ಚಿತ್ರದುರ್ಗ : ರಾಜ್ಯದಲ್ಲಿ ಅಮಾನವೀಯ ಘಟನೆಯೊಂದು ನಡೆದಿದ್ದು, ಪಾಪಿ ತಾಯಿಯೋಬ್ಬಳು ತನ್ನ ಅಕ್ರಮ ಸಂಬಂಧಕ್ಕೆ ಅಡ್ಡಿ ಎಂದು ಹೆತ್ತ ಮಗುವನ್ನೇ ಮಾರಾಟ ಮಾಡಿರುವ ಘಟನೆ ಚಿತ್ರದುರ್ಗ ಜಿಲ್ಲೆ ಹಿರಿಯೂರು ನಗರದಲ್ಲಿ ಬೆಳಕಿಗೆ ಬಂದಿದೆ.
ಕೆಲದಿನಗಳಿಂದ ಈ ಮಗು ಕಾಣದ ಹಿನ್ನೆಲೆಯಲ್ಲಿ ಅಲರ್ಟ್ ಆದ ಸ್ಥಳೀಯರು ಮಕ್ಕಳ ರಕ್ಷಣಾ ಘಟಕಕ್ಕೆ ಮಾಹಿತಿ ನೀಡಿದ್ದರು. ಹೀಗಾಗಿ ಚಿತ್ರದುರ್ಗ ಜಿಲ್ಲಾ ಬಾಲಭವನ ಅಧಿಕಾರಿ ಮಂಜುನಾಥ್ ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದ ವೇಳೆ ಪ್ರಕರಣ ಬಯಲಾಗಿದೆ. ಡಿ.23ರಂದು ಹುಳಿಯಾರು ರಸ್ತೆಯ ನಿವಾಸಿ ಐಶ್ವರ್ಯ ವಿರುದ್ಧ ಹಿರಿಯೂರು ನಗರ ಠಾಣೆಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಈ ಮಗು ಮಾರಾಟ ಪ್ರಕರಣ ಡಿ.19ರಂದು ನಡೆದಿದ್ದು, ಆರೋಪಿ ಐಶ್ವರ್ಯಳನ್ನು ಹಿರಿಯೂರು ನಗರ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆದರೆ ಐಶ್ವರ್ಯಳ ಪ್ರಿಯಕರ, ಆರೋಪಿ ಚಂದ್ರಪ್ಪ ಪರಾರಿಯಾಗಿದ್ದಾನೆ. ಮಗು ಕೊಂಡುಕೊಂಡಿರುವ ಆರೋಪಿಗಳಿಗೆ ಖಾಕಿ ಶೋಧ ಕಾರ್ಯ ಮುಂದುವರೆಸಿದೆ. ಘಟನೆ ಸಂಬಂಧ ಹಿರಿಯೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆಗೆ ಇಳಿದಿದಾಗ ಬೆಚ್ಚಿ ಬಿದ್ದಿದ್ದಾರೆ. ಈ ಘಟನೆಯ ಅಸಲಿ ಸತ್ಯ ಕೇಳಿ ಬೆರಗಾಗಿದ್ದಾರೆ. ಹೂವಿನಹೊಳೆ ಗ್ರಾಮದ ಚಂದ್ರಪ್ಪ ಜೊತೆ ಐಶ್ವರ್ಯ ಅಕ್ರಮ ಸಂಬಂಧ ಹೊಂದಿದ್ದಳು. ಅವರ ಅಕ್ರಮ ಆಟಕ್ಕಾಗಿ ಇಬ್ಬರೂ ಸೇರಿ ಕೊಪ್ಪಳ ಮೂಲದವರಿಗೆ ಮಗುವನ್ನು 50,000 ರೂ.ಗೆ ಮಾರಾಟ ಮಾಡಿದ್ದಾರೆಂದು ತಿಳಿದುಬಂದಿದೆ.








