ಬೆಂಗಳೂರು: ಜಿ.ಎಸ್.ಟಿ. ಅನುಷ್ಠಾನ ವಿಧಾನದಲ್ಲಿ ದೋಷವಿದೆ ಎಂದು ನಮ್ಮ ನಾಯಕ ರಾಹುಲ್ ಗಾಂಧಿ ಅವರು ಕಳೆದ ಒಂಬತ್ತು ವರ್ಷಗಳಿಂದ ಹೇಳುತ್ತಾ ಬಂದಿದ್ದರು. ಆದರೆ, ಪ್ರಧಾನಮಂತ್ರಿ ಮೋದಿ ಅವರು ಈವರೆಗೆ ಈ ಬಗ್ಗೆ ಗಮನಹರಿಸದೆ ಈಗ ಅದನ್ನು ಸರಿಪಡಿಸಿದ್ದಾರೆ. ಇದರಿಂದ ಇಷ್ಟು ವರ್ಷಗಳ ಕಾಲ ದೇಶದ ಜನರು ಸಮಸ್ಯೆ ಅನುಭವಿಸಬೇಕಾಯಿತು ಎಂದು ಭಾರಿ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಶುಕ್ರವಾರ ಹೇಳಿದರು.
ಸದಾಶಿವನಗರದ ನಿವಾಸದಲ್ಲಿ ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರ ಪ್ರಶ್ನೆಗಳಿಗೆ ಸಚಿವರು ಈ ಉತ್ತರ ನೀಡಿದರು.
ಜಿ.ಎಸ್.ಟಿ.ಗೆ ಸಂಬಂಧಿಸಿದಂತೆ ಈಗ ಜಾರಿಗೊಳಿಸಿರುವ ಎರಡು ಹಂತಗಳ ನೀತಿ ಸ್ವಾಗತಾರ್ಹ. ಆದರೆ, ಇಷ್ಟು ವರ್ಷಗಳ ಕಾಲ ಜನರು ಸಮಸ್ಯೆಯಲ್ಲಿ ಸಿಲುಕಲು ಪ್ರಧಾನಿ ಮೋದಿ ಅವರ ಧೋರಣೆಯೇ ಕಾರಣ ಎಂದು ಅಭಿಪ್ರಾಯಪಟ್ಟರು.
ರಾಜ್ಯವು ಕಳೆದ ತ್ರೈಮಾಸಿಕದಲ್ಲಿ ವಿದೇಶಿ ಹೂಡಿಕೆ ಸೆಳೆಯುವಲ್ಲಿ ಮಹಾರಾಷ್ಟ್ರವನ್ನು ಹಿಂದಿಕ್ಕಿ ಮೊದಲ ಸ್ಥಾನದಲ್ಲಿದೆ. ಕರ್ನಾಟಕವು ಹೂಡಿಕೆಗೆ ಪ್ರಶಸ್ತ ಸ್ಥಳವಾಗಿ ಮುಂದುವರಿಯಬೇಕೆಂಬುದೇ ನಮ್ಮ ಆಶಯವಾಗಿದೆ. ಅಮೆರಿಕ ಅಧ್ಯಕ್ಷ ಟ್ರಂಪ್ ಅವರ ವಿಧಿಸಿರುವ ಸುಂಕವು ನಮ್ಮ ಎಲೆಕ್ಟ್ರಾನಿಕ್ ತಯಾರಿಕೆ, ಔಷಧ ಹಾಗೂ ಸೇವಾ ವಲಯಗಳಿಗೆ ಅನ್ವಯವಾಗದಿರುವುದು ಸಮಧಾನದ ಸಂಗತಿಯಾಗಿದೆ ಎಂದು ಪಾಟೀಲ ಹೇಳಿದರು.
ಮೋದಿ ಅವರು ಟ್ರಂಪ್ ಅವರನ್ನು ಹೆಚ್ಚಾಗಿಯೇ ಓಲೈಸುತ್ತಿದ್ದರು. ಆದರೂ, ಟ್ರಂಪ್ ಅವರು ಭಾರತದ ಮೇಲೆ ತೆರಿಗೆ ಪ್ರಹಾರ ಮಾಡಿದ್ದಾರೆ. ಈಗ ನಮ್ಮ ಪ್ರಧಾನಿಯವರು ಶೇಕಡಾ 50ರಷ್ಟು ಸುಂಕವನ್ನು ಶೇಕಡಾ 25ಕ್ಕೆ ಇಳಿಸಲು ಅಮೆರಿಕದ ಮೇಲೆ ಒತ್ತಡ ಹೇರಬೇಕು. ಭಾರತದ ಮೇಲಿನ ಟ್ರಂಪ್ ಅವರ ಈ ತೆರಿಗೆ ಪ್ರಹಾರಕ್ಕೆ ಒಂದು ರೀತಿಯಲ್ಲಿ ಮೋದಿ ಅವರ ಓಲೈಕೆ ನೀತಿಯೂ ಕಾರಣವಾಯಿತು ಎಂದರು.
ಭಾರತವು ಕೆಲವು ವರ್ಷಗಳಿಂದೀಚೆಗೆ ರಷ್ಯಾದಿಂದ ಕಡಿಮೆ ಬೆಲೆಗೆ ಕಚ್ಚಾ ತೈಲ ಆಮದು ಮಾಡಿಕೊಳ್ಳುತ್ತಿದೆ. ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದಾಗ ಕಚ್ಚಾ ತೈಲದ ಬೆಲೆ ಬ್ಯಾರೆಲ್ ಗೆ 140 ಡಾಲರ್ ಇದ್ದಾಗ ಇಲ್ಲಿ ಪೆಟ್ರೋಲ್ ಲೀಟರಿಗೆ ರೂ 65, ಡೀಸೆಲ್ ರೂ 55, ಅಡುಗೆ ಅನಿಲದ ಬೆಲೆ ಸಿಲಿಂಡರ್ ಗೆ ರೂ 450-500ರ ಆಸುಪಾಸಿನಲ್ಲಿತ್ತು. ಆದರೆ, ಈಗ ಬ್ಯಾರೆಲ್ ಕಚ್ಚಾತೈಲದ ಬೆಲೆ 70 ಡಾಲರ್ ಆಸುಪಾಸಿನಲ್ಲಿದ್ದರೂ ಪೆಟ್ರೋಲ್, ಡೀಸೆಲ್, ಎಲ್ ಪಿ ಜಿ ಬೆಲೆಗಳು ದುಪ್ಪಟ್ಟು ದುಬಾರಿಯಾಗಿವೆ ಎಂದು ವಿವರಿಸಿದರು.
ಅಂದರೆ, ಕಚ್ಚಾತೈಲದ ಬೆಲೆ ಇಳಿಕೆಯಿಂದ ಉಂಟಾದ ಲಾಭವನ್ನು ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರವು ದೇಶದ ಜನರಿಗೆ ವರ್ಗಾಯಿಸಿಯೇ ಇಲ್ಲ. ಇದರ ಒಟ್ಟಾರೆ ಮೌಲ್ಯ ಹತ್ತಾರು ಲಕ್ಷ ಕೋಟಿ ರೂಪಾಯಿಗಳಾಗುತ್ತದೆ. ನಿಜವಾದ ಜನಪರ ಕಾಳಜಿ ಇದ್ದಿದ್ದರೆ ಪ್ರಧಾನಿಯವರು ಈ ಲಾಭವನ್ನು ಜನರಿಗೆ ವರ್ಗಾಯಿಸಬೇಕಿತ್ತು ಎಂದರು.
ಕಷ್ಣಾ ಮೇಲ್ದಂಡೆ ಬಗ್ಗೆ ಮಾತನಾಡಿ, ಈ ಯೋಜನೆಯ ಭೂಸ್ವಾಧೀನಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿಯವರ ಉಪಸ್ಥಿತಿಯಲ್ಲಿ ಈಗಾಗಲೇ ಎರಡು ಸಲ ಸಭೆ ನಡೆಸಲಾಗಿದೆ. ಒಟ್ಟಾರೆ ಯೋಜನೆಗಾಗಿ ರೂ 90,000 ಕೋಟಿ ಬೇಕಾಗುತ್ತದೆ. ಈ ಯೋಜನೆಗಾಗಿ 20 ಹಳ್ಳಿಗಳಿಗೆ ಪುನರ್ವಸತಿ ಕಲ್ಪಿಸಬೇಕಿದ್ದು, ಇದರ ದುರ್ಲಾಭ ಪಡೆಯಲು ಖಾಸಗಿ ರಿಯಲ್ ಎಸ್ಟೇಟ್ ಡೆವಲಪರ್ ಗಳು ಕಣ್ಣು ಹಾಕಿದ್ದಾರೆ. ಆದರೆ, ಯಾವ ಕಾರಣಕ್ಕೂ ರೈತರನ್ನು ಶೋಷಿಸಲು ಸರ್ಕಾರ ಅವಕಾಶ ನೀಡುವುದಿಲ್ಲ. ರೈತರು ಸೇರಿದಂತೆ ಎಲ್ಲಾ ಭಾಗೀದಾರರೊಂದಿಗೆ ಸಮಾಲೋಚನೆ ನಡೆಸಿ ಸೂಕ್ತ ರೀತಿಯಲ್ಲಿ ಕಾಮಗಾರಿ ಕೈಗೊಳ್ಳಲು ಕ್ರಮ ವಹಿಸಲಾಗುವುದು ಎಂದು ಪಾಟೀಲ ನುಡಿದರು.
ಮುಡಾ ಪ್ರಕರಣದಲ್ಲಿ ಮುಖ್ಯಮಂತ್ರಿ ಹಾಗೂ ಅವರ ಕುಟುಂಬದವರ ಪಾತ್ರವಿಲ್ಲ ಎಂದು ಏಕಸದಸ್ಯ ಆಯೋಗ ವರದಿ ನೀಡಿದೆ. ಸುಪ್ರೀಂಕೋರ್ಟು ಕೂಡ ಇದೇ ರೀತಿ ತೀರ್ಪು ನೀಡಿದೆ. ಪುನಃ ಇದರ ಬಗ್ಗೆ ಅನುಮಾನಪಟ್ಟರೆ ವ್ಯವಸ್ಥೆಯನ್ನು ಅಗೌರವಿಸಿದಂತಾಗುತ್ತದೆ ಎಂದರು.
ಚುನಾವಣೆಗಳಲ್ಲಿ ಇವಿಎಂ ಬಳಕೆ ಕುರಿತು ಪ್ರಸ್ತಾಪಿಸಿ, “ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ಹೇಗೆ ನಡೆಸಬೇಕೆಂಬ ಬಗ್ಗೆ ನಿರ್ಧರಿಸಲು ರಾಜ್ಯ ಸರ್ಕಾರಕ್ಕೆ ಅಧಿಕಾರವಿದೆ. ಹೀಗಾಗಿ, ಇವಿಎಂ ದುರ್ಬಳಕೆ ತಪ್ಪಿಸುವ ಉದ್ದೇಶದಿಂದ ನಾವು ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಬ್ಯಾಲೆಟ್ ಮತಚಲಾವಣೆ ಮರುಜಾರಿಗೊಳಿಸಿದ್ದೇವೆ. ಆದರೆ, ರಾಜ್ಯ ಹಾಗೂ ರಾಷ್ಟ್ರ ಚುನಾವಣೆಗಳಲ್ಲಿ ಇವುಗಳ ಬಳಕೆ ಬಗ್ಗೆ ನಿರ್ಧರಿಸುವ ಅಧಿಕಾರ ರಾಜ್ಯ ಸರ್ಕಾರಕ್ಕಿಲ್ಲ. ಅದು ಚುನಾವಣಾ ಆಯೋಗದ ವ್ಯಾಪ್ತಿಗೆ ಬರುತ್ತದೆ” ಎಂದು ಹೇಳಿದರು.
ರಾಜಮನೆತನದ ಹಿರಿಯ ಸದಸ್ಯೆ, ಕೆಂಟ್ ಡಚೆಸ್ ಕ್ಯಾಥರೀನ್ ನಿಧನ | Duchess of Kent Katharine
‘ಗಬ್ಬರ್ ಸಿಂಗ್ ತೆರಿಗೆ’ ದೇಶದ ಸಣ್ಣ ವ್ಯಾಪಾರಿಗಳ ಸರ್ವನಾಶ: ಸಿಎಂ ಸಿದ್ಧರಾಮಯ್ಯ