ಬೆಂಗಳೂರು : “ಕೃಷ್ಣಾ ಮೇಲ್ದಂಡೆ ಯೋಜನೆಗೆ ಅಧಿಸೂಚನೆಗೆ ಒಮ್ಮೆ ಆಂಧ್ರ ಪ್ರದೇಶ ಮತ್ತೊಮ್ಮೆ ಮಹಾರಾಷ್ಟ್ರದವರು ಕೇಂದ್ರದ ಮೇಲೆ ಒತ್ತಡ ತಂದು ನಿಲ್ಲಿಸಿದರು” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹೇಳಿದರು.
ವಿಧಾನ ಪರಿಷತ್ತಿನ ಪ್ರಶ್ನೋತ್ತರ ಕಲಾಪದಲ್ಲಿ ಸದಸ್ಯ ಪಿ.ಎಚ್.ಪೂಜಾರ್ ಅವರು ಕೃಷ್ಣಾ ಮೇಲ್ದಂಡೆ ಯೋಜನೆಯ ಪ್ರಗತಿಯ ವಿಚಾರವಾಗಿ ಕೇಳಿದ ಪ್ರಶ್ನೆಗೆ ಉತ್ತರಿಸಿದರು.
“ಕೇಂದ್ರ ಜಲಶಕ್ತಿ ಸಚಿವರಾದ ಸಿ.ಆರ್.ಪಾಟೀಲ್ ಅವರು ಈ ಯೋಜನೆಯ ಪರವಾಗಿದ್ದು, ಇದಕ್ಕೆ ಅಧಿಸೂಚನೆ ಹೊರಡಿಸಲೇಬೇಕು ಎಂದು ಸಂಬಂಧಪಟ್ಟ ರಾಜ್ಯಗಳ ಸಭೆ ನಡೆಸಲು ಎರಡು ಬಾರಿ ಪ್ರಯತ್ನಿಸಿದರು. ಆದರೆ ಎರಡು ರಾಜ್ಯದವರು ದೂರವಾಣಿ ಕರೆ ಮಾಡಿ ನಿಲ್ಲಿಸಿದರು. ಕೇಂದ್ರ ಸಚಿವರನ್ನು ನಾನು, ಮುಖ್ಯಮಂತ್ರಿಯವರು ಹಾಗೂ ಕೇಂದ್ರ ಸಚಿವ ಸೋಮಣ್ಣ ಅವರು ಭೇಟಿಯಾಗಿ ಮನವಿ ಸಲ್ಲಿಸಿದ್ದೆವು” ಎಂದರು.
ಯೋಜನೆ ಜಾರಿಗೆ 2 ಲಕ್ಷ ಕೋಟಿ ಬೇಕು
“ಕೃಷ್ಣಾ ಮೇಲ್ದಂಡೆ ಯೋಜನೆ (3) ಜಾರಿಗೆ ರೂ.2 ಲಕ್ಷಕೋಟಿ ಬೇಕಾಗುತ್ತದೆ. ಇದು ಸಾಧ್ಯವಾಗುತ್ತದೆಯೇ? ಈ ಯೋಜನೆ ವಿಚಾರದಲ್ಲಿ ದೊಡ್ಡ ಹಗರಣವೇ ನಡೆಯುತ್ತಿದೆ. ಭೂಮಿ ಪರಿಹಾರ ವಿಚಾರದಲ್ಲಿ ವಕೀಲರುಗಳು ಹಣ ಮಾಡುತ್ತಿದ್ದಾರೆ ವಿನಃ ರೈತರಿಗೆ ಪರಿಹಾರ ದೊರೆಯುವುದಿಲ್ಲ. ಆದ ಕಾರಣಕ್ಕೆ ಪರಿಷತ್ ಸದಸ್ಯರಾದ ಪೂಜಾರ್ ಅವರು ಅಲ್ಲಿನ ರೈತರನ್ನು ಸಮಾಧಾನ ಪಡಿಸಿದರೆ ಹದಿನೈದು ದಿನಗಳಲ್ಲಿ ಒಂದು ತೀರ್ಮಾನಕ್ಕೆ ಬರಲು ಸಾಧ್ಯವಾಗುತ್ತದೆ” ಎಂದರು.
“ಸುಪ್ರೀಂ ಕೊರ್ಟಿನಿಂದ ಎಕರೆಗೆ 8- 10 ಕೋಟಿ ಪರಿಹಾರ ನೀಡಿ ಎಂದು ಆದೇಶವಾಗಿದೆ. ಇಷ್ಟು ಪರಿಹಾರ ಮೊತ್ತ ಬೆಂಗಳೂರಿನಲ್ಲಿಯೇ ಇಲ್ಲ. ಆದ ಕಾರಣಕ್ಕೆ ಕಂದಾಯ ಇಲಾಖೆಯಿಂದ ನೀರಾವರಿ ಇಲಾಖೆಗೆ ಭೂಮಿ ಹಸ್ತಾಂತರ ಕುರಿತ ವಿಚಾರವನ್ನು ಸಚಿವ ಸಂಪುಟದ ಮುಂದಿಡಲಾಗಿದೆ” ಎಂದರು.
“ಈಗಾಗಲೇ 75,563 ಎಕರೆ ಸಬ್ ಮರ್ಜ್ ಆಗಿದೆ. ಭೂ ಸ್ವಾಧೀನಕ್ಕೆ ಅಧಿಸೂಚನೆ ಹೊರಡಿಸಿರುವುದು 2,543 ಎಕರೆಗೆ ಮಾತ್ರ. ವಿವಿಧ ಹಂತಗಳಲ್ಲಿ ಅಧಿಸೂಚನೆ ಹೊರಡಿಸಿರುವ ಅಡಿ 29,568 ಎಕರೆ ಭೂಮಿಯಿದೆ. 43,452 ಎಕರೆ ಭೂಮಿಗೆ ಅಧಿಸೂಚನೆ ಹೊರಡಿಸಲು ಬಾಕಿ ಇದೆ. ಕಾಲುವೆಗಳ ನಿರ್ಮಾಣಕ್ಕೆ 51 ಸಾವಿರ ಎಕರೆ ಬೇಕಾಗಿದೆ. ಇದರಲ್ಲಿ 23 ಸಾವಿರ ಎಕರೆ ಭೂಸ್ವಾಧೀನಕ್ಕೆ ಅಧಿಸೂಚನೆ ಹೊರಡಿಸಲಾಗಿದೆ. ಆರ್.ಸಿ ಭೂಮಿಗೆ 6,467 ಎಕರೆ ಬೇಕಾಗಿದೆ ಇದರಲ್ಲಿ ಶೇ 50 ರಷ್ಟು ಎಂದರೆ 3,392 ಎಕರೆ ಸ್ವಾಧೀನ ಪಡಿಸಿಕೊಳ್ಳಲಾಗಿದೆ” ಎಂದು ತಿಳಿಸಿದರು.
ಶೀತ ವಾತಾವರಣ ತಡೆಯಲು 16.42 ಕೋಟಿ ವೆಚ್ಚ
ಸದಸ್ಯ ಸೂರಜ್ ರೇವಣ್ಣ ಅವರು ಹಾಸನ ಜಿಲ್ಲಾ ವ್ಯಾಪ್ತಿಯಲ್ಲಿ ಬರುವ ಹೇಮಾವತಿ ಹಾಗೂ ಯಗಚಿ ಶೀತಪೀಡಿತವಲ್ಲ ಎಂದು ಘೋಷಣೆಯಾಗಿರುವ ಗ್ರಾಮಗಳು ಯಾವುವು ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಶಿವಕುಮಾರ್ ಅವರು ಉತ್ತರಿಸಿದರು.
“ಈಗಾಗಲೇ ಶೀತ ವಾತಾವರಣ ತಡೆಯಲು 12 ಕಾಮಗಾರಿಗಳಿಗೆ 16.42 ಕೋಟಿ ವೆಚ್ಚ ಮಾಡಲಾಗಿದೆ. ಮತ್ತೊಂದು ಅಂದಾಜು ವರದಿ ಮಾಡಿಸಿ 27 ಕೋಟಿ ಬೇಕಾಗಿದೆ ಎಂದು ವರದಿ ಸಲ್ಲಿಸಿದ್ದಾರೆ. ನಾವು ಆರ್ಥಿಕ ಪರಿಸ್ಥಿತಿ ಅನುಗುಣವಾಗಿ ಈ ಬಗ್ಗೆ ಗಮನಹರಿಸುತ್ತೇವೆ” ಎಂದು ತಿಳಿಸಿದರು.
“ಈ ಹಿಂದೆ ಶಾಸಕರುಗಳು ಜಲಸಂಪನ್ಮೂಲ ಇಲಾಖೆಯಿಂದ ರಸ್ತೆ, ಸಮುದಾಯ ಭವನ ಬೇಕು ಎಂದು ಶಿಫಾರಸ್ಸು ಮಾಡುತ್ತಿದ್ದರು. ಈಗ ನಾನು ಅದನ್ನೆಲ್ಲಾ ನಿಲ್ಲಿಸಿದ್ದೇನೆ. ನಮ್ಮ ಇಲಾಖೆ ಹಣವನ್ನು ಕಾಲುವೆ ಅಭಿವೃದ್ಧಿ, ಪ್ರಮುಖ ಯೋಜನೆಗಳಿಗೆ ಮಾತ್ರ ಬಳಸುತ್ತಿದ್ದೇವೆ. ಈ ವಿಚಾರವಾಗಿಯೂ ಮತ್ತೊಂದು ವರದಿ ತರಿಸಿ ಗಮನಹರಿಸುತ್ತೇನೆ. ಸದಸ್ಯರು ಹೇಳಿರುವಂತೆ ನ್ಯಾಯಾಲಯದ ವಿಚಾರ ಪರಿಶೀಲನೆ ಮಾಡಲಾಗುವುದು. ಆನಂತರ ನಾವು ತೀರ್ಮಾನ ಮಾಡುತ್ತೇವೆ” ಎಂದು ತಿಳಿಸಿದರು.
ವಾಹನಗಳ ಬಾಕಿ ದಂಡದ ಮೊತ್ತದಲ್ಲಿ ಶೇ.50ರಷ್ಟು ರಿಯಾಯಿತಿ ನೀಡಿ ರಾಜ್ಯ ಸರ್ಕಾರ ಆದೇಶ