಲಯದಲ್ಲಿ ಮೊಕದ್ದಮೆಗಳಿದ್ದಲ್ಲಿ ಜಮೀನಿನ ಮಾಲೀಕರೆ ಹೊಣೆಗಾರರಾಗಿದ್ದು, ಇದಕ್ಕೆ ಪ್ರಾಧಿಕಾರವು ಹೊಣೆಗಾರರಾಗಿರುವುದಿಲ್ಲ. ಒಂದು ವೇಳೆ ತಪ್ಪು ಮಾಹಿತಿ / ದಾಖಲೆಗಳನ್ನು ನೀಡಿರುವುದು ಕಂಡುಬಂದಲ್ಲಿ ಪ್ರಾಧಿಕಾರದಿಂದ ನೀಡಲಾದ ಅನುಮೋದನೆಯನ್ನು ಯಾವುದೇ ಮುನ್ಸೂಚನೆ ನೀಡದೇ ರದ್ದುಪಡಿಸಲಾಗುತ್ತದೆ.









