ಮಂಡ್ಯ : ವಿಶೇಷ ಚೇತನ ಮಕ್ಕಳೆಂದು ಪೋಷಕರು ಕೀಳರಿಮೆ ತೋರಬೇಡಿ. ವಿಶೇಷ ಚೇತನ ಮಕ್ಕಳು ಇತರೆ ಮಕ್ಕಳಿಗಿಂತ ವಿಶಿಷ್ಟ ಬುದ್ದಿಶಕ್ತಿಯನ್ನು ಹೊಂದಿದ್ದು, ಅವರಿಗೆ ಆತ್ಮಸ್ಥೈರ್ಯ ಮತ್ತು ಸರ್ಕಾರದ ಸವಲತ್ತುಗಳನ್ನು ಒದಗಿಸಿದರೆ ಇತರರಂತೆ ಸಕ್ರಿಯ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುತ್ತಾರೆಂದು ಶಾಸಕ ಕೆ.ಎಂ.ಉದಯ್ ಆತ್ಮಸ್ಥೈರ್ಯ ತುಂಬಿದರು.
ಮದ್ದೂರು ನಗರದ ಕಸ್ತೂರಬಾ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಶನಿವಾರ ಆಯೋಜಿಸಿದ್ದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಹಾಗೂ ಕ್ಷೇತ್ರ ಸಮನ್ವಯಾಧಿಕಾರಿಗಳ ಕಛೇರಿ ಸಹಯೋಗದಲ್ಲಿ ವಿಶೇಷ ಅಗತ್ಯತೆಯುಳ್ಳ ಮಕ್ಕಳಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸರ್ಕಾರ ಹಾಗೂ ಹಲವು ಸ್ವಯಂ ಸೇವಾ ಸಂಸ್ಥೆಗಳು ವಿಶೇಷ ಚೇತನ ಮಕ್ಕಳಿಗೆ ನಾನಾ ರೀತಿಯ ನೆರವು ನೀಡುತ್ತಿದ್ದು ಶಾಲೆಗಳಿಗೆ ದಾಖಲಾಗುವ ತಮ್ಮ ಮಗುವಿನ ಸಂಪೂರ್ಣ ವಿವರವನ್ನು ಶಿಕ್ಷಕರಿಗೆ ತಿಳಿಸಿ ಇಂಥಹ ಶಿಬಿರಗಳಲ್ಲಿ ಅವರಿಗೆ ದೊರೆಯಬಹುದಾದ ಸಾಧನ ಸಲಕರಣೆಗಳು ಹಾಗೂ ಹೆಚ್ಚಿನ ಚಿಕಿತ್ಸೆ ಸೇರಿದಂತೆ ಅಗತ್ಯ ನೆರವನ್ನು ಪಡೆಯಬಹುದಾಗಿದೆ. ಪೋಷಕರು ಇಂಥಹ ಮಕ್ಕಳನ್ನು ನಿರ್ಲಕ್ಷಿಸದೇ ದೇವರು ಕೊಟ್ಟ ವರ ಎಂದು ಭಾವಿಸಿ ಅವರಿಗೆ ಅಗತ್ಯ ಸೌಲಭ್ಯ ನೀಡಿದರೆ ಮುಂದೆ ಅವರು ದೇಶದ ಅನೇಕ ಕ್ಷೇತ್ರಗಳಲ್ಲಿ ಸಾಧಕರಾಗಿ ಸಾಧನೆ ಮಾಡಿರುವ ಅನೇಕ ಉದಾಹರಣೆಗಳಿವೆ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಧನಂಜಯ ಮಾತನಾಡಿ, ವಿಶೇಷ ಚೇತನರಿಗೆ ಆತ್ಮಸ್ಥೈರ್ಯ ತುಂಬುವುದು ಪ್ರಮುಖ ಚಿಕಿತ್ಸೆಯಾಗಿರುತ್ತದೆ. ಇಂಥ ಮಕ್ಕಳನ್ನು ಸಮಾಜ ಮುಖಿಯಾಗಿ ಮಾಡುವುದರಲ್ಲಿ ಸಂತೃಪ್ತಿ ಇರುತ್ತದೆ. ಸರಕಾರದ ಸವಲತ್ತುಗಳನ್ನು ಸದುಪಯೋಗ ಪಡಿಸಿಕೊಳ್ಳುವ ಮೂಲಕ ಪೋಷಕರು ಮಕ್ಕಳ ಚೈತನ್ಯಕ್ಕೆ ಪೂರಕವಾಗಬೇಕೆಂದು ಕೋರಿದರು.
ಆರೋಗ್ಯ ಶಿಬಿರದಲ್ಲಿ ಮಾನಸಿಕ ತಜ್ಞರು, ಶ್ರವಣ ದೋಷ ತಜ್ಞರು, ಫಿಜಿಷಿಯನ್, ಮೂಳೆ ರೋಗ ತಜ್ಞರು, ಅಲಿಂಕೋ ಸಂಸ್ಥೆಯ ತಜ್ಞ ವೈದ್ಯರು ಶಿಬಿರದಲ್ಲಿ ಸುಮಾರು 140 ಕ್ಕೂ ಹೆಚ್ಚು ವಿಶೇಷ ಚೇತನ ಮಕ್ಕಳನ್ನು ತಪಾಸಣೆ ನಡೆಸಿದರು. ಅಗತ್ಯತೆಯುಳ್ಳ ಮಕ್ಕಳಿಗೆ ಬೇಕಾಗುವ ಸಾಧನಗಳನ್ನು ವೈದ್ಯರು ಶಿಫಾರಸು ಮಾಡಿದ ನಂತರ ಸಮಗ್ರ ಶಿಕ್ಷಣ ಕರ್ನಾಟಕ ಮತ್ತು ಅಲಿಂಕೋ ಸಹಯೋಗದೊಂದಿಗೆ ಸಾಧನ ಸಲಕರಣೆ ಮಾಡಲಾಗುವುದೆಂದು ಬಿಇಓ ಧನಂಜಯ ತಿಳಿಸಿದರು.
ಕಾರ್ಯಕ್ರಮದಲ್ಲಿ ಕ್ಷೇತ್ರ ಸಮನ್ವಯಾಧಿಕಾರಿ ಅರ್ಚನಾ, ತಾ. ಬಿ.ಐ.ಇ.ಆರ್. ಟಿ ಎ.ಜೆ.ಸುರೇಶ್, ಸಿ.ಆರ್.ಪಿ, ಬಿ.ಆರ್.ಪಿ, ಶಿಕ್ಷಣ ಸಂಯೋಜಕರುಗಳು ಹಾಗೂ ಶಾಂತ ಮರಿಯಪ್ಪ ಸಂಸ್ಥೆಯ ಆಡಳಿತ ಮಂಡಳಿ ಮತ್ತಿತರರು ಇದ್ದರು.
ವರದಿ : ಗಿರೀಶ್ ರಾಜ್, ಮಂಡ್ಯ
ರಾಜ್ಯದ ಗ್ರಾಮೀಣ ಜನತೆಗೆ ಗುಡ್ ನ್ಯೂಸ್: ಇನ್ಮುಂದೆ ಕೆರೆಗಳಲ್ಲಿ ಮೀನುಗಾರಿಕೆಗೆ ಅವಕಾಶ
‘ಖಾಸಗಿ ಆಸ್ಪತ್ರೆ’ಗಳು ಈ ಚಿಕಿತ್ಸೆಗೆ ಮುಂಗಡ ಹಣಕ್ಕೆ ಒತ್ತಾಯಿಸಿದ್ರೆ ‘ಲೈಸೆನ್ಸ್’ ರದ್ದು; ರಾಜ್ಯ ಸರ್ಕಾರ ಎಚ್ಚರಿಕೆ








