ಚಾಮರಾಜನಗರ : ಇತ್ತೀಚಿಗೆ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಪಚ್ಚೆದೊಡ್ಡಿ ಗ್ರಾಮದಲ್ಲಿ ಹುಲಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಪ್ರಮುಖ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಹುಲಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಪಚ್ಚಮಲ್ಲ ಅಲಿಯಾಸ್ ಸಣ್ಣ ನನ್ನು ಪೊಲೀಸರು ಬಂಧಿಸಿದ್ದಾರೆ. ಹನೂರು ತಾಲೂಕು ಪಚ್ಚಮಲ್ಲ ಗ್ರಾಮದ ನಿವಾಸಿಯಾಗಿದ್ದಾನೆ. ಪಚ್ಚಮಲ್ಲನ ನಾಲ್ವರು ಸಹಚರರಾದ ಗಣೇಶ, ಗೋವಿಂದೇಗೌಡ ಹಾಗೂ ಮಂದೆ ಕುರಿ ಮೇಯಿಸುತ್ತಿದ್ದ ಮಂಜುನಾಥ, ಕಂಬಣ್ಣ ಅವರನ್ನು ವಶಕ್ಕೆ ಪಡೆಯಲಾಗಿದೆ.
ಹುಲಿಯನ್ನು ಸೇಡು ತೀರಿಸಿಕೊಳ್ಳಲು ಕೊಲ್ಲಲಾಗಿದೆ ಎಂದು ತನಿಖೆಯಲ್ಲಿ ಬಯಲಾಗಿದೆ. ಅಲ್ಲದೇ ಮೃತ ಹುಲಿಯ ಇನ್ನುಳಿದ ಕಳೆಬರವನ್ನ ಅರಣ್ಯ ಸಿಬ್ಬಂದಿಗಳು ಪತ್ತೆ ಹಚ್ಚಿದ್ದಾರೆ. ಹುಲಿಯ ತಲೆ ಹಾಗು ಮುಂಗಾಲು ಮಣ್ಣಿನಲ್ಲಿ ಹೂಳಲಾಗಿತ್ತು. ಹುಲಿಯ ಮಧ್ಯ ಭಾಗದ ದೇಹವನ್ನು ಎಲೆಗಳಲ್ಲಿ ಮುಚ್ಚಿಟ್ಟಲಾಗಿತ್ತು. ಹುಲಿಯ ಹಿಂಭಾಗದ ದೇಹವನ್ನು ಮರದ ಕೆಳಗೆ ಎಸೆಯಲಾಗಿತ್ತು.
ಪಚ್ಚಮಲ್ಲನ ಹಸುವನ್ನು ಹುಲಿ ಬೇಟೆಯಾಡಿ ಕೊಂದು ಭಕ್ಷಣೆ ಮಾಡಿದ್ದು, ತಾನು ಸಾಕಿದ ಹಸುವನ್ನು ಕೊಂದಿದ್ದಕ್ಕೆ ಪಚ್ಚಮಲ್ಲ ರೊಚ್ಚಿಗೆದ್ದಿದ್ದ. ಹುಲಿಗೆ ಒಂದು ಗತಿ ಕಾಣಿಸಲೇಬೇಕೆಂದು ಸ್ಕೆಚ್ ಹಾಕಿದ್ದ. ಗೋವಿಂದೇಗೌಡ, ಮಂಜುನಾಥ, ಕಂಬಣ್ಣ, ಗಣೇಶನ ಜೊತೆ ಸೇರಿ ಸಂಚು ರೂಪಿಸಿದ್ದ. ಹುಲಿಗೆ ಮಾಂಸದಲ್ಲಿ ವಿಷ ಹಾಕಿ ಕೊಂದು ಹಾಕಿದ್ದರು. ಹುಲಿಗೆ ವಿಷ ಹಾಕಿ ಸತ್ತ ಬಳಿಕ ಕೊಡಲಿಯಿಂದ ಕತ್ತರಿಸಿರುವ ಶಂಕೆ ವ್ಯಕ್ತವಾಗಿದೆ. ಆರೋಪಿ ಕೊಡಲಿಯಿಂದ ಕೊಚ್ಚಿ ಮೂರು ಭಾಗ ಮಾಡಿದ್ದರು.