ಬೆಂಗಳೂರು : ಪ್ರತಿ ವರ್ಷ ಫೆಬ್ರವರಿ 10 ರಂದು ರಾಷ್ಟ್ರೀಯ ಜಂತುಹುಳು ನಿವಾರಣಾ ದಿನವನ್ನು ಆಚರಿಸಲಾಗುತ್ತದೆ. 1 ರಿಂದ 19 ವರ್ಷದೊಳಗಿನ ಮಕ್ಕಳಿಗೆ ಅಂಗನವಾಡಿ ಮತ್ತು ಶಾಲೆಗಳಲ್ಲಿ ಉಚಿತ ಆಲ್ಬೆಂಡೋಜೋಲ್ ಮಾತ್ರೆಯನ್ನು ನೀಡಿ, ಜಂತುಹುಳುಗಳಿಂದ ಉಂಟಾಗುವ ರಕ್ತ ಹೀನತೆ ಮತ್ತು ಅಪೌಷ್ಠಿಕತೆಯನ್ನು ತಡೆಗಟ್ಟುವುದು ಇದರ ಮುಖ್ಯ ಉದ್ದೇಶವಾಗಿದೆ. ಮಕ್ಕಳಲ್ಲಿ ಜಂತುಹುಳು ಬಾದೆಯನ್ನು ತಡೆಗಟ್ಟಿ, ಆರೋಗ್ಯಕರ ಬೆಳವಣಿಗೆಯನ್ನು ಉತ್ತೇಜಿಸುವುದು. ಮಾತ್ರೆಗಳನ್ನು ಕಡ್ಡಾಯವಾಗಿ ಬಾಯಿಯಲ್ಲಿ ಹಾಕಿ, ಚೆನ್ನಾಗಿ ಜಗಿದು ತಿಂದ ನಂತರ ಶುದ್ದ ಕುಡಿಯುವ ನೀರನ್ನು ಕುಡಿಯಬೇಕು. ಮಾತ್ರೆಗಳನ್ನು ಅಂಗನವಾಡಿ ಕಾರ್ಯಕರ್ತೆಯರು ಮತ್ತು ಶಿಕ್ಷಕರ ಸಮ್ಮುಖದಲ್ಲಿಯೇ ಸೇವಿಸಬೇಕು. ಜಂತುಹುಳುಗಳಿಂದ ಮಕ್ಕಳಲ್ಲಿ ಪೌಷ್ಠಿಕಾಂಶದ ಕೊರತೆ, ರಕ್ತಹೀನತೆ, ದೈಹಿಕ ಮತ್ತು ಮಾನಸಿಕ ಬೆಳವಣಿಗೆ ಕುಂಠಿತವಾಗುವುದು.
1 ರಿಂದ 2 ವರ್ಷದ ಮಕ್ಕಳಿಗೆ ಅರ್ಧ ಮಾತ್ರೆ (200 ಎಂ.ಜಿ) ಪುಡಿ ಮಾಡಿ ನೀರಿನೊಂದಿಗೆ ಕುಡಿಯುವುದು. 2 ರಿಂದ 19 ವರ್ಷದ ಮಕ್ಕಳಿಗೆ ಒಂದು ಪೂರ್ತಿ ಮಾತ್ರೆ (400 ಎಂ.ಜಿ)ಚೀಪಿ ತಿನ್ನಿಸಬೇಕು. ನಿಗದಿತ ದಿನದಂದು ಮಾತ್ರೆ ಪಡೆಯದ ಮಕ್ಕಳಿಗೆ, ನಂತರದ ದಿನಗಳಲ್ಲಿ (MOP-Mop-Up-Day) ಆಶಾ ಕಾರ್ಯಕರ್ತೆಯರು ಮನೆ ಮನೆಗೆ ಭೇಟಿ ನೀಡಿ ಮಾತ್ರೆಗಳನ್ನು ನೀಡುತ್ತಾರೆ.
ಕರುಳಿನಲ್ಲಿರುವ ಕೆಲವು ಜಂತುಗಳು ಮನುಷ್ಯನ ಆಹಾರ, ರಕ್ತ ಹಂಚಿಕೊಳ್ಳುವುದರಿಂದ ಆ ವ್ಯಕ್ತಿಯಲ್ಲಿ ಅಪೌಷ್ಠಿಕತೆ, ರಕ್ತ ಹೀನತೆ, ನಿದ್ರಾಣ ಉಂಟಾಗಬಹುದು ಇದು ದೊಡ್ಡವರಿಗೆ ಮಾತ್ರವಲ್ಲ ಬದಲಾಗಿ ಮಕ್ಕಳಲ್ಲಿ ರಕ್ತ ಹೀನತೆ ಹಾಗೂ ಅವರ ಭೌತಿಕ ಬೆಳವಣಿಗೆಯನ್ನು ಕುಂಠಿತಗೊಳಿಸಬಹುದು. ಜೊತೆಗೆ ಅವರ ಸ್ಮರಣ ಶಕ್ತಿ ಕಡಿಮೆಯಾಗಬಹುದು ಹಾಗಾಗಿ ಈ ಆರೋಗ್ಯ ಸಮಸ್ಯೆಯನ್ನು ನಿರ್ಲಕ್ಷಿಸುವಂತಿಲ್ಲ.
ಬಯಲಿನಲ್ಲಿ ಮಲವಿಸರ್ಜನೆ ಮಾಡಬೇಡಿ, ಮನೆಯ ಹೊರಗೆ ಪಾದ ರಕ್ಷೆಯನ್ನು ಧರಿಸದೇ ಹೋಗಬೇಡಿ. ಇದರ ಜೊತೆಗೆ ಒಂದು ಸಲ ಆಲ್ಬೆಂಡೋಜೋಲ್ ಸೇವೆನೆಯ ಅನಂತರ ಕರುಳಿನಲ್ಲಿರುವ ಹುಳುಗಳು ನಾಶಗೊಂಡರೂ ಪುನಃ 8 ರಿಂದ 10 ವಾರಗಳಲ್ಲಿ ಹೊಸ ಹುಳುಗಳು ಕರುಳಿನಲ್ಲಿ ಕಾಣಿಸಿಕೊಳ್ಳಬಹುದು ಹಾಗಾಗಿ ಪ್ರತಿ 6 ತಿಂಗಳಿಗೊಮ್ಮೆ ಆಲ್ಬೆಂಡೋಜೋಲ್ ಮಾತ್ರೆಗಳನ್ನು ಸೇವಿಸುವುದು ಉತ್ತಮ.
ನಮ್ಮ ಹೊಟ್ಟೆಯಲ್ಲಿ ಕಂಡುಬರುವ ಹುಳುಗಳನ್ನು ಅವುಗಳ ಆಕಾರ, ಆಕೃತಿ ಮತ್ತು ಪ್ರಕೃತಿಗಳಿಗುಣವಾಗಿ ವಿಭಾಗಿಸಲಾಗುತ್ತದೆ. ಮತ್ತು ವಿಧವಿಧದ ಹೆಸರುಗಳಿಂದ ಕರೆಯಲಾಗುತ್ತದೆ. ದುಂಡು ಹುಳ ಕೊಕ್ಕೆ ಹುಳ, ಚಾವಟಿ ಹುಳ, ಗಿನಿಯ ಹುಳ, ಲಾಡಿ ಹುಳ ಎಂಬುದಾಗಿ 10 ಹಲವು ಬಗೆಯ ಹೊಟ್ಟೆ ಹುಳುಗಳು ನಮ್ಮ ದೇಹದಲ್ಲಿ ಕಾಣಿಸುತ್ತವೆ. ದುಂಡು ಹುಳುಗಳು ಹೆಚ್ಚಾಗಿ ಹದಿಹರೆಯದ ಶಾಲೆಯ ಮಕ್ಕಳಲ್ಲಿ ಕಂಡು ಬರುತ್ತದೆ. ಗುಂಪು ಗುಂಪಾಗಿ ಹಾಸ್ಟಲ್ ಗಳಲ್ಲಿ, ಶಿಬಿರಗಳಲ್ಲಿ ಜೀವಿಸುವ ವಿದ್ಯಾರ್ಥಿಗಳಲ್ಲಿ ಹೆಚ್ಚಾಗಿ ಕಾಣಿಸುತ್ತವೆ. ಉಗುರುಗಳನ್ನು ಉದ್ದನೆ ಬೆಳೆಯಲು ಬಿಡದೆ ಸ್ವಚ್ಚವಾಗಿಡುವುದು, ದೇಹದ ಸ್ವಚ್ಚತೆಯನ್ನು ಕಾಯ್ದುಕೊಳ್ಳುವುದು. ಆಹಾರ ಸೇವಿಸುವ ಮೊದಲು ಕೈ, ಕಾಲುಗಳನ್ನು ಶುಭ್ರವಾಗಿ ತೊಳೆಯುವುದರಿಂದ ಈ ಹುಳುಗಳ ಕಾಟ ಕಡಿಮೆ ಮಾಡಬಹುದು. ಇಲ್ಲವಾದಲ್ಲಿ ನಿರಂತರವಾಗಿ ಈ ಹುಳುಗಳ ಮೊಟ್ಟೆಗಳು ನೀರು ಮತ್ತು ಆಹಾರದ ಮುಖಾಂತರ ಕರಳನ್ನು ಸೇರಿ ನಿರಂತರ ಕಿರುಕುಳ ನೀಡಬಹುದು. ಗಿನಿಯಾ ಹುಳುಗಳ ಕಾಟ ಈಗ ಬಹಳ ಕಡಿಮೆಯಾಗಿದ್ದು, ಲಾಡಿ ಹುಳ ಹೆಚ್ಚಾಗಿ ಮಾಂಸಹಾರಿಗಳಲ್ಲಿ ಕಾಣಿಸುತ್ತವೆ. ಮೀನು ಮಾಂಸದ ಮುಖಾಂತರ, ದನದ ಮಾಂಸದ ಮುಖಾಂತರ ಮತ್ತು ಹಂದಿ ಮಾಂಸದ ಮುಖಾಂತರ ದೇಹಕ್ಕೆ ಸೇರಿಕೊಳ್ಳಬಹುದು. ಸರಿಯಾಗಿ ಬೇಯಿಸದೇ ಮಾಂಸಹಾರ ಮಾಡಿದ್ದಲ್ಲಿ ಈ ರೀತಿ ತೊಂದರೆ ಕಾಣಿಸಿಕೊಳ್ಳುತ್ತದೆ. ಚಾಟಿ ಹುಳುಗಳು ಹೆಚ್ಚಾಗಿ ಕರುಳಿನ ಒಳಭಾಗದ ಪದರವನ್ನು ಗಟ್ಟಿಯಾಗಿ ಕಚ್ಚಿಕೊಂಡು ರಕ್ತ ಹೀರುವುದರಿಂದ ರಕ್ತ ಹೀನತೆ, ರಕ್ತ ಸ್ರಾವ ಮತ್ತು ಕರುಳಿನ ಉರಿ ಊತ ಕಾಣಿಸಿಕೊಳ್ಳಬಹುದು. ದುಂಡು ಹುಳುಗಳು ಜಗತ್ತಿನ ಸು. ಶೇ. 25–30 ಮಂದಿಯನ್ನು ಕಾಡುತ್ತವೆ. ಆರಂಭಿಕ ಹಂತದಲ್ಲಿ ಯಾವುದೇ ಲಕ್ಷಣಗಳಿಲ್ಲದಿದ್ದರೂ ಈ ದುಂಡು ಹುಳುಗಳ ಸಂಖ್ಯೆ ಕರುಳಿನಲ್ಲಿ ಜಾಸ್ತಿಯಾದಾಗ ಅಜೀರ್ಣ ಹಸಿವಿಲ್ಲದಿರುವುದು, ಪದೇ ಪದೇ ಹೊಟ್ಟೆ ನೋವು, ಬೆಳವಣಿಗೆ ಕುಂಠಿತವಾಗುವುದು, ಅಲರ್ಜಿ ಹಾಗೂ ಚರ್ಮದಲ್ಲಿ ತುರಿಕೆ ಕಾಣಿಸಿಕೊಳ್ಳುತ್ತದೆ.
ಹುಳುಗಳು ಹೇಗೆ ದೇಹವನ್ನು ಪ್ರವೇಶಿಸುತ್ತವೆ
ಅಶುದ್ದವಾದ ನೀರು ಮತ್ತು ಕಲುಶಿತ ಆಹಾರಗಳ ಮುಖಾಂತರ ದೇಹಕ್ಕೆ ಸೇರುತ್ತವೆ. ಬಯಲು ಪ್ರದೇಶಗಳ ಹೊಲ ಗದ್ದೆಗಳಲ್ಲಿ, ತೋಟ, ಗುಡ್ಡಗಳಲ್ಲಿ ಪಾದರಕ್ಷೆ ಇಲ್ಲದೆ ನಡೆದಾಡುವುದರಿಂದ ಕಾಲಿನ ಚರ್ಮದ ಮುಖಾಂತರ ದೇಹವನ್ನು ಪ್ರವೇಶಿಸುತ್ತದೆ. ಬಯಲು ಪ್ರದೇಶಗಳಲ್ಲಿ ಮಲ ವಿಸರ್ಜನೆ ಮಾಡುವುದರಿಂದ, ಮಲಗಳ ಮುಖಾಂತರ ಇತರರಿಗೆ ಹರಡಬಹುದು. ದನ, ಹಂದಿ ಮಾಂಸಗಳನ್ನು ಸರಿಯಾಗಿ ಸ್ವಚ್ಚಗೊಳಿಸದೇ, ಬೇಯಿಸದೇ ತಿನ್ನುವುದರಿಂದ ದೇಹವನ್ನು ಸೇರಿಕೊಳ್ಳುತ್ತದೆ. ನಮ್ಮ ಸುತ್ತಮುತ್ತಲಿನ ಪರಿಸರ ಸ್ವಚ್ಚತೆಯನ್ನು ಕಾಪಾಡಿಕೊಳ್ಳದಿದ್ದಲ್ಲಿ ಕೊಳಚೆ ಪ್ರದೇಶಗಳಿಗೆ ಅನುವು ಮಾಡಿದ್ದಲ್ಲಿ ಈ ಹೊಟ್ಟೆ ಹುಳುಗಳು ವಂಶಾಭಿವೃದ್ದಿ ಮಾಡಿಕೊಂಡು ಪರೋಕ್ಷವಾಗಿ ದೇಹಕ್ಕೆ ಬರಲು ರಹದಾರಿ ಮಾಡಿಕೊಳ್ಳುತ್ತದೆ.
ಹೆಚ್ಚಿನ ವಿವರಗಳಿಗೆ ಹತ್ತಿರದ ಸರ್ಕಾರಿ ಆಸ್ಪತ್ರೆಯ ವೈದ್ಯರನ್ನು ಅಥವಾ ಸಿಬ್ಬಂದಿ ವರ್ಗದವರನ್ನು ಸಂಪರ್ಕಿಸಿ ಅಥವಾ ಉಚಿತ ಆರೋಗ್ಯ ಸಹಾಯವಾಣಿ 104 ಕ್ಕೆ ಕರೆ ಮಾಡಿ ಸಂಪರ್ಕಿಸಬಹುದೆಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಮಹೇಶ್ ಕುಮಾರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.








