ಶಿವಮೊಗ್ಗ: ಜಿಲ್ಲೆಯ ಸಾಗರದಲ್ಲಿ ಕೋವಿಡ್ RTPCR ಪ್ರಯೋಗಾಲಯವನ್ನು ಕೆ ಎಫ್ ಡಿ ಪ್ರಯೋಗಲವನ್ನಾಗಿ ಪರಿವರ್ತಿಸಿ. ಕೆಎಫ್ ಡಿ ಪರೀಕ್ಷೆಗೆ ಅಗತ್ಯವಿರುವಂತ ಸಿಬ್ಬಂದಿಗಳನ್ನು ನೇಮಕ ಮಾಡುವಂತೆ ಆರೋಗ್ಯ ಇಲಾಖೆಯ ಆಯುಕ್ತರಿಗೆ ಸಾಗರ ಶಾಸಕ ಗೋಪಾಲಕೃಷ್ಣ ಬೇಳೂರು ಪತ್ರ ಬರೆದಿದ್ದಾರೆ.
ಈ ಕುರಿತಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತರಿಗೆ ಪತ್ರ ಬರೆದಿರುವಂತ ಅವರು, ಕೋವಿಡ್ ಸಂದರ್ಭದಲ್ಲಿ ಸಾಗರದಲ್ಲಿ ಸುಸಜ್ಜಿತ ಆರ್ ಟಿ ಪಿ ಸಿ ಆರ್ ಪ್ರಯೋಗಾಲಯವನ್ನು ಸ್ಥಾಪಿಸಲಾಗಿತ್ತು. ಕೊರೋನಾ ಸಂದರ್ಭದಲ್ಲಿ ಈ ಪ್ರಯೋಗಾಲಯವು ಸಾರ್ವಜನಿಕರಿಗೆ ಆರೋಗ್ಯ ಸೇವೆ ಒದಗಿಸುವಲ್ಲಿ ಪ್ರಮುಖ ಪಾತ್ರ ವಹಿಸಿತ್ತು ಎಂದಿದ್ದಾರೆ.
ಸಾಗರವು ಕ್ಯಾಸನೂರು ಫಾರೆಸ್ಟ್ ಡಿಸೀಜಸ್( Kyasanur Forest Disease-KFD) ಪೀಡಿತ ಪ್ರದೇಶದ ಅಂಚಿನಲ್ಲಿದೆ. ಈ ರೋಗವನ್ನು ತ್ವರಿತವಾಗಿ ಪತ್ತೆ ಹಚ್ಚಿ ನಿಯಂತ್ರಣಕ್ಕೆ ತರಬೇಕಾದಂತ ತುರ್ತು ಅವಶ್ಯಕತೆ ಇದೆ. ಈ ಹಿನ್ನಲೆಯಲ್ಲಿ ಕೋವಿಡ್ ಪ್ರಯೋಗಾಲಯವನ್ನು ಕೆಎಫ್ ಡಿ ಪರೀಕ್ಷೆಯ ಪ್ರಯೋಗಾಲಯವಾಗಿ ಪರಿವರ್ತಿಸುವಂತೆ ಕೋರಿದ್ದಾರೆ.
ಇನ್ನೂ ಕೆಎಫ್ ಡಿ ಪರೀಕ್ಷೆಗಾಗಿ ಸಾಗರದಲ್ಲಿ ಪ್ರಯೋಗಾಲಯ ಸ್ಥಾಪಿಸಿದ ನಂತ್ರ ಅದಕ್ಕೆ ಅಗತ್ಯವಿರುವಂತ ಸೂಕ್ಷ್ಮ ಜೀವಿಶಾಸ್ತ್ರಜ್ಞರು ಹುದ್ದೆ-1, ಪ್ರಯೋಗಾಲಯ ತಂತ್ರಜ್ಞರ ಹುದ್ದೆ-04, ಪ್ರಯೋಗಾಲಯ ಪರಿಚಾರಕರ ಹುದ್ದೆ-04 ಹಾಗೂ ದತ್ತಾಂಶ ನಮೂದಕರ 1 ಹುದ್ದೆ ನೇಮಕಾತಿ ಅವಶ್ಯಕತೆ ಇದೆ. ಅವುಗಳನ್ನು ನೇಮಕಕ್ಕೂ ಅನುಮೋದನೆ ನೀಡುವಂತೆ ಮನವಿ ಮಾಡಿದ್ದಾರೆ.
ಸಾಗರದ ಸಾರ್ವಜನಿಕರ ಆರೋಗ್ಯದ ಹಿತದೃಷ್ಠಿಯಿಂದ ಹಾಗೂ ಕಾಲಮಿತಿಯೊಳಗೆ ಕೆ ಎಫ್ ಡಿ ಪರೀಕ್ಷೆಯನ್ನು ಪ್ರಾರಂಭಿಸಲು, ಕೂಡಲೇ ಆರ್ ಟಿ ಪಿ ಸಿ ಆರ್ ಪ್ರಯೋಗಾಲಯವನ್ನು ಕೆ ಎಫ್ ಡಿ ಪ್ರಯೋಗಾಲಯವಾಗಿ ಪರಿವರ್ತಿಸಿ, ಸೂಕ್ತ ಸಿಬ್ಬಂದಿಗಳನ್ನು ನೇಮಕ ಮಾಡುವಂತೆ ಆರೋಗ್ಯ ಇಲಾಖೆಯ ಆಯುಕ್ತರಿಗೆ ಪತ್ರದಲ್ಲಿ ಕೋರಿದ್ದಾರೆ.
ವರದಿ; ವಸಂತ ಬಿ ಈಶ್ವರಗೆರೆ…, ಸಂಪಾದಕರು..

ಕುಂದಾಪುರ ಇಎಸ್ಐ ಆಸ್ಪತ್ರೆಗೆ ವೈದ್ಯರ ನೇಮಕಕ್ಕೆ ಕ್ರಮ: ಸದನದಲ್ಲಿ ಸಚಿವ ಸಂತೋಷ್ ಲಾಡ್ ಭರವಸೆ








