ಶಿವಮೊಗ್ಗ : ಖಾತೆ ಮಾಡಿಕೊಡಲು 1 ಲಕ್ಷ ರೂ. ಹಣ ಸ್ವೀಕರಿಸುವಾಗ ಗ್ರಾಮ ಲೆಕ್ಕಾಧಿಕಾರಿ(ವಿಎ) ಲೋಕಾಯುಕ್ತ ಬಲೆಗೆ ಬಿದ್ದಿರುವ ಘಟನೆ ಜಿಲ್ಲೆಯ ಶಿಕಾರಿಪುರ ತಾಲ್ಲೂಕಿನಲ್ಲಿ ನಡೆದಿದೆ. ವಿಠ್ಠಲ್ ಕೋಲ್ಹಾರ್ ಲೋಕಾಯುಕ್ತ ಬಲೆಗೆ ಬಿದ್ದ ಗ್ರಾಮ ಲೆಕ್ಕಾಧಿಕಾರಿ ಎಂದು ತಿಳಿದುಬಂದಿದೆ.
ತಮ್ಮ ತಂದೆಯ ವಿಲ್ ಪತ್ರದಂತೆ ಶಿಕಾರಿಪುರ ತಾಲೂಕಿನ ಚಿಕ್ಕಬಂಜೂರಿನಲ್ಲಿರುವ ಜಮೀನಿನ ಖಾತೆ ಮಾಡಿಕೊಡುವಂತೆ ಜಮೀನಿನ ಮಾಲೀಕರಾದ ಜಿಕ್ರಿಯಾ ಬೇಗ್ ಎಂಬುವರು ಕಂದಾಯ ಇಲಾಖೆಗೆ ಅರ್ಜಿ ಸಲ್ಲಿಸಿದ್ದರು. ಈ ಸಂಬಂಧ ಗ್ರಾಮ ಲೆಕ್ಕಾಧಿಕಾರಿ ವಿಠ್ಠಲ್ ಕೋಲ್ಹಾರ್ ಅವರನ್ನು ಸಂಪರ್ಕಿಸಿದ್ದರು.ವಿಠ್ಠಲ್ ಕೋಲ್ಹಾರ್ ಖಾತೆ ಬದಲಾವಣೆಗೆ 4 ಲಕ್ಷ ರೂ. ಬೇಡಿಕೆ ಇಟ್ಟಿದ್ದರು.
ಈ ಸಲುವಾಗಿ ಜಿಕ್ರಿಯಾ ಬೇಗ್ ಅವರು ಲೋಕಾಯುಕ್ತ ಪೊಲೀಸರಿಗೆ ದೂರು ಕೊಟ್ಟಿದ್ದರು.ಖಾತೆ ಮಾಡಿಕೊಡಲು ಹಣಕ್ಕೆ ಬೇಡಿಕೆ ಇಟ್ಟ ಹಿನ್ನಲೆಯಲ್ಲಿ ಜಿಕ್ರಿಯಾ ಬೇಗ್ ಅವರು ಬಂಗಾರವನ್ನು ಅಡವಿಟ್ಟು 1 ಲಕ್ಷ ರೂ ಹಣವನ್ನು ಹೊಂದಿಸಿದ್ದರು.ಈ 1 ಲಕ್ಷ ರೂ ಹಣವನ್ನು ಸ್ವೀಕರಿಸುವಾಗ ಗ್ರಾಮ ಲೆಕ್ಕಾಧಿಕಾರಿ ವಿಠ್ಠಲ್ ಕೋಲ್ಹಾರ್ ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.








