ಬೆಳಗಾವಿ : ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿಟ್ಟಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ SITಅಧಿಕಾರಿಗಳು 13ನೇ ಸ್ಥಳದಲ್ಲಿ ಅಸ್ತಿಪಂಜರ ಶೋಧ ಕಾರ್ಯ ನಡೆಸುತ್ತಿದೆ. ಧರ್ಮಸ್ಥಳ ಶ್ರದ್ಧಾ ಕೇಂದ್ರದ ವಿರುದ್ಧ ಅಪಪ್ರಚಾರ ನಡೆಸುತ್ತಿರುವ ಆರೋಪದ ಮೇಲೆ ರಾಜ್ಯಸಭಾ ಸದಸ್ಯ ಈರಣ್ಣಾ ಕಡಾಡಿ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅನಾಮಿಕ ವ್ಯಕ್ತಿಯನ್ನು ಕೂಡಲೇ ಬಂಧಿಸಿ, ಈ ‘ನಾಟಕ’ವನ್ನು ನಿಲ್ಲಿಸುವಂತೆ ಅವರು ಎಸ್ಐಟಿ ಮತ್ತು ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಕಳೆದ ಹಲವು ದಿನಗಳಿಂದ ಧರ್ಮಸ್ಥಳದ ಕುರಿತು ನಡೆಯುತ್ತಿರುವ ತನಿಖೆ ಹಾಗೂ ಚರ್ಚೆಗಳನ್ನು ಕಡಾಡಿ ಖಂಡಿಸಿದ್ದಾರೆ. ಕರ್ನಾಟಕದ ಶ್ರದ್ಧಾ ಕೇಂದ್ರದ ಮೇಲೆ ದಾಳಿ ನಡೆಯುತ್ತಿದೆ. ಅನಾಮಿಕ ವ್ಯಕ್ತಿಯನ್ನು ಕರೆದುಕೊಂಡು ಎಸ್ಐಟಿ ಎಷ್ಟು ದಿನ ನೆಲ ಅಗೆಯಲಿದೆ? ಈ ನಾಟಕವನ್ನು ತಕ್ಷಣ ನಿಲ್ಲಿಸಿ, ಆತನನ್ನು ಒದ್ದು ಒಳಗೆ ಹಾಕಬೇಕು ಎಂದು ಕಿಡಿ ಕಾರಿದ್ದಾರೆ.
ತನಿಖೆಯಿಂದ ಯಾವುದೇ ಫಲಿತಾಂಶ ಸಿಕ್ಕಿಲ್ಲ, ಎಸ್ಐಟಿ ರಚನೆ ಮಾಡಿ ಏನೂ ಆಗಲಿಲ್ಲ ಎಂದು ಸರ್ಕಾರ ರಾಜ್ಯದ ಜನರ ಕ್ಷಮೆ ಕೇಳಬೇಕು ಎಂದು ಕಡಾಡಿ ಒತ್ತಾಯಿಸಿದರು. ಪ್ರತಿದಿನ ಅನಾಮಿಕ ಹೊಸ ಕಥೆ ಕಟ್ಟುತ್ತಿದ್ದಾನೆ, ಆತನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಮತ್ತು ಧರ್ಮಸ್ಥಳಕ್ಕೆ ಆದ ಕಳಂಕವನ್ನು ತೊಡೆದು ಹಾಕಬೇಕು” ಎಂದು ಅವರು ಸರ್ಕಾರವನ್ನು ಒತ್ತಾಯಿಸಿದರು.