ಬೆಂಗಳೂರು: ಬೆಲೆ ಏರಿಕೆಯಿಂದ ತತ್ತರಿಸಿದ್ದ ಜನಸಾಮಾನ್ಯರಿಗೆ ನೆಮ್ಮದಿಯ ಸುದ್ದಿಯೊಂದು ಸಿಕ್ಕಿದ್ದು, ಸಗಟು ಮಾರುಕಟ್ಟೆಯಲ್ಲಿ ಅಕ್ಕಿ ಮತ್ತು ಬೇಳೆ ಕಾಳುಗಳ ದರ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿದೆ.
ಹೌದು, ಕಳೆದ ವರ್ಷದ ಉತ್ತಮ ಮುಂಗಾರು ಹಾಗೂ ಕೇಂದ್ರ ಸರ್ಕಾರ ಕೈಗೊಂಡ ಕ್ರಮಗಳು ಈಗ ಫಲ ನೀಡಲು ಆರಂಭಿಸಿವೆ. ಚಿಲ್ಲರೆ ವರ್ತಕರು ಕೂಡ ಬೆಲೆ ಇಳಿಕೆಯ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸಲು ಮುಂದಾಗಿದ್ದಾರೆ.
ತೊಗರಿಬೇಳೆ, ಉದ್ದಿನಬೇಳೆ ಜತೆ ಇತರ ಬೇಳೆಕಾಳುಗಳು ಹಾಗೂ ಸ್ಟೀಮ್ ರೈಸ್ ದರ ಗಣನೀಯವಾಗಿ ಇಳಿಕೆಯಾಗಿದೆ. ಕೇಂದ್ರ ಸರಕಾರ ಕೆಲವು ಅನ್ಯ ದೇಶಗಳಿಂದ ತೊಗರಿಯನ್ನು ಆಮದು ಮಾಡಿಕೊಳ್ಳುತ್ತಿದೆ. ಇದರಿಂದ ದೇಶೀಯ ಮಾರುಕಟ್ಟೆಯಲ್ಲಿ ತೊಗರಿಬೇಳೆ ದರ ಕಡಿಮೆಯಾಗಿದೆ. ಕೇಂದ್ರ ಸರಕಾರವು ಕಳೆದ ಅಕ್ಟೋಬರ್ನಲ್ಲಿಯೇ ಅಕ್ಕಿ ಆಮದು-ರಫ್ತಿನ ಮೇಲೆ ವಿಧಿಸಿದ್ದ ನಿರ್ಬಂಧ ತೆರವುಗೊಳಿಸಿದೆ. ಅದರಿಂದಾಗಿ ನೆರೆಯ ಮ್ಯಾನ್ಮಾರ್, ಥಾಯ್ಲೆಂಡ್ ಮೊದಲಾದ ದೇಶಗಳಿಂದ ಅಕ್ಕಿ ಆಮದು ಹೆಚ್ಚಿದೆ.
ಏಪ್ರಿಲ್ ನಲ್ಲಿ 180 ರಿಂದ 200 ರೂ. ಇದ್ದ ತೊಗರಿ ಬೆಳೆ ದರ 130 ರಿಂದ 150 ರೂ. ಇಳಿಕೆಯಾಗಿದೆ. 110 ರಿಂದ 120 ಇದ್ದ ಕಡಲೆ ಬೇಳೆ ದರ 103 ರೂ. ಆಗಿದೆ. 170 ರಿಂದ 190 ರೂ.ವರೆಗೆ ಇದ್ದ ಉದ್ದಿನ ಬೇಳೆ ದರ 150 ರೂ.ಗೆ ಇಳಿಕೆಯಾಗಿದೆ. 90 ರಿಂದ 100 ರೂ. ಇದ್ದ ಕಡಲೆ ಕಾಳು ದರ 88 ರೂ.ಗೆ ಇಳಿಕೆಯಾಗಿದೆ.
62 ರಿಂದ 65 ರೂ.ವರೆಗೆ ಗ್ರೇಡ್ -1 ಸ್ಟೀಮ್ ಅಕ್ಕಿದರ 55 ರಿಂದ 60 ರೂ.ಗೆ ಕಡಿಮೆಯಾಗಿದೆ. 55 ರಿಂದ 57 ರೂ. ಇದ್ದ ಗ್ರೇಡ್ -2 ಸ್ಟೀಮ್ ಅಕ್ಕಿ ದರ 50 ರೂ.ಗೆ ಇಳಿಕೆಯಾಗಿದೆ. 48 ರಿಂದ 50 ರೂ. ಇದ್ದ ಗ್ರೇಡ್ -3 ಸ್ಟೀಮ್ ಅಕ್ಕಿ ದರ 42- 45 ರೂ.ಗೆ ಇಳಿಕೆಯಾಗಿದೆ.
ಕಳೆದ ವರ್ಷ ಭತ್ತ, ಬೇಳೆಕಾಳು ಉತ್ಪಾದನೆ ಶೇಕಡ 20ರಷ್ಟು ಹೆಚ್ಚಳವಾಗಿದ್ದು, ಪ್ರಸ್ತುತ ಮಾರುಕಟ್ಟೆಯಲ್ಲಿ ಅಕ್ಕಿ, ಬೇಳೆ ಕಾಳು ದರ ಶೇಕಡ 15 ರಿಂದ 20ರಷ್ಟು ಕಡಿಮೆಯಾಗಿದೆ. ತೊಗರಿ ಬೇಳೆ, ಉದ್ದಿನ ಬೇಳೆ ಜೊತೆಗೆ ಇತರೆ ಬೇಳೆ ಕಾಳುಗಳು, ಸ್ಟೀಮ್ ಅಕ್ಕಿ ದರ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿದೆ.