ಬೆಂಗಳೂರು: ರಾಜ್ಯದ ಮೆಕ್ಕೆ ಜೋಳ ಬೆಳೆಗಾರ ರೈತರಿಂದ ಕುಕ್ಕುಟ ಆಹಾರ ಉತ್ಪಾದಕರು ಖರೀದಿಸಲು ಸರ್ಕಾರ ಅನುಮತಿಸಿ ಆದೇಶಿಸಿದೆ. ಈ ಮೂಲಕ ರಾಜ್ಯದ ಮಕ್ಕೆ ಜೋಳ ಬೆಳೆಗಾರರಿಗೆ ಗುಡ್ ನ್ಯೂಸ್ ಅನ್ನು ನೀಡಿದೆ.
ಈ ಕುರಿತಂತೆ ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ನಡವಳಿಯನ್ನು ಹೊರಡಿಸಿದ್ದು, ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯಿಂದ ಕುಕ್ಕುಟ ಆಹಾರ ಉತ್ಪಾದಕರು ಎಂಎಸ್ಪಿ ಗುಣಮಟ್ಟದ ಪ್ರಕಾರ ನಿಗಧಿಪಡಿಸಿರುವ ಬೆಲೆಯಲ್ಲಿ ಮೆಕ್ಕೆ ಜೋಳವನ್ನು ನೇರವಾಗಿ ರೈತರಿಂದ ಖರೀದಿಸಲು ಸರ್ಕಾರ ಅನುಮತಿ ನೀಡಿ ಆದೇಶಿಸಿದ್ದಾರೆ.
ಅಂದಹಾಗೇ ದಿನಾಂಕ 01-12-2025ರಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಅಧ್ಯಕ್ಷತೆಯಲ್ಲಿ ಕುಕ್ಕುಟ ಮತ್ತು ಪಶು ಆಹಾರ ಉತ್ಪಾದಕರ ಸಭೆ ನಡೆಸಲಾಯಿತು. ಈ ವೇಳೆಯಲ್ಲಿ ರೈತರ ಹಿತದೃಷ್ಟಿಯಿಂದ ರೈತರಿಂದ ನೇರವಾಗಿ ಅಂದಾಜು 5 ಲಕ್ಷ ಟನ್ ಮೆಕ್ಕೆ ಜೋಳವನ್ನು ಖರೀದಿಸಲು ಉದ್ಯಮಿದಾರರನ್ನು ಕೋರಿದ್ದರು. ಈ ವೇಳೆ ಅಗತ್ಯಕ್ಕೆ ತಕ್ಕಂತೆ ಮೆಕ್ಕೆಜೋಳವನ್ನು ನೇರವಾಗಿ ರೈತರಿಂದ ಖರೀದಿಸಲು ಸಹಮತ ವ್ಯಕ್ತಪಡಿಸಿದ್ದರು. ಈ ಹಿನ್ನಲೆಯಲ್ಲಿ ಮೆಕ್ಕೆ ಜೋಳವನ್ನು ಎಂ ಎಸ್ ಪಿ ಬೆಲೆಯಲ್ಲಿ 5000 ಟನ್ ಖರೀದಿಗೆ, ಮುಂಗಡವಾಗಿ ಶೇ.20ರಷ್ಟು ಪಾವತಿಸಯನ್ನು ಪಾವತಿಸಿ ಖರೀದಿಸೋದಕ್ಕೆ ಸರ್ಕಾರ ಮುಂದಾಗಿದೆ.








