ಬೆಂಗಳೂರು: ರಾಜ್ಯದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಕಡ್ಡಾಯವಾಗಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಾಪಿಸಿ ನಿರ್ವಹಿಸಬೇಕು ಎಂದು ಕಾಲೇಜು ಶಿಕ್ಷಣ ಇಲಾಖೆ ಮಹತ್ವದ ಆದೇಶ ಹೊರಡಿಸಿದೆ.
ರಾಜ್ಯದ ಎಲ್ಲಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಕಡ್ಡಾಯವಾಗಿ ಭಾರತ್ ಸ್ಕೌಟ್ಸ್ & ಗೈಡ್ಸ್ ಘಟಕಗಳನ್ನು ಸ್ಥಾಪಿಸಿ ನಿರ್ವಹಿಸುವುದು ಕಡ್ಡಾಯವಾಗಿರುತ್ತದೆ ಹಾಗೂ ಈ ಘಟಕಗಳನ್ನು ನಿರ್ವಹಿಸಲು ತರಬೇತಿ ಪಡೆದ ಅಧ್ಯಾಪಕರುಗಳಿಗೆ ಜವಾಬ್ದಾರಿ ನೀಡಬೇಕಾಗಿರುತ್ತದೆ. ಈ ನಿಟ್ಟಿನಲ್ಲಿ ಭಾರತ್ ಸ್ಕೌಟ್ಸ್ & ಗೈಡ್ಸ್ ಕರ್ನಾಟಕ ರಾಜ್ಯ ಸಂಸ್ಥೆಯ ವತಿಯಿಂದ ಯುವ ಆಪ ದ್ ಮಿತ್ರ ಯೋಜನೆಯ ಅಂಗವಾಗಿ ವಿವತ್ತು ನಿರ್ವಾಹಣಾ ತರಬೇತಿ ಶಿಬಿರಕ್ಕೆ ಆಸಕ್ತ ರೋವರ್ಸ್-ರೇಜರ್ಸ್, ದಳನಾಯಕರನ್ನು, ತರಬೇತಿಗೆ ಕಡ್ಡಾಯವಾಗಿ ನಿಯೋಜಿಸಲು ಅನುಬಂಧದಲ್ಲಿ ಲಗತ್ತಿಸಲಾಗಿದ್ದು ಪ್ರಾಂಶುಪಾಲರಿಗೆ ಈ ಮೂಲಕ ಸೂಚಿಸಲಾಗಿದೆ.
ಅ.24 ರಿಂದ 30ರವರೆಗೆ ಡಾ. ಅನಿ ಬೆಸೆಂಟ್ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ತರಬೇತಿ ಮತ್ತು ಶಿಬಿರ ಕೇಂದ್ರದಲ್ಲಿ ತರಬೇತಿ ನಡೆಯಲಿದೆ. ಭಾಗವಹಿಸಿದ ವಿದ್ಯಾರ್ಥಿಗಳು ಮತ್ತು ಸ್ವಯಂ ಸೇವಕರು ಮುಂದಿನ 3 ವರ್ಷ ಜಿಲ್ಲಾಡಳಿತ, ರಾಜ್ಯ ಮತ್ತು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ತಿಳಿಸಿದ ಸಂದರ್ಭದಲ್ಲಿ ಸೇವೆಗೆ ಸಿದ್ಧರಿರಬೇಕು. ತರಬೇತಿ ಹೊಂದಿದವರಿಗೆ ಹತ್ತು ಸಾವಿರ ರೂ.ಗಳ ತುರ್ತು ಪ್ರತಿಕ್ರಿಯೆ ಕಿಟ್ ನೀಡಲಾಗುತ್ತದೆ. ಮುಂದಿನ ಮೂರು ವರ್ಷ ಜೀವ ಮತ್ತು ಆರೋಗ್ಯ ವಿಮೆಯಿಂದ ರಕ್ಷಣೆ ಮತ್ತು ವಿಶೇಷ ಪ್ರಮಾಣಪತ್ರ ನೀಡಲಾಗುತ್ತದೆ.