ಬೆಂಗಳೂರು ನಗರ ಜಿಲ್ಲೆ, ನವೆಂಬರ್ 12 (ಕರ್ನಾಟಕ ವಾರ್ತೆ): ಕರ್ನಾಟಕ ಖಾಸಗಿ ನರ್ಸಿಂಗ್ ನಿಯಂತ್ರಣ ಕಾಯಿದೆ (ಕೆಪಿಎಂಇ) ನಿಯಮಗಳು ಉಲ್ಲಂಘಿಸಿದ ಖಾಸಗಿ ವೈದ್ಯಕೀಯ ಸಂಸ್ಥೆ, ಕ್ಲಿನಿಕ್ ಹಾಗೂ ಪುನರ್ವಸತಿ ಕೇಂದ್ರಗಳಿಗೆ ದಂಡ ವಿಧಿಸಿ ಪ್ರಕರಣ ದಾಖಲಿಸಿ, ಕಾನೂನು ಕ್ರಮಕೈಗೊಳ್ಳುವಂತೆ ಬೆಂಗಳೂರು ನಗರ ಜಿಲ್ಲಾಧಿಕಾರಿಗಳಾದ ಜಗದೀಶ.ಜಿ ಅವರು ಆದೇಶಿಸಿದ್ದಾರೆ.ಇಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಕಛೇರಿ ಸಭಾಂಗಣದಲ್ಲಿ ಕೆಪಿಎಂಇ ಮತ್ತು ಕುಂದು ಕೊರತೆ ಪ್ರಾಧಿಕಾರದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯಲ್ಲಿ ಬರುವ ಒಟ್ಟು 57 ಖಾಸಗಿ ವೈದ್ಯಕೀಯ ಸಂಸ್ಥೆಗಳು, ಆಸ್ಪತ್ರೆಗಳು, ಕ್ಲಿನಿಕ್ ಗಳು ಹಾಗೂ ಪುನರ್ವಸತಿ ಕೇಂದ್ರಗಳಲ್ಲಿ ಕೆಪಿಎಂಇ ಕಾಯ್ದೆ ಅನ್ವಯ ನಿಯಮವನ್ನು ಉಲ್ಲಂಘನೆ ಮಾಡಿರುವ ತಾವರೆಕೆರೆಯಲ್ಲಿರುವ ಸುಶ್ರತ ಕ್ಲಿನಿಕ್, ಶ್ರೀ ಸಾಯಿ ಕ್ಲಿನಿಕ್ , ಮಾತೃಶ್ರೀ ಕ್ಲಿನಿಕ್ ಮತ್ತು ಮಾತಾ ಕ್ಲಿನಿಕ್, ಕನಕಪುರ ಮುಖ್ಯ ರಸ್ತೆಯ ಕಗ್ಗಲೀಪುರದಲ್ಲಿರುವ ಸಪ್ತಗಿರಿ ಕ್ಲಿನಿಕ್ , ಕೆಂಗೇರಿ ಸ್ಯಾಟಲೈಟ್ ಟೌನ್ ನ ಶಿರ್ಕೆ ಅಪಾರ್ಟ್ಮೆಂಟ್ ಬಳಿ ಇರುವ ಶ್ರೀ ಫೌಂಡೇಶನ್,, ಕೆಂಗೇರಿ ಸ್ಯಾಟಲೈಟ್ ಟೌನ್ ನ ಹೊಯ್ಸಳ ವೃತ್ತದಲ್ಲಿರವ ವರ್ಷ ಫೌಂಡೇಶನ್, ನಾಗಸಂದ್ರ ಪೋಸ್ಟ್ ಮಂಜುನಾಥ್ ನಗರದಲ್ಲಿರುವ ತಿರುಮಲ ಕ್ಲಿನಿಕ್, ಶ್ಯಾಮಣ್ಣ ಗಾರ್ಡನ್ ಐ.ಎಸ್.ಆರ್.ಎ.ಆರ್ ಹೆಲ್ತ್ ಸೆಂಟರ್, ಕಗ್ಗಲೀಪುರ ಉತ್ತರಿ ರಸ್ತೆಯ ಶ್ರೀ ಸಾಯಿ ಕ್ಲಿನಿಕ್, ಇಂದಿರಾನಗರದ (ದೊಮ್ಮಲೂರು ) ದಿ ವೈಟ್ ಎಲಿಫೆಂಟ್ ಆನ್ ಅಲ್ಟರ್ನೇಟ್ ಥೆರಪಿ ಕ್ಲಿನಿಕ್, ಚೆನ್ನೇನಹಳ್ಳಿಯ ತಾವರೆಕೆರೆ ಹೋಬಳಿ ವಿನಾಯಕ ಕ್ಲಿನಿಕ್, ಜಿಗಣಿ ಹೋಬಳಿಯ ಕೊಪ್ಪ ದಲ್ಲಿರುವ ಆದ್ಯ ಕ್ಲಿನಿಕ್, ನಿಸರ್ಗ ಲೇ ಔಟ್, ವೆಸ್ಟ್ ಗೇಟ್, ಎಸ್.ಬಿ ಕಾಂಪ್ಲೆಕ್ಸ್, ಆಂದ್ರಹಳ್ಳಿಯ ಚಕ್ರನಗರ ಮುಖ್ಯ ರಸ್ತೆ ಅಂಜಾನಾದ್ರಿ ಮೆಡಿಕಲ್ ಸರ್ವೀಸ್ ಸ್ಟೋರ್ಸ್, ಹೊಸೂರು ರಸ್ತೆ ಬೇಗೂರು ಹೋಬಳಿಯ ಹೋಪ್ ಫೌಂಡೇಶನ್ , ಮಾದನಾಯಕನಹಳ್ಳಿಯ ನಾರಾಯಣ ದಂತ ಚಿಕಿತ್ಸಾ ಕೇಂದ್ರ ಹಾಗೂ ಪಬ್ಲಿಕ್ಸ್ ಹೆಲ್ತ್ ಕೇರ್ (ವೈದ್ಯರಿಗೆ ದಂಡ) , ಬೇಗೂರಿನ ಮೈಲಸಂದ್ರ ಕೆರೆಯ ಹತ್ತಿರ ಸಂಸ್ಥೆಗೆ ಹೆಸರಿಲ್ಲದೇ ಅನಧಿಕೃತವಾಗಿ ವೈದ್ಯಕೀಯ ವೃತ್ತಿ ನಡೆಸುತ್ತಿರುವ ಸುಮಾ ಅವರು ಸೇರಿದಂತೆ ಒಟ್ಟು 4,00,000/- ರೂ ಗಳ ದಂಡ ವಿಧಿಸಿದರು.
ಮಾದನಾಯಕನಹಳ್ಳಿಯ ಪಬ್ಲಿಕ್ಸ್ ಹೆಲ್ತ್ ಕೇರ್ (ಮಾಲೀಕನ ಮೇಲೆ ) ಮತ್ತು ಯಲಹಂಕ ಟೌನ್ ನ ಎನ್.ಡಿ.ಆರ್ ಆಸ್ಪತ್ರೆ ವಿರುದ್ದ ಪ್ರಕರಣ ದಾಖಲಿಸಲಾಗಿದೆ.
ಕರ್ನಾಟಕ ವೈದ್ಯಕೀಯ ಪರಿಷತ್ತು (ಕೆಎಂಸಿ) ಗೆ ಒಂದು ಪ್ರಕರಣವನ್ನು ವರ್ಗಾಯಿಸಲಾಗಿದೆ. 08 ಪ್ರಕರಣಗಳನ್ನು ಮುಕ್ತಾಗೊಳಿಸಿ, 09 ಪ್ರಕರಣಗಳನ್ನು ಮುಂದಿನ ಸಭೆಯಲ್ಲಿ ಮಂಡಿಸಲು ಆದೇಶಿಸಿದ್ದಾರೆ. ಉಳಿದ ಒಟ್ಟು ಬಾಕಿ ಇರುವ 20 ಪ್ರಕರಣಗಳನ್ನು ಮುಂದಿನ ಸಭೆಯಲ್ಲಿ ಮಂಡಿಸುವಂತೆ ಅವರು ತಿಳಿಸಿದರು.
ಈ ಸಭೆಯಲ್ಲಿ ಬೆಂಗಳೂರು ನಗರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಾದ ಡಾ.ರವೀಂದ್ರನಾಥ ಎಂ. ಮೇಟಿ, ಬೆಂಗಳೂರು ನಗರ ಜಿಲ್ಲಾ ಶಸ್ತ್ರಚಿಕಿತ್ಸಕರಾದ ಡಾ.ಸುರೇಶ್ ಅವರು ಸೇರಿದಂತೆ ಕಾರ್ಯಕ್ರಮಾಧಿಕಾರಿಗಳು ಮತ್ತು ಕರ್ನಾಟಕ ಖಾಸಗಿ ನರ್ಸಿಂಗ್ ನಿಯಂತ್ರಣ ಕಾಯಿದೆ (ಕೆಪಿಎಂಇ) ನೋಡಲ್ ಅಧಿಕಾರಿಗಳು ಉಪಸ್ಥಿತರಿದ್ದರು.








