ಬೆಂಗಳೂರು : “ಇಡೀ ಪ್ರಪಂಚ ಭಾರತವನ್ನು ಕರ್ನಾಟಕ ಹಾಗೂ ಬೆಂಗಳೂರಿನ ಮೂಲಕ ನೋಡುತ್ತಿದೆ. ಇದಕ್ಕೆ ಶಿಕ್ಷಕರೇ ಮೂಲ ಕಾರಣ. ಶಿಕ್ಷಣದಿಂದಲೇ ಪ್ರಗತಿ ಹೀಗಾಗಿ ನಮ್ಮ ಪ್ರಗತಿಗೆ ಶಿಕ್ಷಕರ ಪಾಲು ಹೆಚ್ಚಿದೆ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಬಣ್ಣಿಸಿದರು.
ಕೆಪಿಸಿಸಿ ಕಚೇರಿಯ ಭಾರತ ಜೋಡೋ ಸಭಾಂಗಣದಲ್ಲಿ ಶುಕ್ರವಾರ ನಡೆದ ಶಿಕ್ಷಕರ ದಿನ ಕಾರ್ಯಕ್ರಮದಲ್ಲಿ ಶಿಕ್ಷಕರನ್ನು ಸನ್ಮಾನಿಸಿ ಶಿವಕುಮಾರ್ ಅವರು ಮಾತನಾಡಿದರು.
“ನಮ್ಮ ಹಿರಿಯರು ಶಿಕ್ಷಣದ ಮೂಲಕ ನಮಗೆ ಕೊಟ್ಟಿರುವ ಕೊಡುಗೆ ಮಹತ್ವದ್ದಾಗಿದೆ. ಸಿ.ವಿ ರಾಮನ್, ಸರ್ವಪಲ್ಲಿ ರಾಧಾಕೃಷ್ಣನ್ ಅವರಂತಹ ಶ್ರೇಷ್ಠ ವ್ಯಕ್ತಿಗಳು ಕರ್ನಾಟಕದ ನೆಲದಲ್ಲಿ ಬೋಧನೆ ಮಾಡಿದ್ದಾರೆ. ಕರ್ನಾಟಕವು ಅತ್ಯಂತ ಹೆಚ್ಚು ಎಂಜಿನಿಯರ್, ವೈದ್ಯರು, ನರ್ಸ್ ಗಳನ್ನು ದೇಶಕ್ಕೆ ಕೊಡುಗೆ ನೀಡುತ್ತಿದೆ. ಜವಾಹರ್ ಲಾಲ್ ನೆಹರೂ ಅವರ ಕಾಲದಲ್ಲೂ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ದೊರೆಯಿತು” ಎಂದರು.
ಸಿಎಸ್ ಅರ್ ಅನುದಾನದಲ್ಲಿ ಶಾಲೆಗಳ ನಿರ್ಮಾಣಕ್ಕೆ ಹೊಸ ತೀರ್ಮಾನ
“ಮುಂದಿನ ಸಚಿವ ಸಂಪುಟದಲ್ಲಿ ಸಿಎಸ್ ಆರ್ ಅನುದಾನದಿಂದ ಶಾಲೆಗಳ ನಿರ್ಮಾಣದ ಬಗ್ಗೆ ಮಹತ್ವದ ತೀರ್ಮಾನ ಮಾಡಲಾಗುವುದು. ಯಾರು ಶಾಲೆ ನಿರ್ಮಾಣ ಮಾಡುತ್ತಾರೋ ಅವರ ಕಂಪೆನಿಯ ಹೆಸರನ್ನೇ ಇಟ್ಟುಕೊಳ್ಳಬಹುದು ಎಂದು ಹೇಳಿದ್ದೇವೆ. ಆದರೆ ಅತ್ಯುತ್ತಮ ಕಟ್ಟಡ ನಿರ್ಮಾಣ ಮಾಡಬೇಕು ಹಾಗೂ ನಗರ ಮಾದರಿಯಲ್ಲಿ ಸಿಬಿಎಸ್ ಇ ಶಿಕ್ಷಣ ದೊರೆಯಬೇಕು ಎಂಬುದು ನಮ್ಮ ಆಶಯ. ಈಗಾಗಲೇ ಒಂದಷ್ಟು ಶಾಲೆಗಳು ಪ್ರಾರಂಭವಾಗಿವೆ. ಸುಮಾರು 2 ಸಾವಿರ ಶಾಲೆ ನಿರ್ಮಾಣ ನಮ್ಮ ಗುರಿ” ಎಂದರು.
“ಇತ್ತೀಚೆಗೆ ಪತ್ರಿಕೆಯಲ್ಲಿ ಒಂದು ವರದಿ ಓದಿದೆ. ಸರ್ಕಾರಿ ಶಾಲೆಗಳನ್ನು ತೊರೆದು ಖಾಸಗಿ ಶಾಲೆಗಳಿಗೆ ಮಕ್ಕಳನ್ನು ಸೇರಿಸುತ್ತಿದ್ದಾರೆ ಎಂದು. ಅದಕ್ಕೆ ನಾವು ಸಿಎಸ್ ಆರ್ ಹಣದ ತೊಡಗಿಸುವಿಕೆಗೆ ಪ್ರೋತ್ಸಾಹ ನೀಡುತ್ತಿದ್ದೇವೆ. ನಮ್ಮ ರಾಜ್ಯದಲ್ಲಿ 7,800 ಕೋಟಿಯಷ್ಟು ಹಣವನ್ನು ಸಿಎಸ್ ಆರ್ ಹಣ ಲಭ್ಯವಿದೆ ಎಂದು ವರದಿಗಳು ಹೇಳುತ್ತವೆ. ಒಂದಷ್ಟು ಜನ ಉದ್ಯಮಿಗಳು ಇನ್ನೂ ಮನಸು ಮಾಡಿಲ್ಲ. ನನ್ನ ಕ್ಷೇತ್ರದಲ್ಲಿ ಕೆಪಿಎಸ್ ಶಾಲೆಗಳ ವಿಚಾರದಲ್ಲಿ ಅತ್ಯುತ್ತಮ ಕೆಲಸವಾಗಿದೆ. ನನ್ನ ಕ್ಷೇತ್ರದಲ್ಲಿ ಟೊಯೋಟಾ ಕಂಪೆನಿಯವರು ತಲಾ 10 ಕೋಟಿ ವೆಚ್ಚದಲ್ಲಿ 7 ಕೆಪಿಎಸ್ ಶಾಲೆ ನಿರ್ಮಾಣ ಮಾಡುತ್ತಿದ್ದಾರೆ.” ಎಂದರು.
“ಉತ್ತಮ ಶಿಕ್ಷಣ ಆಯಾಯ ಊರಿನಲ್ಲಿಯೇ ದೊರೆಯಬೇಕು. ಇಲ್ಲದಿದ್ದರೆ ವಲಸೆ ತಡೆಯಲು ಆಗುವುದಿಲ್ಲ. ನನ್ನನ್ನು ಶಿಕ್ಷಣಕ್ಕಾಗಿ ಬೆಂಗಳೂರಿಗೆ ನಮ್ಮ ತಂದೆ ತಾಯಿ ಕಳಿಸಿದರು. ನಾನು ಮರಳಿ ಊರಿಗೆ ಹೋಗಲೇ ಇಲ್ಲ. ಅದಕ್ಕೆ ಗ್ರಾಮೀಣ ಭಾಗದಲ್ಲಿ ಮೂರು ಪಂಚಾಯತಿಗಳು ಸೇರಿದಂತೆ ಒಂದು ಕೆಪಿಎಸ್ ಶಾಲೆ ನಿರ್ಮಾಣ ಮಾಡಲಾಗುತ್ತದೆ. ನಾನು ನಮ್ಮ ಊರಿನಲ್ಲಿ ಮೂರು ಶಾಲೆಗಳನ್ನು ದತ್ತು ತೆಗೆದುಕೋ ಎಂದು ಮಗಳಿಗೆ ಸೂಚನೆ ನೀಡಿದ್ದೇನೆ” ಎಂದರು.
“ರಾಜೀವ್ ಗಾಂಧಿ ಅವರು ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ತಂದು ದೇಶದ ಶೈಕ್ಷಣಿಕ ಬೆಳವಣಿಗೆಗೆ ಸಾಕಷ್ಟು ಕೊಡುಗೆ ನೀಡಿದರು. ‘ಆಪರೇಷನ್ ಬ್ಲಾಕ್’ ಬೋರ್ಡ್ ಅಭಿಯಾನದ ಮೂಲಕ ಶಿಕ್ಷಣ ಕ್ರಾಂತಿ ಮಾಡಿದರು. ಅನೇಕ ರಾಜ್ಯಗಳು ಶೇ.30 ರಷ್ಟು ಹಣವನ್ನು ಶಿಕ್ಷಣಕ್ಕೆ ವೆಚ್ಚ ಮಾಡುತ್ತಿವೆ” ಎಂದರು.
ನಾನು ರಾಜಕಾರಣಿಯಾದರೂ ಶಿಕ್ಷಣ ಪ್ರೇಮಿ
“ನಾನು ರಾಜಕಾರಣಿ ಇರಬಹುದು, ಜೊತೆಗೆ ಶಿಕ್ಷಣ ಪ್ರೇಮಿ. ನಾನು ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಣದ ಕಡೆಗೆ ಹೆಚ್ಚು ಗಮನ ಹರಿಸಲಿಲ್ಲ. ಓದುವಾಗಲೇ ರಾಜಕೀಯದ ಕಡೆಗೆ ಆಕರ್ಷಿತನಾದೆ. ನಾನು ಚುನಾವಣೆಯಲ್ಲಿ ಗೆದ್ದು ವಿಧಾನಸಭೆಗೆ ಬಂಗಾರಪ್ಪನವರು, ಕೆ.ಎಚ್.ರಂಗನಾಥರು, ವೀರಪ್ಪ ಮೊಯಿಲಿ, ರಾಮಕೃಷ್ಣ ಹೆಗಡೆ ಅವರುಗಳ ಭಾಷಣ, ವಿಚಾರಧಾರೆ ನೋಡಿದ ನಂತರ ನಾನು ಶಿಕ್ಷಣಕ್ಕೆ ಆದ್ಯತೆ ನೀಡಲಿಲ್ಲ ಎಂದು ಅರಿವಾಯಿತು. 47ನೇ ವಯಸ್ಸಿನಲ್ಲಿ ಪದವಿ ಮಾಡಿದೆ. ನಾನು ಯಾವುದೇ ಸಚಿವನಾದಾಗ ಆಗದ ಸಂತೋಷ ಪದವಿ ಪ್ರಮಾಣ ಪತ್ರ ಪಡೆದಾಗ ಆಯಿತು” ಎಂದರು.
“ಎನ್ ಪಿಎಸ್ ಶಾಲೆಯ ಮುಖ್ಯಸ್ಥರಾಗಿದ್ದ ಗೋಪಾಲಕೃಷ್ಣ ಅವರು ನನ್ನನ್ನು ಶಾಲೆಯಿಂದ ತೆಗೆದುಹಾಕಿದರು. ನಂತರ ಅವರ ಸಹಾಯದಲ್ಲೇ ಕೆಲವು ಶಾಲೆ ಆರಂಭಿಸಿದ್ದೇನೆ. ನಮ್ಮ ಊರಿನಲ್ಲಿ ಶಿಕ್ಷಣಕ್ಕಾಗಿಯೇ ಹತ್ತಾರು ಎಕರೆ ಜಮೀನನ್ನು ದಾನ ಮಾಡಿದ್ದೇನೆ”ಎಂದು ಹೇಳಿದರು.
“ನಮ್ಮ ಕಾಲದಲ್ಲಿ ಕಲಿಸುತ್ತಿದ್ದ ರೀತಿ ಈಗ ಇಲ್ಲ. ಎನ್ ಪಿಎಸ್ ಶಾಲೆಯ ಗೋಪಾಲಕೃಷ್ಣ ಅವರು ಎರಡು ಕಿವಿಗಳ ಮಧ್ಯೆ ಸಣ್ಣ ಕಲ್ಲನ್ನು ಇಟ್ಟು ಕಿವಿ ಹಿಂಡುತ್ತಿದ್ದರು. ಮೊಣಕಾಲಿನ ಮೇಲೆ ನಿಲ್ಲಿಸುತ್ತಿದ್ದರು. ಆದರೆ ಈಗ ಹೊಡೆಯುವಂತೆಯೂ ಇಲ್ಲ, ಬೈಯ್ಯುವಂತೆಯೂ ಇಲ್ಲ” ಎಂದು ತಮ್ಮ ವಿದ್ಯಾರ್ಥಿ ಜೀವನದ ಕ್ಷಣಗಳನ್ನು ಮೆಲುಕು ಹಾಕಿದರು.
ಕಲಿಯುಗದಲ್ಲಿ ವಂದಿಸಿ ಕಲಿಸಬೇಕಿದೆ
“ತ್ರೇತಾಯುಗದಲ್ಲಿ ಗುರು ಶಿಷ್ಯನಿಗೆ ಜಂಗಿಸಿ ವಿದ್ಯೆ ಕಲಿಸಿದರೆ ಮಹಾ ಪ್ರಸಾದವೆಂದನಯ್ಯ, ದ್ವಾಪರದಲ್ಲಿ ಶಿಷ್ಯನಿಗೆ ದಂಡಿಸಿ ವಿದ್ಯೆ ಕಲಿಸಿದ, ಕಲಿಯುಗದಲ್ಲಿ ವಂದಿಸಿ ವಿದ್ಯೆ ಕಲಿಸಬೇಕಾಗಿದೆ. ಇತ್ತೀಚೆಗೆ ನಮ್ಮ ಶಾಲೆಯಲ್ಲಿ ಓದುವ ಮಗುವಿನ ತಾಯಿಯೊಬ್ಬರು ತಮ್ಮ ಮಗುವಿಗೆ ಸರಿಯಾಗಿ ಓದುತ್ತಿಲ್ಲ ಮನೆ ಬಿಟ್ಟು ಹೋಗು ಎಂದಿದ್ದಾರೆ. ಅಷ್ಟಕ್ಕೆ ಶಾಲೆಯಿಂದ ಹೊರಟ ಮಗು ಮನೆಗೆ ಹೋಗಿಲ್ಲ. ಆನಂತರ ಕೇಳಿದಾಗ ನೀನು ಮನೆ ಬಿಟ್ಟು ಹೋಗು ಎಂದಿದ್ದಕ್ಕೆ ಹೋದೆ ಎಂದಿದೆ. ಮಕ್ಕಳು ಸೂಕ್ಷ್ಮವಾಗಿ ಬೆಳೆಯುತ್ತಿದ್ದಾರೆ” ಎಂದರು.
“ಈ ದೇಶಕ್ಕೆ ನಾಲ್ಕು ಆಧಾರ ಸ್ತಂಭ. ಕೃಷಿಕ, ಸೈನಿಕ, ಕೃಷಿಕ, ಶಿಕ್ಷಕ. ನಮ್ಮ ಕಾಲದಲ್ಲಿ ಕಷ್ಟಪಟ್ಟು ಓದಿಸಿ ಬರೆಸುತ್ತಿದ್ದರು. ನಂತರ ಕ್ಯಾಲ್ಕುಲೇಟರ್, ಕಂಪ್ಯೂಟರ್ ಆವಿಷ್ಕಾರವಾಯಿತು. ಈಗ ಮೊಬೈಲ್ ಬಂದ ಪರಿಣಾಮ ಮಕ್ಕಳೇ ಶಿಕ್ಷಕರ ತಪ್ಪು ಹುಡುಕುವಂತಾಗಿದೆ. ಈಗ ಕಾಲ ಕೃತಕ ಬುದ್ದಿಮತ್ತೆ ಕಡೆ ಸಾಗುತ್ತಿದ್ದು ಮತ್ತೊಂದು ಹಂತ ತಲುಪಿದೆ” ಎಂದರು.
“ಮೊಬೈಲ್ ಫೋನ್ ಬಂದ ಮೇಲೆ ಉಪಯೋಗ ಎಷ್ಟಿದೇಯೋ ಕೆಟ್ಟ ಪರಿಣಾಮಗಳು ಅಷ್ಟೇ ಇವೆ. ಉತ್ತರ ಭಾರತಕ್ಕೆ ಹೋಲಿಸಿಕೊಂಡರೆ ನಮ್ಮಲ್ಲಿ ಉತ್ತಮ ಶಿಕ್ಷಣ ವ್ಯವಸ್ಥೆ ಇದೆ. ಬೆಂಗಳೂರಿನಲ್ಲಿ ಸುಮಾರು 25 ಲಕ್ಷ ಐಟಿ ಉದ್ಯೋಗಿಗಳಿದ್ದಾರೆ. ಕ್ಯಾಲಿಫೋರ್ನಿಯಾದಲ್ಲಿ 23 ಲಕ್ಷ ಇದ್ದಾರೆ. ಟಾಟಾ ಸಂಸ್ಥೆ, ಎಚ್ ಎಂಟಿ, ಬಿಇಎಲ್, ಬಿಇಎಂಎಲ್, ಇಸ್ರೋ ಹೀಗೆ ಅನೇಕ ಬೌದ್ದಿಕ ಸಂಸ್ಥೆಗಳು ಬೆಂಗಳೂರಿನಲ್ಲಿ ಪ್ರಾರಂಭವಾಗಿದ್ದು ನಮ್ಮ ಹೆಗ್ಗಳಿಕೆ” ಎಂದರು.
ಶಿಕ್ಷಕರ ಕ್ಷೇತ್ರದ ಚುನಾವಣೆ ಮೇಲೆ ಈಗಿನಿಂದಲೇ ಗಮನ ಹರಿಸಿ
“ಶಿಕ್ಷಣ ಕ್ಷೇತ್ರದ ಪರಿಷತ್ ಚುನಾವಣೆ ಮುಂದಿನ ವರ್ಷ ನಡೆಯಲಿದ್ದು, ಈ ತಿಂಗಳ ಒಳಗಾಗಿ ಅರ್ಜಿ ಕರೆಯಲಾಗುವುದು. ನಂತರ ಅಭ್ಯರ್ಥಿ ಆಯ್ಕೆ ಮಾಡಲಾಗುವುದು. ಜಿ.ಸಿ.ಚಂದ್ರಶೇಖರ್ ಅವರಿಗೆ ಇದರ ಜವಾಬ್ದಾರಿ ನೀಡಲಾಗಿದೆ. ನಾಲ್ಕು ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದ್ದು ಇದರ ಬಗ್ಗೆ ಹೆಚ್ಚು ಗಮನ ಹರಿಸಬೇಕು. ಇತ್ತೀಚೆಗೆ ಪುಟ್ಟಣ್ಣ ಸೇರಿದಂತೆ ಅನೇಕರು ಗೆದ್ದಿದ್ದಾರೆ” ಎಂದರು.
“ಶಿಕ್ಷಕರು ಹೊಸ ವಿಚಾರಗಳತ್ತ ಗಮನಹರಿಸಬೇಕು. ಎಐ ಈಗ ಎಲ್ಲವನ್ನು ನಿಯಂತ್ರಿಸುತ್ತಿದೆ. ಅದಕ್ಕೆ ತಕ್ಕಂತೆ ನೀವು ತಯಾರಿ ಮಾಡಿಕೊಳ್ಳಬೇಕು. ಸಮಾಜಕ್ಕೆ ನಾಲ್ಕು ಉತ್ತಮ ಪ್ರಜೆಗಳನ್ನು ತಯಾರು ಮಾಡಿದ ಆತ್ಮತೃಪ್ತಿ ನಿಮ್ಮಲ್ಲಿ ಇರಲಿ. ಗುರು ಗುರಿ ನೀಡುತ್ತಾನೆ. ಗುರಿ ತಲುಪಬೇಕಾದರೆ ಗುರು ಇರಬೇಕು” ಎಂದು ಹೇಳಿದರು.
ನನಗೆ ಮೂವರು ಹೆಂಡ್ತೀರು ಇಲ್ಲ, ಯಾರ ಜೊತೆ ಸಂಬಂಧನೂ ಇಟ್ಕೊಂಡಿಲ್ಲ: HDKಗೆ ಶಾಸಕ ಉದಯ್ ತಿರುಗೇಟು