ಮೈಸೂರು: ಪ್ರಯಾಣಿಕರ ಅನುಕೂಲತೆ ಮತ್ತು ಸ್ಮಾರ್ಟ್ ನಿಲ್ದಾಣ ಯೋಜನೆಗೆ ಬೆಂಬಲ ನೀಡುವ ಉದ್ದೇಶದಿಂದ, ನೈಋತ್ಯ ರೈಲ್ವೆಯ ಮೈಸೂರು ವಿಭಾಗವು ಕ್ಯೂಆರ್ ಕೋಡ್ ಆಧಾರಿತ ಡಿಜಿಟಲ್ ನಕ್ಷೆ ಮತ್ತು ಸಂಚರಣೆ ವ್ಯವಸ್ಥೆಯಾದ ‘ಮಾರ್ಗದರ್ಶಕ್’ ಅನ್ನು ಮೈಸೂರು ರೈಲು ನಿಲ್ದಾಣದಲ್ಲಿ ಪ್ರಾರಂಭಿಸಿದೆ.
ಆಧುನಿಕ ಹಾಗೂ ಬಳಕೆದಾರ ಸ್ನೇಹಿ ಈ ವ್ಯವಸ್ಥೆಯನ್ನು ಇಂದು ವಿಭಾಗೀಯ ರೈಲ್ವೆ ವ್ಯವಸ್ಥಾಪಕರಾದ ಶ್ರೀ ಮುದಿತ್ ಮಿತ್ತಲ್ ಅವರಿಂದ ಹಿರಿಯ ಅಧಿಕಾರಿಗಳು ಹಾಗೂ ಸಿಬ್ಬಂದಿಯ ಸಮ್ಮುಖದಲ್ಲಿ ಉದ್ಘಾಟಿಸಲಾಯಿತು. ‘ಮಾರ್ಗದರ್ಶಕ್’ ಮೂಲಕ ಪ್ರಯಾಣಿಕರು ಗೂಗಲ್ ಮ್ಯಾಪ್ ಬಳಸುವ ರೀತಿಯಲ್ಲಿ ನಿಲ್ದಾಣದ ಒಳಾಂಗಣವನ್ನು ಸುಲಭವಾಗಿ ಸಂಚರಣೆ ಮಾಡಬಹುದು.
‘ಮಾರ್ಗದರ್ಶಕ್’ದ ಪ್ರಮುಖ ವೈಶಿಷ್ಟ್ಯಗಳು:
* 24/7 ಸ್ವಯಂ ಸೇವೆ: ಮಾಹಿತಿಗಾಗಿ ಯಾರನ್ನೂ ಕೇಳುವ ಅಗತ್ಯವಿಲ್ಲ – ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ, ಸಂಚರಣೆ ಮಾಡಬಹುದು.
* ತಿರುವು ಸಂಚರಣೆ: ನಿಮ್ಮ ಸ್ಥಳದಿಂದ ಪ್ಲಾಟ್ಫಾರ್ಮುಗಳು, ಮೆಟ್ಟಿಲು ಸೇವೆಗಳು, ಕುಡಿಯುವ ನೀರಿನ ಕೇಂದ್ರಗಳು, ನಿರೀಕ್ಷಣಾ ಕೊಠಡಿಗಳು, ಆಹಾರ ಮಳಿಗೆಗಳು ಮುಂತಾದ ಸ್ಥಳಗಳ ದಿಕ್ಕುಗಳನ್ನು ತಿಳಿಯಬಹುದು.
* ಬಹುಭಾಷೆ: ನಿಮ್ಮ ಇಚ್ಛಿತ ಭಾಷೆಯಲ್ಲಿ ಸಂಚರಣೆ.
* ಮೊಬೈಲ್ ಸ್ನೇಹಿ: ನಿಲ್ದಾಣದಾದ್ಯಂತ ಇರಿಸಿರುವ ಕ್ಯೂಆರ್ ಕೋಡ್ಗಳನ್ನು ಸ್ಕ್ಯಾನ್ ಮಾಡಿ ನಿಮ್ಮ ಮೊಬೈಲ್ನಲ್ಲಿ ನಕ್ಷೆ ನೋಡಬಹುದು.
* ಜನಸಂದಣಿಯ ನಿಯಂತ್ರಣ: ಗರಿಷ್ಠ ಅವಧಿಯ ವೇಳೆ ಪ್ರಯಾಣಿಕರ ಸಂಚಾರವನ್ನು ಸುಗಮಗೊಳಿಸಲು ಸಹಕಾರಿಯಾಗುತ್ತದೆ.
ವೈಶಿಷ್ಟ್ಯಪೂರ್ಣವಾಗಿ ಇರಿಸಿರುವ ಕ್ಯೂಆರ್ ಕೋಡ್ಗಳು ಮತ್ತು ಬಳಕೆದಾರ ಸ್ನೇಹಿ ಇಂಟರ್ಫೇಸ್ ಮೂಲಕ, ‘ಮಾರ್ಗದರ್ಶಕ್’ ಪ್ರಯಾಣಿಕರಿಗೆ ತಂತ್ರಜ್ಞಾನ ಆಧಾರಿತ ಅನುಭವವನ್ನು ಖಚಿತಪಡಿಸುತ್ತದೆ ಎಂಬುದಾಗಿ ನೈರುತ್ಯ ರೈಲ್ವೆಯ ಮೈಸೂರು ವಿಭಾಗದ ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕ ಮತ್ತು ಸಾರ್ವಜನಿಕ ಸಂಪರ್ಕಾಧಿಕಾರಿ ಗಿರೀಶ ಧರ್ಮರಾಜ ಕಲಗೊಂಡ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಾಗರ ತಾಲ್ಲೂಕಿನ ಜನತೆ ಗಮನಕ್ಕೆ: ನಾಳೆ ಈ ಪ್ರದೇಶಗಳಲ್ಲಿ ‘ವಿದ್ಯುತ್ ವ್ಯತ್ಯಯ’ | Power Cut
ಕರ್ನಾಟಕ ಹೈಕೋರ್ಟ್ ನಲ್ಲಿ ಕನ್ನಡದಲ್ಲೇ ವಿಚಾರಣೆ ನಡೆಸಲು ಪುರುಷೋತ್ತಮ ಬಿಳಿಮಲೆ ಆಗ್ರಹ