ಶಿವಮೊಗ್ಗ : ಮುಖ್ಯಮಂತ್ರಿಗಳು ಸಾಗರದ ಮಾರಿಕಾಂಬಾ ಜಾತ್ರೆಗೆ 2 ಕೋಟಿ ರೂ. ವಿಶೇಷ ಅನುದಾನ ಬಿಡುಗಡೆ ಮಾಡಿಲ್ಲ. ಶಾಸಕರು ಅನುದಾನಕ್ಕಾಗಿ ಮನವಿ ಮಾಡಿದ್ದು ಹೌದು. ಆದರೆ ಹಣಕಾಸು ಇಲಾಖೆಗೆ ನಗರಸಭೆಯಿಂದ ಅರ್ಜಿ ಹೋದಾಗ ಶಾಸಕರಿಗೆ ಮಂಜೂರು ಮಾಡಲು ಉದ್ದೇಶಿಸಿರುವ 50 ಕೋಟಿಯಲ್ಲಿಯೇ ಹಣ ಹೊಂದಿಸಿಕೊಳ್ಳಿ. ಹೆಚ್ಚುವರಿಯಾಗಿ 2 ಕೋಟಿ ಬಿಡುಗಡೆ ಮಾಡಲು ಸಾಧ್ಯವಿಲ್ಲ ಎಂದು ಶಾಸಕರ ಮನವಿಯನ್ನು ತಿರಸ್ಕರಿಸಿದ್ದಾರೆ ಎಂದು ಸಾಗರ ಬಿಜೆಪಿ ನಗರ ಮಂಡಲ ಅಧ್ಯಕ್ಷ ಕೆ.ಆರ್.ಗಣೇಶ್ ಪ್ರಸಾದ್ ಅವರು, ಶಾಸಕ ಗೋಪಾಲಕೃಷ್ಣ ಬೇಳೂರು ಹೆಸರು ಪ್ರಸ್ತಾಪಿಸದೇ ಅವರ ವಿರುದ್ಧ ಹಿಗ್ಗಾಮುಗ್ಗಾ ವಾಗ್ಧಾಳಿ ನಡೆಸಿದ್ದಾರೆ.
ಇಂದು ಶಿವಮೊಗ್ಗ ಜಿಲ್ಲೆಯ ಸಾಗರದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಮಾರಿಜಾತ್ರೆಗೆ ಒಂದು ರೂಪಾಯಿ ಸಹ ವಿಶೇಷ ಅನುದಾನ ಬಂದಿಲ್ಲ. ನಮ್ಮ ಶಾಸಕರಾದ ಹರತಾಳು ಹಾಲಪ್ಪ ಅವರ ಅವಧಿಯಲ್ಲಿ ಮಂಜೂರಾದ ಎಲ್ಲಾ ಅನುದಾನಗಳನ್ನು ನಾವು ದಾಖಲೆ ಸಮೇತ ಪ್ರದರ್ಶನ ಮಾಡಿ ಮಾತನಾಡುತ್ತೇವೆ. ಕಾಂಗ್ರೇಸ್ನವರು ದಾಖಲೆ ಇರಿಸಿಕೊಂಡು ಏಕೆ ಮಾತನಾಡುವುದಿಲ್ಲ ಎಂದು ಪ್ರಶ್ನಿಸಿದರು.
ಹರತಾಳು ಹಾಲಪ್ಪ ಅವರು ಶಾಸಕರಾಗಿದ್ದಾಗ ಮಾರಿಜಾತ್ರೆಯಲ್ಲಿ, ಸಮಿತಿಯಲ್ಲಿ ಹಸ್ತಕ್ಷೇಪ ಮಾಡಿರಲಿಲ್ಲ. ಅದರೆ ಈಗಿನ ಶಾಸಕರು ತಮ್ಮದೇ ನೇತೃತ್ವದಲ್ಲಿ ಜಾತ್ರೆ ಮಾಡುತ್ತಿದ್ದಾರೆ. ಒಂದೊಂದು ಸಮಿತಿಗೆ ಒಬ್ಬೊಬ್ಬ ಅಧಿಕಾರಿ ಹಾಕಿದ್ದು ನೋಡಿದರೆ ಮುಂದೆ ದೇವಸ್ಥಾನ ಎಲ್ಲಿ ಮುಜುರಾಯಿಗೆ ಹೋಗುತ್ತದೆಯೋ ಎನ್ನುವ ಆತಂಕ ಕಾಡುತ್ತಿದೆ. ಒಂದೊಂದು ಸಮಿತಿಗೂ ತಮ್ಮದೇ ಪಕ್ಷದ ಒಬ್ಬೊಬ್ಬ ಮುಖಂಡನನ್ನು ಹಾಕಿರುವುದು ಜಾತ್ರೆ ಶಾಸಕರು ಹೈಜಾಕ್ ಮಾಡಿದ್ದಾರೆ ಎನ್ನುವುದನ್ನು ಸಾಬೀತುಪಡಿಸುತ್ತದೆ. ಹಿಂದಿನ ಮಾರಿಜಾತ್ರೆಯಲ್ಲಿ ಪ್ರತಿಯೊಂದು ಆಟಕ್ಕೂ 50 ರೂ. ನಿಗಧಿ ಮಾಡಿತ್ತು. ಈಗ ಶಾಸಕರು ಅದನ್ನು ಇನ್ನಷ್ಟು ಕಡಿಮೆಗೆ ಇಳಿಸಲಿ ಎಂದರು.
ಸಾಗರ ನಗರದಾದ್ಯಂತ ಮಾರಿಕಾಂಬಾ ಜಾತ್ರೆ ಹಿನ್ನೆಲೆಯಲ್ಲಿ 150ಕ್ಕೂ ಹೆಚ್ಚು ಫ್ಲೆಕ್ಸ್ಗಳನ್ನು ಅಳವಡಿಸಲಾಗಿದೆ. ನಾವು ಹಾಲಪ್ಪ ಅವರಿಗೆ ಅಭಿನಂದನೆ ಸಲ್ಲಿಸಲು ಹಾಕಿದ್ದ ಫ್ಲೆಕ್ಸನ್ನು ಪರವಾನಿಗೆ ಪಡೆದಿಲ್ಲ ಎಂದು ಪೌರಾಯುಕ್ತರು ತೆಗೆಸಿದ್ದರು. ಈ ಎಲ್ಲಾ ಫ್ಲೆಕ್ಸ್ ಗಳಿಗೆ ನಗರಸಭೆಯಿಂದ ಪರವಾನಿಗೆ ಪಡೆಯಲಾಗಿದೆಯಾ ಎಂದು ಕೆ.ಆರ್ ಗಣೇಶ್ ಪ್ರಸಾದ್ ಪ್ರಶ್ನಿಸಿದರು.
ಸಾಗರ ನಗರಸಭೆಯಲ್ಲಿ ಬಿಜೆಪಿಗೊಂದು ನ್ಯಾಯ, ಕಾಂಗ್ರೆಸಿಗೊಂದು ನ್ಯಾಯ ಧೋರಣೆಯನ್ನು ಅನುಸರಿಸಲಾಗುತ್ತಿದೆ. ಈಚೆಗೆ ವಾರ್ಡ್ ನಂ. 8 ಮತ್ತು 10ನ್ನು ಕೇಂದ್ರವಾಗಿ ಇರಿಸಿಕೊಂಡು ಮನೆ ಅಂಗಳದಲ್ಲಿ ಶಾಸಕರು ಕಾರ್ಯಕ್ರಮ ನಡೆಸಿದ್ದಾರೆ. ರಸ್ತೆ ಅಗಲೀಕರಣ ಹಿನ್ನೆಲೆಯಲ್ಲಿ ಈ ಭಾಗದ ಹತ್ತಿಪ್ಪತ್ತು ಮನೆಗಳಿಗೆ ನೀರಿನ ಸಮಸ್ಯೆ ಎದುರಾಗಿತ್ತು. ಎರಡೂಮುಕ್ಕಾಲು ವರ್ಷದಿಂದ ಶಾಸಕರು ಈ ಭಾಗಕ್ಕೆ ನೀರು ಕೊಡಲು ಏಕೆ ಸಾಧ್ಯವಾಗಿರಲಿಲ್ಲ. ಸಂಸದರು ಹೆದ್ದಾರಿ ಪ್ರಾಧಿಕಾರ ಮತ್ತು ಒಳಚರಂಡಿ ಮಂಡಳಿಗೆ ತಿಳಿಸಿ ನೀರು ಕೊಡಿಸಲು ಯಶಸ್ವಿಯಾಗಿದ್ದಾರೆ. ಕಾಂಗ್ರೇಸ್ನವರು ಆ ಕೆಲಸ ನಾವೆ ಮಾಡಿದ್ದು ಎಂದು ತಮ್ಮ ಬೆನ್ನು ತಾವೆ ತಟ್ಟಿಕೊಳ್ಳುತ್ತಿದ್ದಾರೆ ಎಂದು ಗುಡುಗಿದರು.
ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ದೇವೇಂದ್ರಪ್ಪ ಮಾತನಾಡಿ, ಕಾಂಗ್ರೇಸ್ನವರು ಪದೇಪದೇ ನಮ್ಮ ಸಂಸದರು, ಮಾಜಿ ಸಚಿವರ ವಿರುದ್ದ ಬೇಕಾಬಿಟ್ಟಿ ಮಾತನಾಡಿದರೆ ಬಿಜೆಪಿ ಕೈಕಟ್ಟಿ ಕುಳಿತುಕೊಳ್ಳುವುದಿಲ್ಲ. ಅವರ ವಿರುದ್ದ ಉಗ್ರ ಪ್ರತಿಭಟನೆ ನಡೆಸುವುದು ಅನಿವಾರ್ಯವಾಗುತ್ತದೆ. ನೆಹರೂ ಮೈದಾನದಲ್ಲಿ ಟ್ಯಾಗೂರ್ ಕಲ್ಚರಲ್ ಕಾಂಪ್ಲೆಕ್ಸ್ ಕಟ್ಟಲು ನಮ್ಮ ಶಾಸಕರು 4.80 ಕೋಟಿ ರೂ. ಮಂಜೂರು ಮಾಡಿಸಿದ್ದಕ್ಕೆ ಸಂಬಂಧಪಟ್ಟ ದಾಖಲೆ ನಮ್ಮ ಬಳಿ ಇದೆ. ಜಾತ್ರೆ ಅಂಗವಾಗಿ ಸ್ವಚ್ಚತೆ, ರಕ್ಷಣೆಗೆ ಒತ್ತು ನೀಡಿದ್ದನ್ನು ಬಿಜೆಪಿ ಸ್ವಾಗತಿಸುತ್ತದೆ. ಆದರೆ ಸರ್ಕಾರಿ ಶಾಲೆಯೆ ಮುಚ್ಚಿ ಹೋಗುತ್ತಿರುವ ಈ ದಿನಮಾನಗಳಲ್ಲಿ ಮಾರಿಕಾಂಬಾ ಸಮಿತಿಯಿಂದ ಮತ್ತೊಂದು ಖಾಸಗಿ ಶಾಲೆ ಪ್ರಾರಂಭಿಸಲು ಮುಂದಾಗಿರುವುದು ಬೇಸರ ತರಿಸುತ್ತದೆ. ಓರ್ವ ಜವಾಬ್ದಾರಿಯುತ ಶಾಸಕರಾಗಿ ನರಕಕ್ಕೆ ಹೋಗುತ್ತಾರೆ ಎಂಬಿತ್ಯಾದಿ ಹೇಳಿಕೆ ನೀಡುವುದು ಅವರ ವ್ಯಕ್ತಿತ್ವಕ್ಕೆ ಶೋಬೆ ತರುವುದಿಲ್ಲ ಎಂದರು.
ಈ ಸುದ್ದಿಗೋಷ್ಟಿಯಲ್ಲಿ ವಿ.ಮಹೇಶ್, ರಮೇಶ್ ಎಚ್.ಎಸ್., ರಾಯಲ್ ಸಂತೋಷ್, ಸತೀಶ್ ಕೆ., ಗಿರೀಶ್ ಗೌಡ, ಮಹೇಶ್ ಎಂ.ಆರ್. ಹಾಜರಿದ್ದರು.
ಇನ್ಮುಂದೆ ಸರ್ಕಾರಿ ಅಧಿಕಾರಿಗಳು ‘ಜನಪ್ರತಿನಿಧಿ’ಗಳ ಪೋನ್ ಕಾಲ್ ಸ್ವೀಕರಿಸಲೇಬೇಕು: ರಾಜ್ಯ ಸರ್ಕಾರ ಖಡಕ್ ಆದೇಶ








