ಬೆಂಗಳೂರು : ರಿಶಿಷ್ಠ ಜಾತಿ ಮತ್ತು ಪರಿಶಿಷ್ಠ ಪಂಗಡಗಳಿಗೆ ಮಂಜೂರು ಮಾಡಿದ ಜಮೀನುಗಳು ಪರಭಾರೆ ಆಗಬಾರದು. ಸದರಿ ಜನರಿಗೆ ಮಂಜೂರು ಮಾಡಿದ ಜಮೀನುಗಳನ್ನು ಅವರೇ ಸಾಗುವಳಿ ಮಾಡಲಿ ಎನ್ನುವ ಸದುದ್ದೇಶದಿಂದ ಈ ಕಾಯ್ದೆಯನ್ನು ಜ್ಯಾರಿಯಲ್ಲಿ ತರಲಾಗಿದೆ.
ದಿನಾಂಕ:1-1-1979 ರಿಂದ ಈ ಕಾಯ್ದೆ ಜ್ಯಾರಿಯಲ್ಲಿ ಬಂದಿದ್ದು, ಈ ಕಾಯ್ದೆ ಜ್ಯಾರಿಯಲ್ಲಿ ಬರುವ ಮೊದಲು ಹಾಗೂ ನಂತರ ಮಂಜೂರಾದ ಜಮೀನು ಪರಭಾರೆ ಮಾಡುವಂತಿಲ್ಲ. ಒಂದು ವೇಳೆ ಜಮೀನು ಪರಭಾರೆ ಮಾಡಬೇಕಿದ್ದಲ್ಲಿ ಕಲಂ 4(2) ರನ್ವಯ ಸರ್ಕಾರದಿಂದ ಪೂರ್ವಾನುಮತಿ ಪಡೆಯಬೇಕಾಗುತ್ತದೆ.
ಈ ಕಾಯ್ದೆ ಉಲ್ಲಂಘನೆ ಪ್ರಕರಣಗಳನ್ನು ಗ್ರಾಮ ಲೆಕ್ಕಾಧಿಕಾರಿಗಳು/ಕಂದಾಯ ನಿರೀಕ್ಷಕರು ಕಂಡು ಹಿಡಿಯಬೇಕಾಗುತ್ತದೆ. ಉಪವಿಭಾಗಾಧಿಕಾರಿಗಳು ಕಾಯ್ದೆ ಉಲ್ಲಂಘನೆ ಬಗ್ಗೆ ಪರಿಶೀಲಿಸಿ ಕಾಯ್ದೆ ಉಲ್ಲಂಘನೆಯಾಗಿದ್ದಲ್ಲಿ ಪರಭಾರೆಯಾದ ಜಮೀನನ್ನು ಮೂಲ ಮಂಜೂರಿದಾರರ ಸ್ವಾಧೀನತೆಗೆ ವಹಿಸಿ ಕೊಡಬೇಕಾಗುತ್ತದೆ.
ಈ ಕಾಯ್ದೆಗೆ ವ್ಯತಿರಿಕ್ತವಾಗಿ ಪರಭಾರೆಯಾದ ಜಮೀನುಗಳನ್ನು ಗುರುತಿಸುವ ಬಗ್ಗೆ –
ಗ್ರಾಮದಲ್ಲಿ ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಠ ಪಂಗಡದವರಿಗೆ ಮಂಜೂರಾದ ಜಮೀನಿನ ವಿವರಗಳನ್ನು ಗೇಣಿ ಮತ್ತು ಪಹಣಿ ಪತ್ರಿಕೆಗಳಿಂದ ಗುರುತಿಸುವುದು ಹಾಗೂ ಸ್ವಾಧೀನತೆ ಇದ್ದ /ಇರದ ಬಗ್ಗೆ ಮಾಹಿತಿ ಪಡೆಯುವುದು. ಸ್ಥಾನಿಕ ವಿಚಾರಣೆಯಿಂದ ಖಚಿತಪಡಿಸಿಕೊಳ್ಳುವುದು.
ಭೂಮಂಜೂರಿ ವಹಿಯ ಆಧಾರದ ಮೇಲೆ ಮಂಜೂರಿದಾರರ ವಿವರ ಪಡೆದು ಪರಿಶೀಲಿಸುವುದು.
ಸಾಗುವಳಿ ಚೀಟಿಗಳು/ಹಕ್ಕು ದಾಖಲಾತಿಗಳ ಆಧಾರದ ಮೇಲೆ ಮಂಜೂರಾತಿಯ ವಿವರಗಳನ್ನು ಪರಿಶೀಲಿಸುವುದು. ಉಲ್ಲಂಘನೆಯಾಗಿವೆ ಅಂತಾ ಕಂಡು ಬಂದಲ್ಲಿ ಅವುಗಳ ಬಗ್ಗೆ ವಿವರ ನೀಡಿ, ಸ್ಥಳ ಪರಿಶೀಲನಾ ವರದಿ, ಪಂಚನಾಮೆ (ಮಹಜರ), ಸಂಬಂಧಿಸಿದವರ ಹೇಳಿಕೆ ಪಡೆದು ಪ್ರಕರಣ ತಯಾರಿಸಿ ತಹಶೀಲದಾರರಿಗೆ ವರದಿ ಮಾಡುವುದು. ಪ್ರಕರಣ ತಯಾರಿಸುವಾಗ ಗೇಣಿ ಪತ್ರಿಕೆ/ಚಕಬಂದಿ ವಿವರ ಹಾಗೂ ನಕಾಶದ ಪ್ರತಿ ಅಥವಾ ಕೈ ನಕಾಶೆ ತೆಗೆದು ಪ್ರಕರಣ ಸಲ್ಲಿಸುವುದು. ಉಪವಿಭಾಗಾಧಿಕಾರಿಗಳು ಆದೇಶ ಮಾಡಿದಲ್ಲಿ ತಡೆಯಾಜ್ಞೆ ಇರದಿದ್ದಲ್ಲಿ ಮೂಲ ಮಂಜೂರಿದಾರರ ಸ್ವಾಧೀನತೆಗೆ ಕಬ್ಬೆ ವಹಿಸಿ ಕೊಡುವುದು ಹಾಗೂ ದಾಖಲೆ ಇಡುವುದು.
ಸಾಮಾನ್ಯವಾಗಿ ಭೂಮಂಜೂರಿಯಾಗಿ 5 ವರ್ಷಗಳಾಗಿದ್ದಲ್ಲಿ ಹಾಗೂ ಮಾರಾಟ ಮಾಡಿದ ಹಣದ ಶೇಕಡಾ 50 ರಷ್ಟನ್ನು ಸರ್ಕಾರಕ್ಕೆ ಭರಣಾ ಮಾಡಿದಲ್ಲಿ ಸರ್ಕಾರ ಮಾರಾಟ ಮಾಡಲು ಅನುಮತಿ ನೀಡಬಹುದಾಗಿದೆ. ಈ ಪ್ರಕಾರ ಪ್ರಸ್ತಾವನೆ ಸಲ್ಲಿಸುವಾಗ ಸಂಬಂಧಿಸಿದ ದಾಖಲೆಗಳು, ಕುಟುಂಬದ ಆರ್ಥಿಕ ಸಂಕಷ್ಟ, ಖರೀದಿಸುವ ವ್ಯಕ್ತಿಯ ವಿವರ, ಆತನ ಉದ್ದೇಶ, ಖರೀದಿ ಕ್ರಯ ಮುಂತಾದ ವಿವರಗಳನ್ನು ತಿಳಿದುಕೊಂಡು ವರದಿ ಮಾಡಬೇಕು.








